ಮಾಜಿ ಶಾಸಕ ರಘುಪತಿ ಭಟ್ ಎರಡನೇ ಮದುವೆ
ಉಡುಪಿ, ಅ 8: ಎರಡು ಬಾರಿ ಉಡುಪಿ ಕ್ಷೇತ್ರದಲ್ಲಿ ಬಿಜೆಪಿ ಟಿಕೆಟ್ ನಿಂದ ಸ್ಪರ್ಧಿಸಿ ಶಾಸಕರಾಗಿದ್ದ ರಘುಪತಿ ಭಟ್ ಅವರ ವೈಯಕ್ತಿಕ ಜೀವನದ ಎರಡನೇ ಇನ್ನಿಂಗ್ಸ್ ಇದೇ ತಿಂಗಳು ಆರಂಭವಾಗಲಿದೆ. ನಾಳೆ (ಬುಧವಾರ, ಅ 9) ರಘುಪತಿ ಭಟ್ ಎರಡನೇ ಮದುವೆಯಾಗಲಿದ್ದಾರೆ.
ಸೋಮವಾರ (ಅ 7) ಸಂಜೆ ಮಾಧ್ಯಮದವರನ್ನು ಉದ್ದೇಶಿಸಿ ಮಾತನಾಡುತ್ತಾ ರಘುಪತಿ ಭಟ್ ಈ ವಿಷಯವನ್ನು ಸ್ಪಷ್ಟ ಪಡಿಸಿದ್ದಾರೆ. ಉಡುಪಿ ನಗರ ವ್ಯಾಪ್ತಿಯ ಕರಂಬಳ್ಳಿ ವೆಂಕಟರಮಣ ದೇವಾಲಯದಲ್ಲಿ ಬೆಳಗ್ಗೆ 8.20ರ ಶುಭ ಮಹೂರ್ತದಲ್ಲಿ ರಘುಪತಿ ಭಟ್ ಎರಡನೇ ಬಾರಿಗೆ ವೈವಾಹಿಕ ಜೀವನಕ್ಕೆ ಕಾಲಿಡಲಿದ್ದಾರೆ.
ರಘುಪತಿ ಭಟ್ ಕೈಹಿಡಿಯಲಿರುವ ಬಾರ್ಕೂರಿನ ಶಿಲ್ಪಾ ಶಾಸ್ತ್ರಿಗೆ ಕೂಡಾ ಇದು ಎರಡನೇ ಮದುವೆ ಎನ್ನಲಾಗುತ್ತಿದೆ.
ನನ್ನ ಎರಡನೇ ಮದುವೆಯ ಬಗ್ಗೆ ಸಾರ್ವಜನಿಕರಲ್ಲಿ ಗೊಂದಲ ಮತ್ತು ಊಹಾಪೋಹ ಇದ್ದಿರುವುದರಿಂದ ಮಾಧ್ಯಮದವರನ್ನು ಕರೆದು ಸ್ಪಷ್ಟನೆ ನೀಡುತ್ತಿದ್ದೇನೆ. ಇದು ಎರಡೂ ಕುಟುಂಬದ ಒಪ್ಪಿಗೆ ಪಡೆದು ನಡೆಯುತ್ತಿರುವ ಮದುವೆ ಎಂದು ರಘುಪತಿ ಭಟ್ ಹೇಳಿದ್ದಾರೆ.
ಇದು ನನ್ನ ಖಾಸಗಿ ಕಾರ್ಯಕ್ರಮವಾಗಿದ್ದು ಮದುವೆಗೆ ನನ್ನ ಆಪ್ತ ಸ್ನೇಹಿತರು ಮತ್ತು ಕುಟುಂಬದವರನ್ನು ಮಾತ್ರ ಆಹ್ವಾನಿಸಿದ್ದೇನೆ. ರಾಜಕೀಯ ರಂಗದಲ್ಲಿ ನಾನು ಮುಂದುವರಿಯುತ್ತೇನೆ. ಆದರೂ ಸಕ್ರಿಯ ರಾಜಕಾರಣದಲ್ಲಿ ಅಷ್ಟಾಗಿ ಇನ್ನು ಮುಂದೆ ಕಾಣಿಸಿಕೊಳ್ಳುವುದಿಲ್ಲ ಎಂದು ರಘುಪತಿ ಭಟ್ ಹೇಳಿದ್ದಾರೆ.
ರಘುಪತಿ ಭಟ್ ಅವರ ಮೊದಲನೇ ಪತ್ನಿ ಪದ್ಮಪ್ರಿಯಾ ಮೃತ ಪಟ್ಟಿದ್ದರು. ಈ ರಘುಪತಿ ಭಟ್ ಯಾರು? ಮುಂದೆ ಓದಿ..
ರಘುಪತಿ ಭಟ್
ಜನಾನುರಾಗಿಯಾಗಿರುವ ರಘುಪತಿ ಭಟ್ ಅವರು 2004ರಲ್ಲಿ ನಡೆದ ವಿಧಾನಸಭೆ ಚುನಾವಣೆಯಲ್ಲಿ ಆಯ್ಕೆಯಾಗಿ ಬಂದಿದ್ದರು. 13ನೇ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ನ ಪ್ರಮೋದ್ ಮಧ್ವರಾಜ್ ಅವರನ್ನು 2,479 ಮತಗಳ ಅಂತರದಿಂದ ಸೋಲಿಸಿ ಎರಡನೇ ಬಾರಿಗೆ ವಿಧಾನಸಭೆಗೆ ಆಯ್ಕೆಯಾಗಿದ್ದರು.
ಹೆಂಡತಿ ನಾಪತ್ತೆ
ಜೂನ್ 10, 2008ರಂದು ಮಾರುತಿ ವ್ಯಾಗನ್ ಕಾರಿನಲ್ಲಿ ಸ್ವತಃ ಡ್ರೈವ್ ಮಾಡಿಕೊಂಡು ತವರಿಗೆ ಹೊರಟ 32ರ ಹರೆಯದ ರಘುಪತಿ ಭಟ್ ಪತ್ನಿ ನಿಗೂಢವಾಗಿ ಕಣ್ಣರೆಯಾಗಿದ್ದರು. ಶಾಸಕರ ಪತ್ನಿ ನಾಪತ್ತೆಯಾಗಿರುವುದು ದೇಶಾದ್ಯಂತ ಭಾರೀ ಚರ್ಚೆಗೆ ಒಳಗಾಗಿತ್ತು. ನವದೆಹಲಿಯ ವಸತಿ ಗೃಹವೊಂದರಲ್ಲಿ ಪದ್ಮಪ್ರಿಯಾ ಅವರ ಮೃತ ದೇಹ ಪತ್ತೆಯಾಗಿತ್ತು.
ತಪ್ಪೊಪ್ಪಿಗೆ
ಪದ್ಮಪ್ರಿಯಾ ಸಾವಿನ ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿದ್ದ ಅತುಲ್ ರಾವ್ ತಪ್ಪೊಪ್ಪಿಕೊಂಡು, ತನಗೂ ಹಾಗೂ ಶಾಸಕರ ಪತ್ನಿ ಪದ್ಮಪ್ರಿಯಾಗೂ ದೈಹಿಕ ಸಂಬಂಧವಿತ್ತು. ತನಗೆ ಅಡಿಕೆ ವ್ಯಾಪಾರ ಇದ್ದಿದ್ದರಿಂದ ಅಗಾಗ ಕಾರ್ಕಳಕ್ಕೆ ಹೋಗಿ ಬರುವ ಕೆಲಸವಿರುತ್ತಿತ್ತು. ಆಗ ತಾನು ಮತ್ತು ಪದ್ಮಪ್ರಿಯಾ 5-6 ಬಾರಿ ಖಾಸಗಿ ಲಾಡ್ಜ್ ಒಂದರಲ್ಲಿ ಉಳಿದುಕೊಂಡಿದ್ದೆವು ಎಂದು ಸಿಓಡಿಗೆ ನೀಡಿದ ಹೇಳಿಕೆಯಲ್ಲಿ ಅತುಲ್ ಬಹಿರಂಗಪಡಿಸಿದ್ದರು.
ಧರ್ಮಸ್ಥಳ ದೇವರ ಮೇಲೆ ಆಣೆ
ನನ್ನ ಪತ್ನಿ ಪದ್ಮಪ್ರಿಯಾಳ ಕೊಲೆಗೂ ನನಗೂ ಯಾವುದೇ ಸಂಬಂಧವಿಲ್ಲ. ನಾನು ಆಕೆಯನ್ನು ಕೊಲೆಯೂ ಮಾಡಿಲ್ಲ, ಮಾಡಿಸಿಯೂ ಇಲ್ಲ. ಹೀಗೆಂದು ಶ್ರೀಕ್ಷೇತ್ರ ಧರ್ಮಸ್ಥಳದ ಮಂಜುನಾಥನ ಮುಂದೆ ಲಿಖಿತವಾಗಿ ಪ್ರಮಾಣ ಮಾಡಿದ್ದೇನೆ ಎಂದು ರಘುಪತಿ ಭಟ್ ಹೇಳಿದ್ದರು. ನಮ್ಮ ಮನೆ ದೈವದ ಅಣತಿಯಂತೆ ಧರ್ಮಸ್ಥಳ ಕ್ಷೇತ್ರದ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆ ಅವರ ಬಳಿ ಸಮಾಲೋಚಿಸಿ ಅವರ ಒಪ್ಪಿಗೆ ಪಡೆದು ನನ್ನ ತಾಯಿ ಮತ್ತು ಮಕ್ಕಳ ಸಮ್ಮುಖದಲ್ಲಿ ಮಂಜುನಾಥನ ಮುಂದೆ ಪ್ರಮಾಣ ಮಾಡಿದ್ದೇನೆ.
ಬ್ಲೂ ಫಿಲಂ
ರಘುಪತಿ ಭಟ್ ಅವರನ್ನು ಕಳೆದ ವಿಧಾನಸಭಾ ಚುನಾವಣೆಯ ಹೊತ್ತಿನಲ್ಲಿ ಮತ್ತೊಂದು ಹಗರಣ ಸುತ್ತಿಕೊಂಡಿತ್ತು. ಶಾಸಕ ರಘುಪತಿ ಭಟ್ ಅವರು ಯುವತಿಯೊಬ್ಬಳ ಜತೆ ಸರಸ ಸಲ್ಲಾಪದಲ್ಲಿ ತೊಡಗಿರುವ ವಿಡಿಯೋ ಜಿಲ್ಲೆಯಾದ್ಯಂತ 15 ದಿನಗಳಿಂದ ಹರಿದಾಡಿ, ರಾಜಧಾನಿ ಬೆಂಗಳೂರಿನ ಮಾಧ್ಯಮ ಕಚೇರಿಗಳಿಗೆ ಅನಾಮಧೇಯ ವ್ಯಕ್ತಿಗಳು ತಲುಪಿಸಿದ್ದರು. ಬ್ಲೂ ಫಿಲಂ ಘಟನೆಯಿಂದ ತೀವ್ರ ಮುಜುಗರಕ್ಕೊಳಗಾದ ರಘುಪತಿ ಭಟ್ ಚುನಾವಣಾ ಕಣದಿಂದ ಹಿಂದಕ್ಕೆ ಸರಿದರು. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಈ ಕ್ಷೇತ್ರದಲ್ಲಿ ಹೀನಾಯ ಸೋಲು ಅನುಭವಿಸಿತ್ತು.