ಒಂದು ದಿನದ ಮಟ್ಟಿಗೆ ಜೈಲಿನಿಂದ ಹೊರಬರುತ್ತಿರುವ ಬನ್ನಂಜೆ ರಾಜ
ಉಡುಪಿ, ಜುಲೈ.05: ಒಂದು ಕಾಲದ ಭೂಗತ ದೊರೆ, ಕರಾವಳಿಯ ಉದ್ಯಮಿಗಳ ನಿದ್ದೆಗೆಡಿಸಿದ್ದ ಬನ್ನಂಜೆ ರಾಜ ಸದ್ಯ ಜೈಲು ಹಕ್ಕಿ. ಆದರೆ ಆತನ ತಾಯಿಯ ಅನಾರೋಗ್ಯ ಹಿನ್ನೆಲೆಯಲ್ಲಿ ಜೈಲಿನಿಂದ ಒಂದು ದಿನದ ಮಟ್ಟಿಗೆ ಹೊರಬರಲು ನ್ಯಾಯಾಧೀಶರು ಅನುಮತಿ ನೀಡಿದ್ದಾರೆ.
ಸದ್ಯ ಬೆಳಗಾವಿಯ ಹಿಂಡಲಗಾ ಜೈಲಿನಲ್ಲಿರುವ ಬನ್ನಂಜೆ ರಾಜನ ಮೇಲೆ 16 ಕೇಸುಗಳಿದ್ದು, ಉಡುಪಿ ನ್ಯಾಯಾಲಯದಲ್ಲೂ ಶೂಟೌಟ್, ಬೆದರಿಸಿದ ಹಾಗೂ ದರೋಡೆ ಪ್ರಕರಣಗಳಿದ್ದು ವಿಚಾರಣೆ ನಡೆಯುತ್ತಲೇ ಇದೆ.
ಮೂಲತಃ ಉಡುಪಿಯವನಾದ ಬನ್ನಂಜೆ ರಾಜನ ತಾಯಿಯು ಕಲ್ಮಾಡಿಯಲ್ಲಿರುವ ಮನೆಯಲ್ಲಿ ವಾಸಿಸುತ್ತಿದ್ದು, ಅನಾರೋಗ್ಯದಿಂದ ಬಳಲುತ್ತಿದ್ದಾರೆ. ಆದ್ದರಿಂದ ನ್ಯಾಯಾಲಯಕ್ಕೆ ತಾಯಿಯನ್ನು ಕಾಣಲು ಮನವಿ ಮಾಡಿದ್ದ ರಾಜನಿಗೆ, ನ್ಯಾಯಾಧೀಶರು ಆತನ ಮನವಿ ಪುರಸ್ಕರಿಸಿದ್ದಾರೆ.
ಜುಲೈ 8 ರಂದು ಆತ ಕಲ್ಮಾಡಿಯ ತನ್ನ ಮನೆಗೆ ಬಂದು ತಾಯಿಯನ್ನು ನೋಡಲು ಆಗಮಿಸಲಿದ್ದಾರೆ ಎಂದು ಪೊಲೀಸ್ ಮೂಲಗಳು ಖಚಿತ ಪಡಿಸಿವೆ. ಇನ್ನೊಂದಡೆ ಮಾಜಿ ಡಾನ್ ನನ್ನು ಸ್ವಾಗತಿಸಲು ಆತನ ಬಂಟರು ಸಿದ್ದರಾಗಿದ್ದಾರೆ ಅನ್ನೋ ಮಾಹಿತಿಯೂ ಲಭಿಸಿದೆ.
2015 ರಲ್ಲಿ ಮೊರಕ್ಕೋ ದೇಶದಲ್ಲಿ ಬಂಧನಕ್ಕೀಡಾಗಿದ್ದ ಬನ್ನಂಜೆ ರಾಜನನ್ನು ಬಳಿಕ ಸಿಬಿಐ ಒದಗಿಸಿದ ದಾಖಲೆ ಅನ್ವಯ ಭಾರತಕ್ಕೆ ಹಸ್ತಾಂತರಿಸಲಾಗಿತ್ತು.