ಟಿಪ್ಪು ಜಯಂತಿಯಲ್ಲಿ ಭಾಗಿಯಾಗದಂತೆ ದೇವರೇ ತಡೆದಿದ್ದಾನೆ: ಪ್ರಮೋದ್ ಮಧ್ವರಾಜ್
Recommended Video
ಉಡುಪಿ, ಡಿಸೆಂಬರ್ 17: ಟಿಪ್ಪು ಜಯಂತಿ ಬಗ್ಗೆ ಕಾಂಗ್ರೆಸ್ನಲ್ಲೇ ಪರ-ವಿರೋಧ ಅಭಿಪ್ರಾಯಗಳಿರುವುದು ಪದೇ-ಪದೇ ಮುನ್ನೆಲೆಗೆ ಬರುತ್ತಲೇ ಇದೆ. ಮೊನ್ನೆಯಷ್ಟೆ ಪರಮೇಶ್ವರ್ ಅವರು ಟಿಪ್ಪು ಜಯಂತಿಗೆ ಗೈರಾಗಿ ತಮ್ಮ ವಿರೋಧ ವ್ಯಕ್ತಪಡಿಸಿದ್ದರು. ಈಗ ಕಾಂಗ್ರೆಸ್ನ ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಟಿಪ್ಪು ಜಯಂತಿ ವಿರೋಧವಾಗಿ ಮಾತನಾಡಿದ್ದಾರೆ.
ಉಡುಪಿಯ ಚರ್ಚ್ ಒಂದರ ಕಾರ್ಯಕ್ರಮದಲ್ಲಿ ಮಾತನಾಡಿರುವ ಅವರು, ಟಿಪ್ಪು ಸೈನ್ಯ ಪೇತ್ರಿಯ ಈ ಹಿಂದೆ ಇದ್ದ ಚರ್ಚ್ ನಾಶ ಮಾಡಿದಕ್ಕಾಗಿ ನಾನು ಶಾಸಕ ಹಾಗೂ ಮಂತ್ರಿಯಾಗಿದ್ದಾಗ ಟಿಪ್ಪು ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸಿದಂತೆ ದೇವರು ಮಾಡಿದ್ದಾರೆ ಎಂದು ಹೇಳಿದ್ದಾರೆ.
ಟಿಪ್ಪು ದಾಳಿಯಿಂದ ರಕ್ಷಿಸಿದ ಹಿಂದೂ ಕುಟುಂಬಗಳಿಗೆ ಕ್ರೈಸ್ತರ ಗೌರವ
ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ತಮ್ಮದೇ ಪಕ್ಷದ ಹಿಂದಿನ ಸರಕಾರದ ಟಿಪ್ಪು ಜಯಂತಿಯನ್ನು ಟೀಕೆ ಮಾಡಿದ್ದೂ ಅಲ್ಲದೆ ,ಟಿಪ್ಪು ಜಯಂತಿಗೆ ತಾವು ಗೈರು ಹಾಜರಾಗಿದ್ದನ್ನು ಸಮರ್ಥಿಸಿಕೊಂಡ ವಿಡಿಯೋ ವೈರಲ್ ಆಗುತ್ತಿದೆ. ಟಿಪ್ಪು ಜಯಂತಿ ಬಗ್ಗೆ ಕಾಂಗ್ರೆಸ್ ನಾಯಕರಲ್ಲೇ ವಿರೋಧವಿರುವುದು ಈಗ ಮತ್ತೆ ಬಹಿರಂಗ ಗೊಂಡಿದೆ.
ಟಿಪ್ಪು ಜಯಂತಿಯಲ್ಲಿ ಭಾಗವಹಿಸದಂತೆ ದೇವರೇ ತಡೆದಿದ್ದಾನೆ
ಚರ್ಚ್ನ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ್ದ ಪ್ರಮೋದ್ ಮದ್ವರಾಜ್ 'ಇಲ್ಲಿನ ಚರ್ಚ್ ನಿರ್ಮಾಣ ಆಗಿ ಐವತ್ತು ವರ್ಷ ಆಗಿದೆ.ಈ ಹಿಂದಿನ ಚರ್ಚ್ ಅನ್ನು ಟಿಪ್ಪು ಸುಲ್ತಾನ್ ನಾಶ ಮಾಡಿದ್ದ ಎಂದು ಹೇಳಲಾಗ್ತಿದೆ. ನಾನು ಶಾಸಕ ಹಾಗೂ ಮಂತ್ರಿಯಾಗಿದ್ದಾಗ ನಮ್ಮ ಸರಕಾರ ಸರಿಯೋ-ತಪ್ಪೋ ಟಿಪ್ಪು ಜಯಂತಿಯನ್ನು ಆಚರಣೆ ಮಾಡಿತ್ತು. ಆದರೆ ಆ ಟಿಪ್ಪು ಜಯಂತಿಯಲ್ಲಿ ಭಾಗವಹಿಲು ನನಗೆ ಅವಕಾಶವೇ ಸಿಕ್ಕಿರಲಿಲ್ಲ. ಇದು ಟಿಪ್ಪು ಸೈನ್ಯ ಈ ಚರ್ಚ್ನ್ನು ಆಗ ನಾಶ ಮಾಡಿರುವುದಕ್ಕೆ ದೇವರೇ ನನ್ನನ್ನು ಟಿಪ್ಪು ಜಯಂತಿಗೆ ಹೋಗದಹಾಗೆ ಮಾಡಿದ್ದಾರೆ ಎಂದು ಹೇಳಿದ್ದರು.
ಎರಡು ಬಾರಿ ಗೈರಾಗಿದ್ದ ಪ್ರಮೋದ್ ಮಧ್ವರಾಜ್
2015ರಲ್ಲಿ ಟಿಪ್ಪು ಜಯಂತಿ ಆಚರಣೆಯನ್ನು ಸರಕಾರ ಆರಂಭಿಸಿದಾಗ ಪ್ರಮೋದ್ ಮಧ್ವರಾಜ್ ಉಡುಪಿ ಕ್ಷೇತ್ರದ ಶಾಸಕರಾಗಿದ್ದರು. ಉಡುಪಿ ಜಿಲ್ಲಾಡಳಿತ ಆಯೋಜಿಸಿದ್ದ ಟಿಪ್ಪು ಜಯಂತಿ ಕಾರ್ಯಕ್ರಮಕ್ಕೆ ಪ್ರಮೋದ್ ಗೈರುಹಾಜರಾಗಿದ್ದರು. 2016 ಹಾಗು 2017 ರಲ್ಲು ಮದ್ವರಾಜ್ ಕಾರ್ಯಕ್ರಮಕ್ಕೆ ಗೈರಾಗಿದ್ದರು. ಮದ್ವರಾಜ್ ಟಿಪ್ಪು ಜಯಂತಿ ಕಾರ್ಯಕ್ರಮಕ್ಕೆ ಗೈರಾಗಿದ್ದಕ್ಕೆ ಆಗ ಅಸಮಾಧಾನ ವ್ಯಕ್ತವಾಗಿತ್ತು.
ಟಿಪ್ಪು ಜಯಂತಿಗೆ ಕೈಕೊಟ್ಟ ಸಿಎಂ, ಡಿಸಿಎಂ ವಿರುದ್ಧ ಸಿದ್ದರಾಮಯ್ಯ ಟ್ವೀಟ್
ಕಾಂಗ್ರೆಸ್ಸಿಗರಿಗೆ ಮುಜುಗರ
ಮಾಜಿ ಸಚಿವರ ಈ ಹೇಳಿಕೆ ಉಡುಪಿಯಲ್ಲಿ ಕಾಂಗ್ರೆಸಿಗರಿಗೇ ಮುಜುಗರ ತಂದಿದೆ. ಮಾತ್ರವಲ್ಲ ,ಪಕ್ಷದ ಕಾರ್ಯಕರ್ತರೂ ಕೂಡ ಮಾಜಿ ಸಚಿವರ ಈ ಹೇಳಿಕೆಗೆ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಈ ವಿಡಿಯೋ ವೈರಲ್ ಆಗಿದೆ. ಕಾಂಗ್ರೆಸ್ ಮುಖಂಡ ಪ್ರಮೋದ್ ಕಾಂಗ್ರೆಸ್ ಪಕ್ಷದಲ್ಲಿದ್ದರೂ ಬಿಜೆಪಿ ಮನಸ್ಥಿತಿಯನ್ನು ಹೊಂದಿದ್ದಾರೆ ಎಂಬ ಟೀಕೆಗಳು ಕೇಳಿ ಬರುತ್ತಿವೆ.
ಕಾಂಗ್ರೆಸ್ಗೆ ಇರುಸು-ಮುರುಸು
ಪ್ರಮೋದ್ ಮದ್ವರಾಜ್ ಅವರ ಈ ಹೇಳಿಕೆ ಕಾಂಗ್ರೆಸ್ ಮುಖಂಡರಿಗೆ ಇರಿಸುಮುರುಸು ಉಂಡುಮಾಡಿದೆ. ಕಾಂಗ್ರೆಸ್ ಸರಕಾರ ಜಾರಿಗೆ ತಂದಿದ್ದ ಜಯಂತಿ ಕಾರ್ಯಕ್ರಮಕ್ಕೆ ಈಗ ಕಾಂಗ್ರೆಸ್ ನಾಯಕರೇ ತಿರುಗಿ ಬಿದ್ದಿದ್ದಾರೆ. ಮದ್ವರಾಜ್ ಅವರ ಈ ಹೇಳಿಕೆ ಬಿಜೆಪಿ ಕೈಗೆ ಹೊಸ ಅಸ್ತ್ರನೀಡಿದೆ. ಮುಂಬರುವ ದಿನಗಳಲ್ಲಿ ಈ ವಿವಾದ ಮತ್ತಷ್ಟು ತೀವ್ರಗೊಳ್ಳುವ ಲಕ್ಷಣಗಳು ಕಂಡುಬರುತ್ತಿವೆ.