ಟಿಕೆಟ್ ಗಾಗಿ ದೇವರ ಮೊರೆ ಹೋದ ಮಾಜಿ ಶಾಸಕನ ಬೆಂಬಲಿಗರು
ಉಡುಪಿ, ಏಪ್ರಿಲ್ 18 : ಕರ್ನಾಟಕ ವಿಧಾನಸಭಾ ಚುನಾವಣೆ 2018ರ ಬಿಜೆಪಿ ಎರಡನೇ ಅಭ್ಯರ್ಥಿಗಳ ಪಟ್ಟಿ ಘೋಷಣೆಯಾದ ಬೆನ್ನಲ್ಲೇ ಬಹುತೇಕ ಹಾಲಿ ಹಾಗೂ ಮಾಜಿ ಶಾಸಕರಿಗೆ ಮತ್ತು ಟಿಕೆಟ್ ಆಕಾಂಕ್ಷಿಗಳಿಗೆ ಇರಿಸು ಮುರಿಸು ಶುರುವಾಗಿದೆ. ಜೊತೆಗೆ ಮೂರನೇ ಪಟ್ಟಿಯಲ್ಲಿ ನಮ್ಮ ಹೆಸರು ಇರುವುದೋ ಹೇಗೋ ಎಂಬ ಆತಂಕ ಮನೆ ಮಾಡಿದೆ. ಇದರ ನಡುವೆ ಟಿಕೆಟ್ ನಮಗೇ ಸಿಗಲಿ ಎಂದು ನಾಯಕರ ಬೆಂಲಿಗರು ಇದೀಗ ದೇವರ ಮೊರೆ ಹೋಗುತ್ತಿರುವುದು ವಿಶೇಷವಾಗಿದೆ.
ಟಿಕೇಟ್ 'ಕೈ' ತಪ್ಪಿದ್ದಕ್ಕೆ ಧ್ವಜ ಸುಟ್ಟ ಎಸ್.ಆರ್. ಮೊರೆ ಬೆಂಬಲಿಗರು
ಹೌದು, ಉಡುಪಿ ಮಾಜಿ ಶಾಸಕ ರಘುಪತಿ ಭಟ್ ಬೆಂಬಲಿಗರು ತಮ್ಮ ನಾಯಕನಿಗೆ ಟಿಕೆಟ್ ಸಿಗಲಿ ಎಂದು ಮಂಗಳವಾರ ದೇವರಿಗೆ ವಿಶೇಷ ಪೂಜೆ ಸಲ್ಲಿಸಿದ್ದಾರೆ.
ಅಭ್ಯರ್ಥಿಗಳ ಪಟ್ಟಿ : ಕಾಂಗ್ರೆಸ್ | ಬಿಜೆಪಿ | ಜೆಡಿಎಸ್
ಬಿಜೆಪಿ ಟಿಕೆಟ್ ಹಂಚಿಕೆ ಇನ್ನೂ ಕಗ್ಗಂಟಾಗಿಯೇ ಉಳಿದಿದ್ದು, ಮಾಜಿ ಶಾಸಕ ರಘುಪತಿ ಭಟ್ ಟಿಕೆಟ್ ನಿರೀಕ್ಷೆಯಲ್ಲಿದ್ದರು. ಎರಡನೇ ಅಭ್ಯರ್ಥಿಗಳ ಪಟ್ಟಿಯಲ್ಲಿ ಉಡುಪಿ ಕ್ಷೇತ್ರದ ಹೆಸರು ಘೋಷಣೆಯಾಗಿಲ್ಲ. ಈ ಹಿನ್ನೆಲೆಯಲ್ಲಿ ಬುಧವಾರ ಕೃಷ್ಣಮಠದಲ್ಲಿ ಜಮಾಯಿಸಿದ ರಘುಪತಿ ಭಟ್ ಬೆಂಬಲಿಗರು ಟಿಕೆಟ್ ಗಾಗಿ ದೇವರ ಮೊರೆ ಹೋಗಿದ್ದಾರೆ.
ಕೃಷ್ಣಮಠ ಮುಂಭಾಗದ ಅನಂತೇಶ್ವರ ದೇವಸ್ಥಾನಕ್ಕೆ ಆಗಮಿಸಿದ ಬೆಂಬಲಿಗರು ದೇವರಲ್ಲಿ ವಿಶೇಷ ಪ್ರಾರ್ಥನೆ ನೆರವೇರಿಸಿದರು. ಈ ವೇಳೆ ರಘುಪತಿ ಭಟ್ ಅವರ ವಯೋವೃದ್ಧ ತಾಯಿಯೂ ಇದ್ದದ್ದು ವಿಶೇಷವಾಗಿತ್ತು. ಉಡುಪಿ ಕ್ಷೇತ್ರದಿಂದ ರಘುಪತಿ ಭಟ್ ಒಬ್ಬರ ಹೆಸರು ಮಾತ್ರ ರಾಜ್ಯ ಸಮಿತಿಗೆ ಶಿಫಾರಸು ಮಾಡಲಾಗಿತ್ತು. ಆದರೂ ಉಡುಪಿಯ ಟಿಕೆಟ್ ಘೋಷಣೆ ಮಾಡದೇ ಇರುವುದು ಅವರ ಬೆಂಬಲಿಗರಿಗೆ ಭಾರಿ ನಿರಾಸೆ ತಂದಿದೆ.
ಈ ಮಧ್ಯೆ ಉಡುಪಿಯಲ್ಲಿ ಬೇರೆಯವರಿಗೆ ಟಿಕೆಟ್ ನೀಡಲಾಗುತ್ತದೆ ಎಂಬ ವದಂತಿಯೂ ಹರಿದಾಡುತ್ತಿದೆ. ಕಳೆದ ವಿಧಾನಸಭೆ ಚುನಾವಣೆ ಹೊತ್ತಿಗೆ ರಘುಪತಿ ಭಟ್ ರಾಸಲೀಲೆ ಸಿಡಿ ಬಿಡುಗಡೆಗೊಂಡ ಕಾರಣ ಬಿಜೆಪಿಗೆ ತೀವ್ರ ಇರಿಸು ಮುರಿಸಾಗಿತ್ತು. ಹೀಗಾಗಿ ರಘುಪತಿ ಭಟ್ ಕಣದಿಂದ ಹಿಂದೆ ಸರಿದಿದ್ದರು. ಹೀಗಾಗಿ ಕಾಂಗ್ರೆಸ್ ನ ಪ್ರಮೋದ್ ಮಧ್ವರಾಜ್ ಗೆಲುವು ಸಾಧಿಸಿದ್ದರು. ಈ ಬಾರಿಯೂ ನೈತಿಕ ಕಾರಣ ಮುಂದಿಟ್ಟು ರಘುಪತಿ ಭಟ್ ಬದಲು ಬೇರೆಯವರನ್ನು ಕಣಕ್ಕಿಳಿಸಲಾಗುತ್ತದೆ ಎಂಬ ಮಾತುಗಳು ಕೇಳಿ ಬರುತ್ತಿವೆ.
ಈ ವೇಳೆ ಪ್ರತಿಕ್ರಿಯೆ ನೀಡಿದ ಬಿಜೆಪಿ ಮುಖಂಡ ರಾಘವೇಂದ್ರ ಕಿಣಿ ,ಉಡುಪಿಯ ಅಭಿವೃದ್ಧಿಯ ಹರಿಕಾರ ರಘುಪತಿ ಭಟ್ ಕಾರ್ಯಕರ್ತರ ಆಯ್ಕೆಯಾಗಿದೆ. ಅವರಿಗೆ ಟಿಕೆಟ್ ಸಿಗುವ ವಿಶ್ವಾಸವಿದೆ. ಮಾತ್ರವಲ್ಲ ಅವರು ಇನ್ನೊಂದು ಅವಧಿಗೆ ಶಾಸಕರಾಗಿ ಆಯ್ಕೆ ಆಗುತ್ತಾರೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.