ಮಠಕ್ಕೆ ಮುತ್ತಿಗೆ ಹಾಕಿದರೆ ಉಪವಾಸ ಮಾಡ್ತೀನಿ: ಪೇಜಾವರ ಶ್ರೀ
ಉಡುಪಿ, ಅಕ್ಟೋಬರ್ 14: ಉಡುಪಿಯ ಕೃಷ್ಣ ಮಠಕ್ಕೆ ಮುತ್ತಿಗೆ ಹಾಕಿದರೆ ಅನಿರ್ದಿಷ್ಟಾವಧಿ ಉಪವಾಸ ಮಾಡುತ್ತೇವೆ ಎಂದು ಪೇಜಾವರ ಶ್ರೀ ವಿಶ್ವೇಶ ತೀರ್ಥ ಸ್ವಾಮೀಜಿ ಹೇಳಿದ್ದಾರೆ. ಮಾಧ್ಯಮದವರ ಜತೆ ಗುರುವಾರ ಮಾತನಾಡಿದ ಅವರು, 'ಉಡುಪಿ ಚಲೋ' ಸಮಾವೇಶದಲ್ಲಿ ಮಠಕ್ಕೆ ಮುತ್ತಿಗೆ ಹಾಕುವುದಾಗಿ ಹೇಳಿದ್ದಾರೆ. ಮಠಕ್ಕೆ ರಕ್ಷಣೆ ನೀಡುವುದು ಸರಕಾರದ ಕರ್ತವ್ಯ ಎಂದು ಹೇಳಿದ್ದಾರೆ.
ಗೋ ರಕ್ಷಕರಿಂದ ಆಗುತ್ತಿರುವ ಹಿಂಸಾಚಾರ ವಿರೋಧಿಸಿ ಈ ಸಮಾವೇಶ ಹಮ್ಮಿಕೊಳ್ಳಲಾಗಿತ್ತು. ಅಲ್ಲಿ ಅನಗತ್ಯವಾಗಿ ಮಠದ ವಿಷಯ ತಂದಿದ್ದಾರೆ. ಅಂತಹ ಹಿಂಸಾಚಾರಕ್ಕೆ ನಮ್ಮ ವಿರೋಧವಿದೆ ಎಂದು ಈಗಾಗಲೇ ತಿಳಿಸಿದ್ದೇವೆ ಎಂದಿದ್ದಾರೆ.['ತುಳುನಾಡ್ ತಿರ್ಗಾಟದ ತೇರ್'ಗೆ ಪೇಜಾವರ ಶ್ರೀ ಸ್ವಾಗತ]
ಪೇಜಾವರ ಸ್ವಾಮೀಜಿ ಮೆದುಳನ್ನು ಸ್ವಚ್ಛಗೊಳಿಸಬೇಕು ಎಂದು ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ದಿನೇಶ್ ಅಮಿನ್ ಮಟ್ಟು ಹೇಳಿದ್ದಾರೆ. ಲಿಂಗ ದೀಕ್ಷೆ ಪಡೆಯದವರ ಜತೆ ಭೋಜನ ಮಾಡುವುದು ಏಳು ಜನ್ಮಗಳ ನರಕಕ್ಕೆ ಕಾರಣವಾಗುತ್ತದೆ ಎಂದು ಬಸವಣ್ಣ ಹೇಳಿದ್ದರು. ಅದಕ್ಕೆ ಸಂಬಂಧಿಸಿದ ವಚನವನ್ನು ಉದಾಹರಣೆ ನೀಡಬಲ್ಲೆ. ಹಾಗಿದ್ದರೆ ಬಸವಣ್ಣನವರ ಮೆದುಳನ್ನೂ ಅಮಿನ್ ಮಟ್ಟು ಸ್ವಚ್ಛಗೊಳಿಸುವರೆ ಎಂದು ಪೇಜಾವರ ಶ್ರೀಗಳು ಪ್ರಶ್ನಿಸಿದರು.
ಉಡುಪಿಯ ಮಠದಲ್ಲಿ ದಲಿತರು, ಹಿಂದುಳಿದವರು, ಬ್ರಾಹ್ಮಣರು ಒಂದೇ ಪಂಕ್ತಿಯಲ್ಲಿ ಊಟ ಮಾಡುತ್ತಿದ್ದಾರೆ. ಕೆಲವು ಸಂಪ್ರದಾಯವಾದಿ ಬ್ರಾಹ್ಮಣರ ಅಪೇಕ್ಷೆಯ ಅನುಸಾರ ಪ್ರತ್ಯೇಕ ಭೋಜನ ವ್ಯವಸ್ಥೆ ಮಾಡಲಾಗುತ್ತಿದೆ ಎಂದಿದ್ದಾರೆ.[ಪೇಜಾವರ ಶ್ರೀ ಕನಕರ ಚಿನ್ನದ ಪ್ರತಿಮೆ ಮಾಡಿಸಿ ಕೃಷ್ಣ ದೇಗುಲದಲ್ಲಿಡಲಿ]
ಶೃಂಗೇರಿ, ಕುಕ್ಕೆ ಸುಬ್ರಹ್ಮಣ್ಯ, ಧರ್ಮಸ್ಥಳದಲ್ಲಿ ಈ ರೀತಿ ವ್ಯವಸ್ಥೆಯಿದೆ. ಆದರೆ ಉಡುಪಿ ಮಠದ ಬಗ್ಗೆ ಆಕ್ಷೇಪ ಏಕೆ? ಕೋಮು ಸೌಹಾರ್ದದ ಹೆಸರಿನಲ್ಲಿ ದಲಿತರು, ಮುಸ್ಲಿಮರನ್ನು ಬುದ್ಧಿಜೀವಿಗಳು ಎತ್ತಿಕಟ್ಟುತ್ತಿದ್ದಾರೆ ಎಂದು ಆರೋಪಿಸಿದರು.
ಅಸ್ಪೃಶ್ಯತೆ ನಿವಾರಣೆಗಾಗಿ ದಶಕಗಳಿಂದ ಯತ್ನಿಸುತ್ತಿದ್ದೇವೆ. ದಲಿತರ ಕೇರಿಗಳಿಗೆ ಭೇಟಿ ನೀಡುತ್ತಿದ್ದೇನೆ. ಅಲ್ಲಿ ಭಕ್ತರು ಪ್ರೀತಿಯಿಂದ ಪಾದ ತೊಳೆದರೆ ತಪ್ಪೇನಿದೆ ಎಂದು ಪ್ರಶ್ನಿಸಿದರು.