ಯುವತಿಯ ಮೈಮೇಲೆ ಪ್ರೇತಾತ್ಮ, ನಿಬ್ಬೆರಗಾಯಿತು ಉಡುಪಿ ದೇವಾಲಯ
ಉಡುಪಿಯ ಇತಿಹಾಸ ಪ್ರಸಿದ್ದ ಅಂಬಲಪಾಡಿಯ ಜನಾರ್ದನ, ಮಹಾಕಾಳಿ ದೇವಾಲಯದಲ್ಲಿ ಕಳೆದಾ ಶುಕ್ರವಾರ ನಡೆದ ನೈಜ ಘಟನೆಯ ವರದಿ.
ಆಸ್ತಿಕ, ನಾಸ್ತಿಕ, ಮೌಢ್ಯ, ವಾಮಾಚಾರ, ಭೂತೋಚ್ಚಾಟನೆ ಮುಂತಾದ ವಿಷಯಗಳು ಚಾಲ್ತಿಯಲ್ಲಿರುವ ಈ ಹೊತ್ತಿನಲ್ಲಿ ಕಣ್ಮುಂದೆ ನಡೆದ ಘಟನೆಯೊಂದರ ವಿವರ ಇಲ್ಲಿದೆ ನೋಡಿ. ಇದನ್ನು ಓದಿ ಇಪ್ಪತ್ತೊಂದನೇ ಶತಮಾನದಲ್ಲಿ ಇದೆನ್ನೆಲ್ಲಾ ನಂಬಬೇಕಾ ಅಥವಾ ಬಿಡಬೇಕಾ ಎನ್ನುವುದು ಓದುಗರ ವಿವೇಚನೆಗೆ ಬಿಟ್ಟ ವಿಚಾರ.
ಉಡುಪಿ ನಗರ ವ್ಯಾಪ್ತಿಯಲ್ಲಿನ ಅಂಬಲಪಾಡಿಯಲ್ಲಿರುವ ಜನಾರ್ದನ ಮತ್ತು ಮಹಾಕಾಳಿ ದೇವಸ್ಥಾನಕ್ಕೆ ಶತಮಾನಗಳ ಇತಿಹಾಸವಿದೆ. ಹೆಚ್ಚಾಗಿ ದೇವಿಯ ದೇವಸ್ಥಾನಗಳಲ್ಲಿ ಶಿವನನ್ನು ಆರಾಧಿಸುವುದು ಹೆಚ್ಚು, ಆದರೆ ಅಂಬಲಪಾಡಿಯಲ್ಲಿ ವಿಷ್ಣುವನ್ನು ಆರಾಧಿಸಿಕೊಂಡು ಬರಲಾಗುತ್ತಿದೆ.
ಮೂಢನಂಬಿಕೆ ನಿಷೇಧಿಸುವ ಧೈರ್ಯ ಸಿಎಂಗಿಲ್ಲ
ಮಕ್ಕಳು ತಮ್ಮ ಕಷ್ಟವನ್ನು ತೋಡಿಕೊಳ್ಳಲು ತಂದೆಯ ಬದಲು ತಾಯಿಯ ಬಳಿ ಬರುವುದು ಹೆಚ್ಚು. ಅದೇ ನಂಬಿಕೆಯಲ್ಲಿ ಉಡುಪಿ ಮತ್ತು ಹೊರವಲಯದ ಜನ 'ತಾಯಿ ಮಹಾಕಾಳಿ'ಯಲ್ಲಿ ತಮ್ಮ ದುಃಖ ದುಮ್ಮಾನಗಳನ್ನು ತೋಡಿಕೊಳ್ಳಲು ಈ ದೇವಾಲಯಕ್ಕೆ ಬರುತ್ತಿರುತ್ತಾರೆ.
ಈ ದೇವಾಲಯದಲ್ಲಿ ಪ್ರತೀ ಶುಕ್ರವಾರ ಮಹಾಕಾಳಿಯ ಸನ್ನಿಧಾನದಲ್ಲಿ ಸಂಜೆ ಐದರಿಂದ ರಾತ್ರಿ ಎಂಟು ಗಂಟೆಯವರೆಗೆ ತಾಯಿ 'ದರ್ಶನ ಪಾತ್ರಿಯ' ಮೂಲಕ ಭಕ್ತರ ಜೊತೆ ಮಾತನಾಡುವ ಪದ್ದತಿಯಿದೆ. ಈ ಸಂದರ್ಭದಲ್ಲಿ ತಾಯಿ ಭಕ್ತರ ಸಂಕಷ್ಟವನ್ನು ಆಲಿಸಿ, ಅದಕ್ಕೆ ಅಲ್ಲೇ ಪರಿಹಾರ ಸೂಚಿಸುವುದು ಅನಾದಿ ಕಾಲದಿಂದಲೂ ನಡೆದುಕೊಂಡು ಬರುತ್ತಿರುವ ಪದ್ದತಿ.
ಇದೇ ಕಳೆದ ಶುಕ್ರವಾರ (ಜೂ 9) ದರ್ಶನ (ಈ ಭಾಗದಲ್ಲಿ ದರ್ಶನ ಎನ್ನುವ ಪದಕ್ಕೆ, ದೇವರು, ಭೂತ ಮೈಮೇಲೆ ಬರುವುದಕ್ಕೆ ಬಳಸಲಾಗುತ್ತದೆ) ನಡೆಯಲು ಇನ್ನೇನು ಆರಂಭವಾಗಬೇಕು ಅನ್ನುವಷ್ಟರಲ್ಲಿ ಸುಮಾರು 25ವರ್ಷದ ಯುವತಿ, ಮಹಾಕಾಳಿ ದೇವಾಲಯದ ಗರ್ಭಗುಡಿಯ ಮುಂದೆ ಚಿತ್ರವಿಚಿತ್ರವಾಗಿ ವರ್ತಿಸಲು ಆರಂಭಿಸುತ್ತಾಳೆ. ಲೇಖನವನ್ನು ಕೊನೆಯ ಸ್ಲೈಡ್ ತನಕ ಓದಿ..
ಆಪ್ತಚಿತ್ರವನ್ನು ನೆನಪಿಸುವಂತಹ ಘಟನೆ
ಆಪ್ತಮಿತ್ರ ಚಿತ್ರದ ಕ್ಲೈಮ್ಯಾಕ್ಸ್ ನೆನಪಿಸುವಂತೆ, ಕೂದಲು ಕೆದರಿಕೊಂಡು, ನೆಲದ ಮೇಲೆ ಹೊರಳಾಡುತ್ತಾ, ನಿನನಿ ಬುಡ್ಪುಜ್ಜೀ (ನಿನ್ನನ್ನು ಬಿಡುವುದಿಲ್ಲ) ಎಂದು ಅರಚುತ್ತಿರುತ್ತಾಳೆ. ತಾನೇನು ಮಾಡುತ್ತಿದ್ದೇನೆ ಎನ್ನುವುದರ ಅಕ್ಷರಸ: ಅರಿವು ಈಕೆಗೆ ಇರುವುದಿಲ್ಲ.
ದೇವಾಲಯದ ಧರ್ಮದರ್ಶಿಗಳು
ಈ ಹೊತ್ತಿನಲ್ಲಿ ದೇವಾಲಯದ ಧರ್ಮದರ್ಶಿಗಳು ಬಂದು ಏನು ನಿನ್ನ ಸಮಸ್ಯೆಯೆಂದು ಕೇಳಿದಾಗ, ನಾನು ಯುವತಿಯ (ಮೈಮೇಲೆ ಆವರಿಸಿರುವ) ಸಹೋದರ. ನನಗೆ 27ವರ್ಷದಿಂದ ಅನ್ನನೀರು ನೀಡಲಿಲ್ಲ. ನನ್ನನ್ನು ಜೀವನದುದ್ದಕ್ಕೂ ಕೇವಲವಾಗಿ ನಡೆಸಿಕೊಳ್ಳಲಾಯಿತು ಎಂದು ಸಹೋದರನ ಆತ್ಮ, ಯುವತಿಯ ಮೂಲಕ ಹೇಳುತ್ತಿತ್ತು.
ಇವಳನ್ನು ನೆಮ್ಮದಿಯಿಂದ ಇರಲು ಬಿಡುವುದಿಲ್ಲ
ನಾನು ಈಕೆಯನ್ನು ನೆಮ್ಮದಿಯಿಂದ ಇರಲು ಬಿಡುವುದಿಲ್ಲ ಎಂದು ಯುವತಿಯನ್ನು ಆವರಿಸಿರುವ ಸಹೋದರನ ಆತ್ಮ ಕೂಗಾಡುತ್ತಿರುತ್ತದೆ. ನಿನಗೆ ಈ ಹಿಂದೆಯಾದ ಅನ್ಯಾಯಕ್ಕೂ ಈಕೆಗೂ ಏನು ಸಂಬಂಧ, ಈಕೆಯ ಮೈಯಿಂದ ಹೊರಟು ಹೋಗು ಎಂದು ಧರ್ಮದರ್ಶಿಗಳು ಹೇಳುತ್ತಿರುತ್ತಾರೆ.
ಈಕೆಯ ಜೀವನವನ್ನು ಹಾಳು ಮಾಡಬೇಡ
ಈಕೆಗೆ ತೊಂದರೆ ಕೊಡಬೇಡ, ಪೊಣ್ಣದ ಜೀವನನೆನ್ ಹಾಲ್ ಮಲ್ಪಡ (ಹುಡುಗಿಯ ಜೀವನವನ್ನು ಹಾಳು ಮಾಡಬೇಡ) ಎಂದು ಧರ್ಮದರ್ಶಿಗಳು ಮನವಿ ಮಾಡಿಕೊಳ್ಳುತ್ತಿದ್ದರೂ, ಸಹೋದರನ ಆತ್ಮ ಯುವತಿಯ ದೇಹವನ್ನು ಬಿಟ್ಟು ಹೋಗಲು ತಯಾರಿಲ್ಲ.
ದರ್ಶನ ಪಾತ್ರಿಗಳ ಆಗಮನ
ಅಷ್ಟೊತ್ತಿಗೆ ದರ್ಶನ ಪಾತ್ರಿಗಳು ಆಗಮಿಸಿ, ಧರ್ಮದರ್ಶಿಗಳು ಮಾಡಿದಂತೆ ಮತ್ತೆ ಮನವಿ ಮಾಡಿ ಯುವತಿಯ ದೇಹವನ್ನು ಬಿಟ್ಟು ಹೋಗು ಎಂದರೂ ಆ ಆತ್ಮ ಬಿಟ್ಟು ಹೋಗಲು ತಯಾರಿರಲಿಲ್ಲ. ನಿನ್ನಲ್ಲಿ ಕೊನೆಯ ಬಾರಿ ಕೇಳಿಕೊಳ್ಳುತ್ತೇನೆ, ಈಕೆಯನ್ನು ಬಿಟ್ಟುಹೋಗದಿದ್ದರೆ ಸಂಕೋಲೆ (ಸರಪಳಿ)ಯಿಂದ ಬಂಧಿಸಿ ತಾಯಿಯ ಪಾದದ ಬಳಿ ಬಿಸಾಕುತ್ತೇನೆಂದು ದರ್ಶನ ಪಾತ್ರಿಗಳು ಎಚ್ಚರಿಕೆ ನೀಡುತ್ತಾರೆ.
ನಿನಗೆ ಅನ್ನನೀರು ಸಿಗದಂತಾಗುತ್ತದೆ
ತಾಯಿಯ ಪಾದದ ಬಳಿ ಬಿಸಾಕಿದರೆ, ಆಮೇಲೆ ನಿನಗೆ ಮುಂದೆಂದೂ ಅನ್ನನೀರು ಸಿಗುವುದಿಲ್ಲ ಎಂದು ಎಚ್ಚರಿಕೆ ನೀಡಿ ಯುವತಿಗೆ ತೀರ್ಥ ಪ್ರೋಕ್ಷಣೆ ಮಾಡಿದಾಗ ಕ್ಷಣಾರ್ಧದಲ್ಲಿ ಸಹೋದರನ ಆತ್ಮ ಯುವತಿಯ ಮೈಯಿಂದ ದೂರಾವಾದದ್ದು, ಘಟನೆ ನಡೆದು ಎರಡ್ಮೂರು ದಿನವಾದರೂ ಕಣ್ಣಮುಂದೆ ಬಂದು ನಿಲ್ಲುತ್ತದೆ.
ಅಂತರ್ ಪಿಶಾಚಿಗಳಾಗಿ ಆವರಿಸುವುದು
ದುರ್ಮರಣ, ಪಿತೃಕರ್ಮಾದಿಗಳು ಸರಿಯಾಗಿ ನಡೆಯದೇ ಇದ್ದಲ್ಲಿ ಅಂತರ್ ಪಿಶಾಚಿಗಳಾಗಿ ಇನ್ನೊಬ್ಬರ ಮೈಮೇಲೆ ಆವರಿಸುವ ಘಟನೆಗಳು ಈ ಭಾಗದಲ್ಲಿ ಬಹಳಷ್ಟು ನೋಡಿದ್ದರೂ, ಅಂಬಲಪಾಡಿ ದೇವಿಯ ಸಮ್ಮುಖದಲ್ಲೇ ಹೋದ ಶುಕ್ರವಾರ ನಡೆದ ಘಟನೆಯನ್ನು ಮರೆಯಲು ನನಗೆ ಕೆಲವು ದಿನಗಳೇ ಬೇಕಾಗಬಹುದು. ಈ ಮೇಲೆ ಹೇಳಿದಂತೆ, ಇದನ್ನು ನಂಬುವುದು ಬಿಡುವುದು ಅವರವರ ವಿವೇಚನೆಗೆ ಬಿಟ್ಟ ವಿಚಾರವಾದರೂ, ಕಣ್ಮುಂದೆ ನಡೆದ ಘಟನೆಯನ್ನು ಮೌಢ್ಯದ ಸಾಲಿಗೆ ಸೇರಿಸಲು ನನ್ನ ಮನ್ನಸ್ಸಂತೂ ಒಪ್ಪುತ್ತಿಲ್ಲ.