ಪಂಚಕರ್ಮ, 'ಪಂಚ' ತಂತ್ರದ ಜೊತೆ ಸಮರೋಪಾದಿ ಕೆಲಸ ಮಾಡಿ:ಸಿಎಂಗೆ ಕುಟುಕಿದ ಕೋಟ
ಉಡುಪಿ, ಮೇ 10: ರಾಜ್ಯ ಎದುರಿಸುತ್ತಿರುವ ಭೀಕರ ಬರ ಪರಿಸ್ಥಿತಿಯನ್ನು ನಿಭಾಯಿಸುವಲ್ಲಿ ಸರ್ಕಾರ ಸಂಪೂರ್ಣ ವಿಫಲವಾಗಿದೆ ಎಂದು ವಿಧಾನ ಪರಿಷತ್ ವಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ ಆರೋಪಿಸಿದರು.
ಉಡುಪಿಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಬರ ಪರಿಹಾರಕ್ಕೆ ಕ್ರಮ ಕೈಗೊಳ್ಳುವಂತೆ ಹೈಕೋರ್ಟ್ ರಾಜ್ಯ ಸರಕಾರಕ್ಕೆ ಆದೇಶ ನೀಡಿದೆ. ಆದರೆ ರಾಜ್ಯ ಸರಕಾರ ಮಾತ್ರ ಹೈಕೋರ್ಟ್ ಆದೇಶಕ್ಕೆ ಕ್ಯಾರೇ ಎನ್ನದೆ ನಿರ್ಲಕ್ಷ್ಯ ತೋರುತ್ತಿದೆ ಎಂದು ಕಿಡಿಕಾರಿದರು.
ಕುಮಾರಸ್ವಾಮಿ ಸಿಎಂ ಕುರ್ಚಿಯಲ್ಲಿ ಕುಳಿತುಕೊಳ್ಳಲು ಅರ್ಹರಲ್ಲ: ಕೋಟ ಶ್ರೀನಿವಾಸ್ ಪೂಜಾರಿ
ಇಂತಹ ಕೆಟ್ಟ ಬೇಜವಾಬ್ದಾರಿ ಸರ್ಕಾರ ಈ ಹಿಂದೆ ನೋಡಿರಲಿಲ್ಲ. ಬರ ಪರಿಸ್ಥಿತಿಯಿಂದ ರಾಜ್ಯದ ಜನತೆ ಕಂಗೆಟ್ಟಿ, ದಕ್ಷಿಣ ಕನ್ನಡ, ಉಡುಪಿ ಸೇರಿದಂತೆ ರಾಜ್ಯದಲ್ಲಿ ಜಿಲ್ಲಾಡಳಿತಗಳು ಸ್ಥಗಿತವಾಗಿವೆ ಎಂದು ದೂರಿದರು.
ನೀವು ಆರೋಗ್ಯ ಸುಧಾರಣೆಗೆ ಪಂಚಕರ್ಮ ಚಿಕಿತ್ಸೆ ಮಾಡಿ. ಸರ್ಕಾರ ಉಳಿಸಲು ಪಂಚ ತಂತ್ರಗಳನ್ನು ಮಾಡಿ. ಆದರೆ ಅದರೊಂದಿಗೆ ಬರ ನಿರ್ವಹಣೆಗೆ ಸಮರೋಪಾದಿ ಕೆಲಸ ಕೂಡ ಮಾಡಿ ಎಂದು ಮುಖ್ಯಮಂತ್ರಿ ಕುಮಾರಸ್ವಾಮಿ ಅವರನ್ನು ಶ್ರೀನಿವಾಸ ಪೂಜಾರಿ ಕುಟುಕಿದರು.
'ಕುಮಾರಸ್ವಾಮಿ ಹೇಳಿಕೆ ಸಿಎಂ ಹುದ್ದೆಯ ಘನತೆಗೆ ತಕ್ಕುದಲ್ಲ'
ಬರನಿರ್ವಹಣೆ, ಮೂಲಸೌಕರ್ಯ ಅಭಿವೃದ್ಧಿ ಕಾಮಗಾರಿಗಳಿಗೆ ಚುನಾವಣಾ ಆಯೋಗ ಅನುಮತಿ ನೀಡಿದೆ. ವಿವಿಧ ನಿಗಮ, ಮಂಡಳಿ, ಸಮಿತಿ ಹಾಗೂ ಸ್ಥಳೀಯ ಸಂಸ್ಥೆಗಳು ಸಭೆಗಳನ್ನು ನಡೆಸುವುದಕ್ಕೂ ಒಪ್ಪಿಗೆ ನೀಡಿದೆ. ಆದರೆ ಕುಡಿಯುವ ನೀರು, ಮಳೆಗಾಲ ಮುನ್ನೆಚ್ಚರಿಕೆ ಕ್ರಮ ಮೊದಲಾದ ಉದ್ದೇಶಗಳಿಗೂ ಗ್ರಾ.ಪಂ.ಗಳಲ್ಲಿ ಸಭೆ ನಡೆಸಲು ಸರ್ಕಾರ ಕ್ರಮ ಕೈಗೊಂಡಿಲ್ಲ ಎಂದು ಶ್ರೀನಿವಾಸ ಪೂಜಾರಿ ಅಪಾದಿಸಿದರು.