ಮೋದಿ ಭರವಸೆಗಳೆಲ್ಲಾ ಬರೀ ಸುಳ್ಳು: ಗುಲಾಂ ನಬಿ ಆಝಾದ್
ಉಡುಪಿ, ಮೇ 09 : ಬಿಜೆಪಿ ರಾಷ್ಟ್ರಮಟ್ಟದಲ್ಲಿ ವಿಫಲವಾಗಿದೆ. ಹೀಗಾಗಿ ಕರ್ನಾಟಕದಲ್ಲೂ ಜನ ನಂಬಿಕೆ ಕಳೆದುಕೊಂಡಿದ್ದಾರೆ. ರಾಜ್ಯ ಕಾಂಗ್ರೆಸ್ ಸರ್ಕಾರದ ವಿವಿಧ ಯೋಜನೆಗಳಾದ ರೈತರ ಸಾಲಮನ್ನಾ ಮುಖ್ಯವಾಗಿ ಅನ್ನಭಾಗ್ಯ ಯೋಜನೆಗಳು ಜನರಿಗೆ ತಲುಪಿವೆ ಎಂದು ಕಾಂಗ್ರೆಸ್ ಮುಖಂಡ ಗುಲಾಂ ನಬಿ ಆಝಾದ್ ಸಿದ್ದರಾಮಯ್ಯ ಸರ್ಕಾರವನ್ನು ಪ್ರಶಂಸಿಸಿದರು.
ಉಡುಪಿಯಲ್ಲಿ ಇಂದು ನಡೆದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಮೋದಿ ಅಲೆ 2014 ರಲ್ಲಿತ್ತು. ಈಗ ಇಲ್ಲ. ಕೇಂದ್ರದಲ್ಲಿ ಮೋದಿ ನೇತೃತ್ವದ ಸರ್ಕಾರ ವೈಫಲ್ಯ ಕಂಡಿದೆ.ಧರ್ಮವನ್ನು ರಾಜಕೀಯದ ಜೊತೆ ಬೆರೆಸುವುದು ಸರಿಯಲ್ಲ.
ಮೋದಿಯಿಂದ ಕನ್ನಡಿಗರಿಗೆ ಅವಮಾನವಾಗಿದೆ: ಬಿ.ಕೆ.ಹರಿಪ್ರಸಾದ್
ರಾಜಕೀಯ ಮತ್ತು ಧರ್ಮ ಬೇರೆ ಬೇರೆಯೇ ಇರಬೇಕು. ಇದು ಕಾಂಗ್ರೆಸ್ ನ ನಂಬಿಕೆ. ನಾವು ಎಲ್ಲ ಧರ್ಮವನ್ನೂ ಗೌರವಿಸುತ್ತೇವೆ. ರಾಜ್ಯದ ಜನ ಬುದ್ದಿವಂತರು. ಬಿಜೆಪಿ ಹೇಳೋದೊಂದು ಮಾಡೋದೊಂದು. ಪ್ರಧಾನಿ ಹೇಳ್ತಾರೆ ಭ್ರಷ್ಟಾಚಾರಕ್ಕೆ ಅವಕಾಶ ಕೊಡೋದಿಲ್ಲ ಅಂತ. ಆದ್ರೆ ಅವರ ಮುಖ್ಯಮಂತ್ರಿ ಅಭ್ಯರ್ಥಿ ಯಾರು? ಎಂದು ಪ್ರಶ್ನಿಸಿದ ಗುಲಾಂ ನಬಿ ಆಝಾದ್ ಬಿಜೆಪಿ ಹೇಳಿದ್ದನ್ನು ಮಾಡಿಯೇ ಇಲ್ಲ ಅಂತ ಲೇವಡಿ ಮಾಡಿದರು.
ಬಿಜೆಪಿ ಸುಳ್ಳಿನ ಮೇಲೆಯೇ ಚುನಾವಣಾ ಪ್ರಚಾರ ಮಾಡುತ್ತದೆ. ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಜನ ತತ್ತರಿಸುತ್ತಿದ್ದಾರೆ. ಕಾಂಗ್ರೆಸ್ ಪೊಳ್ಳು ಭರವಸೆ ಕೊಡುವುದಿಲ್ಲ. ಕೊಟ್ಟ ಭರವಸೆಗಿಂತ ಜಾಸ್ತಿ ಜನತೆಗೆ ಕೊಟ್ಟಿದ್ದೇವೆ. ಆದ್ರೆ ಮೋದಿ ಭಾಷಣದಲ್ಲಿ ಹೇಳಿದ ಭರವಸೆಗಳೆಲ್ಲಾ ಬರೀ ಸುಳ್ಳು ಎಂದು ವಾಗ್ದಾಳಿ ನಡೆಸಿದರು.