ಮಳೆಗಾಗಿ ಉಡುಪಿಯಲ್ಲಿ ನಡೆಯಿತು ಮಂಡೂಕ ಕಲ್ಯಾಣೋತ್ಸವ
ಉಡುಪಿ, ಜೂನ್ 08: ಕರಾವಳಿಯಲ್ಲಿಯೂ ಕುಡಿಯುವ ನೀರಿಗೆ ಬರಗಾಲದ ಪರಿಸ್ಥಿತಿ ನಿರ್ಮಾಣವಾಗಿದೆ. ನೀರಿನ ಸಮಸ್ಯೆ ಕರಾವಳಿ ಜಿಲ್ಲೆಗಳಲ್ಲಿ ಗಂಭೀರ ಸ್ವರೂಪ ಪಡೆದಿದೆ. ದೇವಾಲಯ, ಮಸೀದಿ, ಚರ್ಚ್ ಗಳಲ್ಲಿ ಮಳೆಗಾಗಿ ಸಾಮೂಹಿಕ ಪ್ರಾರ್ಥನೆ, ಹೋಮ ಹವನ ಗಳನ್ನು ನಡೆಸಲಾಗಿದೆ. ಈ ನಡುವೆ ಜಲಕ್ಷಾಮದ ನಿವಾರಣೆಗಾಗಿ ಕಪ್ಪೆಗಳಿಗೆ ಮದುವೆ ಮಾಡಿದ ಪ್ರಸಂಗ ಉಡುಪಿಯಲ್ಲಿ ಬೆಳಕಿಗೆ ಬಂದಿದೆ.
ಉಡುಪಿಯ ಕಿದಿಯೂರ್ ಹೋಟೆಲಿನ ವಾಹನ ನಿಲುಗಡೆ ಪ್ರಾಂಗಣದಲ್ಲಿ ಇಂದು ಹಿಂದೂ ಸಂಪ್ರದಾಯದಂತೆ ಮಂಡೂಕ ಕಲ್ಯಾಣೋತ್ಸವ ನಡೆಯಿತು. ಕಾಲುಂಗುರ ತೊಡಿಸಿ, ಮಾಂಗಲ್ಯ ಕಟ್ಟಿ ಕಪ್ಪೆಗಳ ಮದುವೆಯನ್ನು ವಿಜೃಂಭಣೆಯಿಂದ ನೆರವೇರಿಸುವ ಮೂಲಕ ಮಳೆಗಾಗಿ ಪ್ರಾರ್ಥಿಸಲಾಯಿತು. ಉಡುಪಿ ಜಿಲ್ಲಾ ನಾಗರಿಕ ಸಮಿತಿ ಟ್ರಸ್ಟ್ ಮತ್ತು ಪಂಚರತ್ನಾ ಸೇವಾ ಟ್ರಸ್ಟ್ ಕಪ್ಪೆ ಮದುವೆಯನ್ನು ಆಯೋಜನೆ ಮಾಡಿತ್ತು.
ಕೆ.ಆರ್ ನಗರದಲ್ಲಿ ಮಳೆಗಾಗಿ ಅರಳಿ-ಬೇವಿನ ಮರಕ್ಕೆ ಮದ್ವೆ
ಮಂಡೂಕ ಕಲ್ಯಾಣೋತ್ಸವದಲ್ಲಿ ಕೊಳಲಗಿರಿ ಸಮೀಪದ ಕೀಳಿಂಜೆ ಎಂಬಲ್ಲಿ ಪತ್ತೆಯಾದ 'ವರ್ಷ' ಹೆಸರಿನ ಹೆಣ್ಣು ಕಪ್ಪೆ ಮತ್ತು ಉಡುಪಿ ಕಲ್ಸಂಕದಲ್ಲಿ ಪತ್ತೆಯಾದ 'ವರುಣ' ಹೆಸರಿನ ಗಂಡು ಕಪ್ಪೆಗೆ ಮದುವೆ ಮಾಡಲಾಯಿತು.
ಇದಕ್ಕೂ ಮೊದಲು ನಾಗರಿಕ ಸಮಿತಿಯ ಕಚೇರಿಯಿಂದ ಹೊರಟ ಮದುವೆ ದಿಬ್ಬಣ, ಹಳೆ ಡಯಾನ ವೃತ್ತ, ಕವಿ ಮುದ್ದಣ ಮಾರ್ಗವಾಗಿ ಕಿದಿಯೂರು ಹೊಟೇಲ್ ಕಡೆ ಸಾಗಿ ಬಂತು. ತ್ರಿಚಕ್ರ ಸೈಕಲ್ನಲ್ಲಿ ಇರಿಸಲಾದ ಪಂಜರದೊಳಗೆ ಕಪ್ಪೆಗಳನ್ನು ಇಟ್ಟು ದಿಬ್ಬಣದಲ್ಲಿ ತರಲಾಯಿತು. ಇದರಲ್ಲಿ ಮಾತೃ ಮಂಡಳಿ ಹಾಗೂ ಭಜನಾ ಮಂಡಳಿಗಳ ಒಕ್ಕೂಟದ ಮಹಿಳೆಯರು ಸಂಪ್ರಾದಾಯಿಕ ಉಡುಗೆ ತೊಡುಗೆಗಳೊಂದಿಗೆ ಆಗಮಿಸಿದರು. ಇದಕ್ಕೆ ಚಿಟ್ಪಾಡಿಯ ನಾಸಿಕ್ ಬ್ಯಾಂಡ್ ತಂಡದವರು ಸಾಥ್ ನೀಡಿದರು.
ಬತ್ತಿದ ಉಡುಪಿಯ ಜೀವನದಿ; ಇನ್ನೆಷ್ಟು ದಿನ ಸಿಗಬಹುದು ನೀರು?
ಪುರೋಹಿತರು ಸೂಚಿಸಿದ ಮುಹೂರ್ತದಲ್ಲಿ ಹೆಣ್ಣು ಕಪ್ಪೆಗೆ ಮಲ್ಲಿಗೆ ಹೂವು ಮುಡಿಸಿ, ತಿಲಕ ಹಚ್ಚಿ, ಕಾಲುಂಗುರ ತೊಡಿಸಿ, ಮಾಂಗಲ್ಯ ಕಟ್ಟುವ ಮೂಲಕ ವಿವಾಹ ನೆರವೇರಿಸಲಾಯಿತು. ಬಳಿಕ ಭಜನಾ ಮಂಡಳಿಯ ಮಹಿಳೆಯರು ಆರತಿ ಎತ್ತಿದರು. ಪ್ರತೇಕ ಬೋನಿನಲ್ಲಿ ಇರಿಸಲಾದ ಕಪ್ಪೆಯನ್ನು ಒಂದೇ ಬೋನಿನ ಒಳಗೆ ಹಾಕಲಾಯಿತು.