ನ್ಯಾಯಾಧೀಶರಿಂದಲೇ ದೈಹಿಕ ಕಿರುಕುಳ, ಪೊಲೀಸರಿಗೆ ದೂರು ಕೊಟ್ಟ ಪತ್ನಿ!
ಉಡುಪಿ ಡಿಸೆಂಬರ್ 08: ಅಪರಾಧಿಗಳಿಗೆ ಶಿಕ್ಷೆ ನೀಡಿ ಅನ್ಯಾಯಕ್ಕೆ ಒಳಗಾದವರಿಗೆ ನ್ಯಾಯ ಒದಗಿಸುವ ನ್ಯಾಯಾಧೀಶರೇ ತನ್ನ ಪತ್ನಿಗೆ ನಿರಂತರ ದೈಹಿಕ ಮತ್ತು ಮಾನಸಿಕ ಹಿಂಸೆ ನೀಡಿದ ಘಟನೆ ಉಡುಪಿಯಲ್ಲಿ ಬೆಳಕಿಗೆ ಬಂದಿದೆ.
ಉಡುಪಿ ನ್ಯಾಯಾಲಯದ ನಾಲ್ಕನೇ ಜ್ಯುಡಿಷಿಯಲ್ ಮ್ಯಾಜೆಸ್ಟ್ರೇಟ್ ಅಶೋಕ್ ತಿಮ್ಮಯ್ಯ ಮೇಲೆ ಅವರ ಪತ್ನಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ನಿರಂತರ ದೈಹಿಕ ಮತ್ತು ಮಾನಸಿಕ ಹಿಂಸೆ ನೀಡಿದ ಬಗ್ಗೆ ನಗರ ಠಾಣೆಯಲ್ಲಿ ದೂರು ದಾಖಲಾಗಿದೆ.
ಈ ಹಿಂದೆ ಅಶೋಕ್ ಅವರು ಪತ್ನಿಗೆ ಚಿತ್ರಹಿಂಸೆ ಕೊಟ್ಟ ಪರಿಣಾಮ ಹಲ್ಲೆಗೊಳಗಾಗಿ ಆಸ್ಪತ್ರೆಗೆ ದಾಖಲಾಗಿದ್ದರು. ಬಳಿಕ ಹಿರಿಯ ನ್ಯಾಯಾಧೀಶರ ಸಂಧಾನದಿಂದ ಪ್ರಕರಣ ಶಾಂತವಾಗಿತ್ತು. ಆದರೆ ಅಶೋಕ್ ಮತ್ತೆ ಚಿತ್ರಹಿಂಸೆ ನೀಡುವುದನ್ನು ಮುಂದುವರಿಸಿ ಮತ್ತೆ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ.
ನ್ಯಾಯಾಧೀಶೆಗೆ ನಿಂದನೆ: ಫೋರಂ ಮಾಲ್ ಸೆಕ್ಯುರಿಟಿ ಸೇರಿ ಇಬ್ಬರ ಬಂಧನ
ಇವರದು 6 ವರ್ಷದ ದಾಂಪತ್ಯ. ಎಳೆಯ ವಯಸ್ಸಲ್ಲೇ ತಂದೆಯನ್ನು ಕಳೆದುಕೊಂಡ ವರಲಕ್ಷ್ಮಿಗೆ ತಾಯಿ ಬಿಟ್ಟರೆ ಬೇರ್ಯಾರೂ ಇಲ್ಲ. ತವರು ಕಡೆಯಿಂದ ಸ್ವಲ್ಪ ಆಸ್ತಿಯಿದೆ. ಈ ಆಸ್ತಿಗಾಗಿಯೂ ಕೆಲವೊಮ್ಮೆ ಗಲಾಟೆ ನಡೆದಿದೆ. ಈಕೆಯ ಚಿನ್ನವನ್ನೆಲ್ಲಾ ಪತಿ ತೆಗೆದು ಮಾರಿದ್ದಾರೆ ಎಂದು ಆರೋಪಿಸಲಾಗಿದೆ.
ಈ ನರಕದಲ್ಲಿ ಬದುಕಲು ಸಾಧ್ಯವಿಲ್ಲ
"ಅಶೋಕ್ ಪ್ರತಿದಿನ ಹೊಡೆದು ಹಿಂಸೆ ನೀಡುತ್ತಾರೆ. ಪುಟ್ಟ ಮಗುವಿದ್ದು ಅದರ ಬಗೆಗೂ ಕಾಳಜಿಯಿಲ್ಲ. ಡೈವೋರ್ಸ್ ಗಾಗಿ ಒತ್ತಾಯ ಮಾಡ್ತಾರೆ. ಪ್ರತಿದಿನ ಹಲ್ಲೆ ನಡೆಸಿ ಹೈರಾಣಾಗಿಸಿದ್ದಾರೆ. ಹಾಗಾಗಿ ನವೆಂಬರ್ 15 ರಂದು ಉಡುಪಿ ಮಹಿಳಾ ಠಾಣೆಯಲ್ಲಿ ದೂರು ನೀಡಿದ್ದೇನೆ. ನನ್ನ ಬಗ್ಗೆ ಸಹಾನುಭೂತಿ ಇದ್ದರೂ ಪೊಲೀಸರು ಎಫ್ ಐ ಆರ್ ದಾಖಲಿಸಿಲ್ಲ. ಅನೇಕ ಬಾರಿ ಹಿರಿಯ ನ್ಯಾಯಾಧೀಶರು ಸಂಧಾನ ಪ್ರಯತ್ನ ನಡೆಸಿ ಸಹಕರಿಸಿದ್ದಾರೆ. ಆದರೂ ಪತಿಯ ವರ್ತನೆ ಬದಲಾಗಿಲ್ಲ, ಇನ್ನು ಈ ನರಕದಲ್ಲಿ ಬದುಕಲು ಸಾಧ್ಯವಿಲ್ಲ" ಅಂತಾರೆ ವರಲಕ್ಷ್ಮಿ. ಸದ್ಯ ತಾಯಿಯ ಜೊತೆಗೆ ಉಡುಪಿಯಲ್ಲಿರುವ ಪತಿಯ ಫ್ಲಾಟ್ ನಲ್ಲೇ ಇದ್ದಾರೆ. ಆದರೆ ದೂರು ನೀಡಿದಾಗಿನಿಂದ ನ್ಯಾಯಾಧೀಶರು ಮನೆಗೆ ಬಂದಿಲ್ಲ. ಪ್ರತ್ಯೇಕವಾಗಿ ಉಳಿದಿದ್ದಾರೆ.
ಸುಪ್ರೀಂಕೋರ್ಟ್ ಕಿವಿ ಹಿಂಡಿದ ನ್ಯಾಯಮೂರ್ತಿ ಕುರಿಯನ್ ಜೋಸೆಫ್
ಆಸ್ತಿ ನೀಡುವಂತೆ ಹಿಂಸೆ
ಅಶೋಕ್ ಮೂಲತಃ ಚನ್ನ ಪಟ್ಟಣದವರಾಗಿದ್ದು, 6 ವರ್ಷಗಳ ಹಿಂದೆ ಕುಣಿಗಲ್ ನ ವರಲಕ್ಷ್ಮೀ ಎಂಬುವವರನ್ನು ವಿವಾಹವಾದರು. ವರಲಕ್ಷ್ಮೀ ಒಬ್ಬಳೇ ಮಗಳಾಗಿದ್ದು ಚಿಕ್ಕಂದಿನಲ್ಲಿ ತಂದೆಯನ್ನು ಕಳೆದುಕೊಂಡಿದ್ದರು. ವರಲಕ್ಷ್ಮಿಯೂ ಲಾ ಓದಿ ವಕೀಲಿ ವೃತ್ತಿ ಮಾಡುತ್ತಿದ್ದರು. ಅವರು ಅವಿಭಕ್ತ ಕುಟುಂಬದಲ್ಲಿ ವಾಸಿಸುತ್ತಿದ್ದರು. ವರಲಕ್ಷ್ಮೀ ತಾಯಿಗೆ ಮೈಸೂರಿನಲ್ಲಿ ಆಸ್ತಿ ಇದ್ದು ಅದನ್ನು ತನಗೆ ನೀಡುವಂತೆ ಅಶೋಕ್ ಹಿಂಸೆ ನೀಡುತ್ತಿದ್ದರು ಎಂದು ಅರೋಪಿಸಲಾಗಿದೆ. ಮದುವೆ ಆದ ಕೇವಲ ಕೆಲವೇ ದಿನಗಳಲ್ಲಿ ಅಶೋಕ್ ಪತ್ನಿಯ ಮೇಲೆ ಹಲ್ಲೆ ಆರಂಭಿಸಿದ್ದರು ಎಂದು ಆರೋಪಿಸಲಾಗಿದ್ದು ಮದುವೆ ಆದಾಗ ವಕೀಲರಾಗಿದ್ದ ಅಶೋಕ ಕಳೆದ ವರ್ಷ ನ್ಯಾಯಾಧೀಶರಾಗಿ ನಿಯುಕ್ತಿಗೊಂಡಿದ್ದರು.
ಇತಿಹಾಸದಲ್ಲಿ ಮೊದಲ ಬಾರಿಗೆ ಸುಪ್ರಿಂ ನ್ಯಾಯಮೂರ್ತಿಗಳಿಂದ ಪತ್ರಿಕಾಗೋಷ್ಠಿ
ಒಂದು ಸುತ್ತು ಕೌನ್ಸಿಲಿಂಗ್
ಮದುವೆ ಆದ ಹೊಸದರಲ್ಲಿ ಬೆಂಗಳೂರಿನಲ್ಲಿ ವಕೀಲಿ ವೃತ್ತಿ ನಡೆಸುತ್ತಿದ್ದ ಅಶೋಕ ನಂತರ ನ್ಯಾಯಾಧೀಶರಾಗಿ ನಿಯುಕ್ತಿಗೊಂಡರು. ನಂತರ ಉಡುಪಿಗೆ ನ್ಯಾಯಾಧೀಶರಾಗಿ ವರ್ಗಾವಣೆ ಗೊಂಡಿದ್ದರು. ದಿನ ಕಳೆದಂತೆ ಅಶೋಕನ ಚಿತ್ರಹಿಂಸೆ ದಿನದಿಂದ ದಿನಕ್ಕೆ ಹೆಚ್ಚಾಗತೊಡಗಿತು ಎಂದು ಪತ್ನಿ ವರಲಕ್ಷ್ಮಿ ಆರೋಪಿಸಿದ್ದಾರೆ. ಅಶೋಕ ನಡೆಸಿದ ಹಲ್ಲೆಯ ಪರಿಣಾಮ ಈಗಲೂ ವರಲಕ್ಷ್ಮಿಯ ತಲೆ ನೋವು ಕಮ್ಮಿಯಾಗಿಲ್ಲ. ಸಾಯಬೇಕೆಂದು ತೀರ್ಮಾನಿಸಿದ್ರೂ ತಾನು ಹೇಗಾದ್ರೂ ಮಾಡಿ ತನ್ನ ಬದುಕಿಗೆ ತನಗಾದ ಅನ್ಯಾಯದ ವಿರುದ್ಧ ಹೋರಾಡಬೇಕೆಂದು ನಿರ್ಧರಿಸಿದ್ದಾರೆ. ಅದರಂತೆ ನವೆಂಬರ್15 ರಂದು ದೂರು ದಾಖಲಾಗಿದ್ದು ಪೋಲೀಸರ ನಿರ್ದೇಶನದಂತೆ ಒಂದು ಸುತ್ತು ಕೌನ್ಸಿಲಿಂಗ್ ನಡೆಸಲಾಗಿದೆ.
ನ್ಯಾಯದೇವತೆಯೇ ತೀರ್ಮಾನಿಸಬೇಕು
ಅಷ್ಟೊಂದು ಗೌರವಾನ್ವಿತ ಹುದ್ದೆಯಲ್ಲಿರುವ ವ್ಯಕ್ತಿಯ ಬಗ್ಗೆ ಈ ರೀತಿಯ ಸುದ್ದಿ ಹೇಳೋಕೆ ಮನಸ್ಸಿಲ್ಲ. ಆದರೆ ಅವರ ಪತ್ನಿ ಕಣ್ಣೀರು ಹಾಕುತ್ತಲೇ ನ್ಯಾಯಕ್ಕಾಗಿ ಅಂಗಲಾಚುವುದು ನೋಡಿದರೆ, ಯಾವುದೇ ಮನಸ್ಸು ಕರಗದೇ ಇರಲು ಸಾಧ್ಯವಿಲ್ಲ. ಈ ಪ್ರಕರಣ ನೋಡಿದ್ರೆ, ನ್ಯಾಯದೇವತೆಯೇ ಕಣ್ತೆರೆದು ಈ ಪ್ರಕರಣವನ್ನು ತೀರ್ಮಾನ ಮಾಡ್ಬೇಕು ಅನಿಸದೆ ಇರುವುದಿಲ್ಲ.