ಹೆಬ್ರಿಯಲ್ಲಿ ಮಣ್ಣಿನಡಿ ಹೂತಿಟ್ಟಿದ್ದ ಲಕ್ಷಾಂತರ ಮೌಲ್ಯದ ಮರ ವಶ
ಉಡುಪಿ, ಪೆಬ್ರವರಿ 17: ಹೆಬ್ರಿ ಅರಣ್ಯ ಇಲಾಖೆಯ ಕಾರ್ಯಾಚರಣೆ ವೇಳೆ ಲಕ್ಷಾಂತರ ರುಪಾಯಿ ಬೆಲೆ ಬಾಳುವ ಅಕ್ರಮ ಮರಮಟ್ಟು ಪತ್ತೆಯಾಗಿದೆ.
ಕಾರ್ಕಳ ತಾಲ್ಲೂಕು ಪಂಚಾಯತ್ ಸದಸ್ಯ, ಬಿಜೆಪಿ ಮುಖಂಡ, ಹೆಸರಾಂತ ಸಮಾಜ ಸೇವಕ ತನ್ನ ಕೊಪ್ಪರಗುಂಡಿ ಮನೆಯ ಆವರಣದ ಮಣ್ಣಿನಡಿಯಲ್ಲಿ ಹೂತಿಟ್ಟ ಲಕ್ಷಾಂತರ ರುಪಾಯಿ ಬೆಲೆ ಬಾಳುವ ನೂರಕ್ಕೂ ಹೆಚ್ಚು ಮರದ ದಿಮ್ಮಿಯನ್ನು ಜೆಸಿಬಿಯ ಮೂಲಕ ಹೊರ ತೆಗೆಯಲಾಗಿದೆ.
ಅರಣ್ಯ ಇಲಾಖೆ ಅಧಿಕಾರಿಗಳು ಕಾರ್ಯಚರಣೆ ನಡೆಸಿ ಮರಗಳನ್ನು ವಶಪಡಿಸಿಕೊಂಡಿದ್ದಾರೆ. ಅಗೆದಷ್ಟು ಮಣ್ಣಿನ ಅಡಿಯಲ್ಲಿ ಮರದ ದಿಮ್ಮಿಗಳು ಸಿಗುತ್ತಿದ್ದು ಕಾರ್ಯಚರಣೆ ಈಗಲೂ ಮುಂದುವರಿದಿದೆ.
ಆರೋಪಿಯು ಕಳೆದ ಹಲವು ವರ್ಷಗಳಿಂದ ಅರಣ್ಯ ಲೂಟಿ ಮಾಡುತ್ತಿದ್ದು, ಹೆಬ್ರಿ ಸುತ್ತಮುತ್ತಲಿನ ಬೃಹತ್ ತಂಡವೇ ಇದರ ಹಿಂದೆ ಇದೆ. ಎರಡು ವರ್ಷದ ಹಿಂದೆ ಇದೇ ವ್ಯಕ್ತಿಯ ಬಗ್ಗೆ ಹೆಬ್ರಿ ಅರಣ್ಯ ಇಲಾಖೆಯಲ್ಲಿ ಪ್ರಕರಣ ದಾಖಲಾಗಿದ್ದು, 1.50 ಲಕ್ಷ ರುಪಾಯಿ ದಂಡ ವಿಧಿಸಲಾಗಿತ್ತು.
ಹೆಬ್ರಿಯ ಯುವ ದಕ್ಷ ವಲಯ ಅರಣ್ಯಾಧಿಕಾರಿ ಮುನಿರಾಜ್ ಅವರ ಕಾನೂನು ಪಾಲನೆ ಮತ್ತು ಕಾರ್ಯಚರಣೆಗೆ ವ್ಯಾಪಕವಾಗಿ ಶ್ಲಾಘನೆ ವ್ಯಕ್ತವಾಗುತ್ತಿದೆ. ಆರೋಪಿಯು ರಾಜಕೀಯವಾಗಿ ಪ್ರಭಾವಿಯಾಗಿರುವುದರಿಂದ ದಾಳಿ ಮಾಡಿದ ಅಧಿಕಾರಿಯನ್ನು ವರ್ಗಾವಣೆ ಮಾಡುವ ಹುನ್ನಾರವೂ ತೆರೆಮರೆಯಲ್ಲಿ ನಡೆಯುತ್ತಿದೆ ಎನ್ನಲಾಗಿದೆ.