ಉಡುಪಿ ಕೃಷ್ಣಮಠ ಪಾರ್ಕಿಂಗ್ ಏರಿಯಾದ ಗೋಲ್ಮಾಲ್ ಸಾಬೀತು: ಶಿರೂರು ಶ್ರೀಗಳಿಗೆ ಜವಾಬ್ದಾರಿ
ಉಡುಪಿ, ಫೆ 4: ಭಾರೀ ಚರ್ಚೆಗೆ ಗ್ರಾಸವಾಗಿದ್ದ ಶ್ರೀಕೃಷ್ಣಮಠದ ಪಾರ್ಕಿಂಗ್ ಪ್ರದೇಶದ ಶುಲ್ಕ ವಿವಾದಕ್ಕೆ ಸಂಬಂಧಿಸಿದಂತೆ ಅಷ್ಟಮಠದ ಶ್ರೀಗಳ ಸಮ್ಮುಖದಲ್ಲಿ ಪರಿಹಾರ ಕಂಡುಕೊಳ್ಳಲಾಗಿದೆ. ಇನ್ನು ಮುಂದೆ, ಪಾರ್ಕಿಂಗ್ ಪ್ರದೇಶದ ಜವಾಬ್ದಾರಿಯನ್ನು ಶಿರೂರು ಮಠಕ್ಕೆ ನೀಡಲಾಗಿದೆ.
ಉಡುಪಿ ಹಿರಿಯ ಪೇಜಾವರ ಶ್ರೀಗಳ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಶಿರೂರು ಶ್ರೀಗಳಿಗೆ ಪಾರ್ಕಿಂಗ್ ಸ್ಥಳದ ಜವಾಬ್ದಾರಿ, ಪಾರ್ಕಿಂಗ್ ಶುಲ್ಕ ಸಂಗ್ರಹ ಮತ್ತು ಸ್ಥಳದ ಕಟ್ಟಡಗಳ ವ್ಯವಹಾರಗಳನ್ನು ನೋಡಿಕೊಳ್ಳಬೇಕು ಎಂದು ಸಭೆಯಲ್ಲಿ ನಿರ್ಧರಿಸಲಾಗಿದೆ.
ಪೇಜಾವರ ಶ್ರೀಗಳ ಆಪ್ತರೇ ಹೆಗ್ಗಣಗಳು
ಪಾರ್ಕಿಂಗ್ ರಸೀದಿ ಪುಸ್ತಕದ ನಕಲು ಸೇರಿದಂತೆ ಹಲವು ಗೋಲ್ಮಾಲ್ ಪ್ರಕರಣಗಳು ಸಾಬೀತಾಗಿದ್ದು, ಪಾರ್ಕಿಂಗ್ ಪ್ರದೇಶದ ಉಸ್ತುವಾರಿಯಾಗಿ ಉದಯ ಸುಬ್ರಹ್ಮಣ್ಯ ಅವರನ್ನು ನೇಮಿಸಲಾಗಿತ್ತು, ಈಗ ಅವ್ಯವಹಾರ ಸಾಬೀತಾಗಿರುವುದರಿಂದ ಅವರನ್ನು ಸೇವೆಯಿಂದ ವಜಾಗೊಳಿಸಲಾಗಿದೆ ಎಂದು ಪೇಜಾವರ ಹಿರಿಯ ಶ್ರೀಗಳು ಹೇಳಿದ್ದಾರೆ.
ನಮ್ಮ ಪರ್ಯಾಯ ಅವಧಿಯಲ್ಲಿ ಪಾರ್ಕಿಂಗ್ ವಿಚಾರದಲ್ಲಿ ಒಟ್ಟಾರೆಯಾಗಿ ಮಠಕ್ಕೆ ಯಾವುದೇ ನಷ್ಟವಾಗಿಲ್ಲ. ನಮ್ಮ ಅವಧಿಯಲ್ಲಿ ಅದಕ್ಕಿಂತ ಹೆಚ್ಚಿನ ಪಾಲು ಹಣವನ್ನು ನಾವು ಟ್ರಸ್ಟಿಗೆ ನೀಡಿದ್ದೇವೆ. 50 ಲಕ್ಷ ರೂಪಾಯಿ ಯಾತ್ರಿ ನಿವಾಸಕ್ಕೆ ನೀಡಲಾಗಿದೆ.
ಕೃಷ್ಣಮಠದಲ್ಲಿ ನಮಾಜಿಗೆ ಅವಕಾಶವಿದೆಯಾ: ಪಲಿಮಾರು ಶ್ರೀ ಸಂದರ್ಶನ
ಜೊತೆಗೆ, ಸುಮಾರು ಎರಡುವರೆ ಕೋಟಿ ರೂಪಾಯಿ ವೆಚ್ಚದಲ್ಲಿ ಯಾತ್ರಿ ನಿವಾಸ ಕಟ್ಟಡವನ್ನು ಪಾರ್ಕಿಂಗ್ ಪ್ರದೇಶದಲ್ಲಿ ಮಾಡಿದ್ದೇವೆ. ಹಾಗಾಗಿ ಟ್ರಸ್ಟಿಗೆ ನಮ್ಮಿಂದ ಯಾವುದೇ ರೀತಿಯ ಅನ್ಯಾಯ ಅಥವಾ ನಷ್ಟ ಆಗಲಿಲ್ಲ ಎಂದು ಪೇಜಾವರ ಶ್ರೀಗಳು ಹೇಳಿಕೆಯನ್ನು ನೀಡಿದ್ದಾರೆ. ಏನಿದು ವಿವಾದ, ಮುಂದೆ ಓದಿ..
ಐದೂವರೆ ಎಕರೆ ಜಾಗವನ್ನು ಸಂಪೂರ್ಣ ಅಭಿವೃದ್ಧಿ ಮಾಡಲಾಗುವುದು
ಅಷ್ಟಮಠದ ಶ್ರೀಗಳ ಸಭೆ ಮುಗಿದ ನಂತರ ಮಾತನಾಡಿದ ಶಿರೂರು ಶ್ರೀಗಳು, ಐದೂವರೆ ಎಕರೆ ಜಾಗವನ್ನು ಸಂಪೂರ್ಣ ಅಭಿವೃದ್ಧಿ ಮಾಡಲಾಗುವುದು. ಭಕ್ತರಿಗೆ ಯಾವುದೇ ತೊಂದರೆ ಆಗಬಾರದು ಎನ್ನುವ ಸದುದ್ದೇಶದಿಂದ ಈ ಹೋರಾಟವನ್ನು ನಾನು ಮಾಡಬೇಕಾಯಿತು. ದಾಖಲೆ ಸಮೇತ ಪೇಜಾವರ ಶ್ರೀಗಳಲ್ಲಿ ಅವ್ಯವಹಾರದ ಬಗ್ಗೆ ವಿವರಿಸಿದ್ದೆ. ಈಗ ವಿವಾದಕ್ಕೆ ಪರಿಹಾರ ಸಿಕ್ಕಿದೆ ಎಂದು ಶಿರೂರು ಶ್ರೀಗಳು ಹೇಳಿದ್ದಾರೆ.
ಬಿರ್ಲಾ ಛತ್ರದ ಹಿಂದುಗಡೆಯ ಪಾರ್ಕಿಂಗ್ ಜಾಗ ಶಿರೂರು ಮಠಕ್ಕೆ ಸೇರಿದ್ದು
ಉಡುಪಿ ಕೃಷ್ಣಮಠದ ಪಕ್ಕದಲ್ಲಿರುವ ಬಿರ್ಲಾ ಛತ್ರದ ಹಿಂದುಗಡೆಯ ಪಾರ್ಕಿಂಗ್ ಜಾಗ ಶಿರೂರು ಮಠಕ್ಕೆ ಸೇರಿದ್ದು. ಆ ಜಾಗದಲ್ಲಿ ಅಕ್ರಮವಾಗಿ ಅಂಗಡಿ ಮುಂಗಟ್ಟುಗಳನ್ನು ಕಟ್ಟಿ, ಜೊತೆಗೆ, ಪ್ರವಾಸಿ ವಾಹನಗಳಿಗೆ ಭಾರೀ ಶುಲ್ಕ ವಿಧಿಸಲಾಗುತ್ತಿತ್ತು. ಸುಮಾರು ಐದು ಎಕರೆಯ ಈ ಜಾಗವನ್ನು ನಮ್ಮ ಮಠ, ಕೃಷ್ಣಮಠದ ಟ್ರಸ್ಟಿಗೆ ದಾನವಾಗಿ ಬರೆದುಕೊಟ್ಟಿದ್ದು ಎನ್ನುವುದು ಶಿರೂರು ಶ್ರೀಗಳ ಹೇಳಿಕೆ.
ಬುಲ್ಡೋಜರ್ ತಂದು ಶಿರೂರು ಶ್ರೀಗಳು ಏಕಾಏಕಿ ನೆಲಕ್ಕುರುಳಿಸಿದ್ದರು
ಕಣ್ಣೆದುರಿಗೇ ನಡೆಯುತ್ತಿದ್ದ ಅವ್ಯವಹಾರ ನಡೆಯುತ್ತಿದ್ದರೂ, ಏನೂ ಮಾಡಲಾಗದೇ ಸುಮ್ಮನಿದ್ದೆ. ಇನ್ನು ಸುಮ್ಮನಿರಲು ಸಾಧ್ಯವಿಲ್ಲ ಎಂದು ಅಕ್ರಮವಾಗಿ ನಿರ್ಮಿಸಿಕೊಂಡಿದ್ದ ಅಂಗಡಿ, ಬಟ್ಟೆಮಳಿಗೆಗಳನ್ನು ಬುಲ್ಡೋಜರ್ ತಂದು ಶಿರೂರು ಶ್ರೀಗಳು ಏಕಾಏಕಿ ನೆಲಕ್ಕುರುಳಿಸಿದ್ದರು.
ಪೇಜಾವರ ಶ್ರೀಗಳ ಆಪ್ತರೇ ಮಠಕ್ಕೆ ದೊಡ್ಡ ಹೆಗ್ಗಣಗಳು
ಪೇಜಾವರ ಶ್ರೀಗಳ ಪಂಚಮ ಪರ್ಯಾಯ ಮುಗಿಯಲಿ ಎನ್ನುವ ಕಾರಣಕ್ಕಾಗಿ ಕಾಯುತ್ತಿದ್ದೆ. ಶ್ರೀಗಳು ನಮಗೆಲ್ಲಾ ಹಿರಿಯರು,ಏನಾದರೂ ಹೇಳಿದರೆ, ಬೇಸರಿಸಿಕೊಂಡು ಉಪವಾಸ ಕೂರುತ್ತೇನೆಂದು ಹೇಳುತ್ತಾರೆ. ಪೇಜಾವರ ಶ್ರೀಗಳ ಆಪ್ತರೇ ಮಠಕ್ಕೆ ದೊಡ್ಡ ಹೆಗ್ಗಣಗಳು ಎಂದು ಶಿರೂರು ಶ್ರೀಗಳು ನೇರವಾಗಿ ಆರೋಪಿಸಿದ್ದರು.
ಜೆಸಿಬಿಯಿಂದ ನೆಲಸಮಗೊಳಿಸಲೂ ಬರುತ್ತದೆ
ನನಗೆ ಕೃಷ್ಣ ಮುಖ್ಯಪ್ರಾಣನ ಪೂಜೆ ಮಾಡಲೂ ಬರುತ್ತದೆ, ಜೆಸಿಬಿಯಿಂದ ನೆಲಸಮಗೊಳಿಸಲೂ ಬರುತ್ತದೆ ಎಂದು ಶಿರೂರು ಶ್ರೀಗಳು ಜೆಸಿಬಿಯಿಂದ ಪಾರ್ಕಿಂಗ್ ಪ್ರದೇಶದಲ್ಲಿದ್ದ ಅಕ್ರಮ ಮಳಿಗೆಗಳನ್ನು ನೆಲಸಮಗೊಳಿಸಿದ್ದರು. ಇದಾದ ನಂತರ, ಪೇಜಾವರ, ಪರ್ಯಾಯ ಪಲಿಮಾರು ಶ್ರೀ ಮತ್ತು ಅಷ್ಟಮಠದ ಇತರ ಯತಿಗಳ ಸಮ್ಮುಖದಲ್ಲಿ ವಿವಾದಕ್ಕೆ ಪರಿಹಾರ ಕಂಡುಕೊಳ್ಳಲಾಗಿದೆ.