ಕರಾವಳಿ ಯುವಕನ ಕಾಗೆ ಬಿಸ್ನೆಸ್ ಗೆ ಬ್ರೇಕ್; ಕಾಗೆ ಈಗ ಕಾಡಿಗೆ...
ಮಂಗಳೂರು, ಜುಲೈ 15: ಕಾಗೆ ಬಳಸಿ ವ್ಯವಹಾರ ನಡೆಸುತ್ತಿದ್ದ ಕರಾವಳಿಯ ಯುವಕನ ಕಾಗೆ ಬಿಸ್ನೆಸ್ ಗೆ ಅರಣ್ಯ ಇಲಾಖೆ ಬ್ರೇಕ್ ಹಾಕಿದೆ.
ಕಾಪು ನಿವಾಸಿ ಪ್ರಶಾಂತ್ ಪೂಜಾರಿ, ವೈಕುಂಠ ಸಮಾರಾಧನೆ ದಿನ ಕಾಗೆ ಒದಗಿಸುವ ವ್ಯವಹಾರ ಆರಂಭಿಸಿದ್ದರು. ಇದೀಗ ಅರಣ್ಯ ಇಲಾಖೆ ಅಧಿಕಾರಿಗಳು ಆ ಸಾಕಿದ ಕಾಗೆಯನ್ನು ವಶಕ್ಕೆ ಪಡೆದು ಕಾಡಿಗೆ ಬಿಟ್ಟಿದ್ದಾರೆ.
ಕಾಪು ಹುಡುಗನ ಫೇಮಸ್ 'ಕಾಗೆ ಬಿಸ್ನೆಸ್'
ಹಿಂದೂ ಸಂಪ್ರದಾಯದಲ್ಲಿ ಮನುಷ್ಯ ಸತ್ತು ಹನ್ನೊಂದನೇ ಅಥವಾ ಹದಿಮೂರನೇ ದಿನ ಉತ್ತರಕ್ರಿಯೆ ಮಾಡುವುದು ವಾಡಿಕೆ. ಈ ಸಂದರ್ಭ, ಸತ್ತವರಿಗೆ ಎಡೆ ಇಡುವ ಆಹಾರವನ್ನು ಮೊದಲು ಕಾಗೆ ತಿನ್ನಬೇಕು. ಸತ್ತವರ ಆತ್ಮ ಕಾಗೆ ರೂಪದಲ್ಲಿ ಬಂದು ಆಹಾರ ಸೇವಿಸುತ್ತದೆ ಎಂಬ ನಂಬಿಕೆ ಇಲ್ಲಿಯದು. ಇದನ್ನೇ ಬಂಡವಾಳ ಮಾಡಿಕೊಂಡ ಉಡುಪಿ ಜಿಲ್ಲೆಯ ಕಾಪು ನಿವಾಸಿ ಪ್ರಶಾಂತ್ ಪೂಜಾರಿ ಕಾಗೆಯನ್ನೇ ತನ್ನ ನೂತನ ಬಿಸ್ನೆಸ್ ಗೆ ಬಳಸಿಕೊಂಡಿದ್ದರು. ವೈಕುಂಠ ಸಮಾರಾಧನೆ ದಿನ ಕಾಗೆ ಒದಗಿಸುವ ಹೊಸ ಬಿಸ್ನೆಸ್ ಆರಂಭಿಸಿದ್ದರು.
ಪ್ರಶಾಂತ್ ಅವರ ಈ ಬಿಸ್ನೆಸ್ ವಿಚಾರ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಪ್ರಶಾಂತ್ ಅವರ ಈ ಸೇವೆಗೆ ಸಾಮಾಜಿಕ ಜಾಲತಾಣದಲ್ಲಿ ಕೆಲವರು ಮೆಚ್ಚುಗೆ ವ್ಯಕ್ತಪಡಿಸಿದ್ದರೆ, ಮತ್ತೆ ಕೆಲವರು ವಿರೋಧ ವ್ಯಕ್ತಪಡಿಸಿದ್ದರು. ಕಾಗೆ ವಿಷಯ ರಾಜ್ಯದಾದ್ಯಂತ ಭಾರೀ ಸುದ್ದಿಯಾಗುತ್ತಿದ್ದಂತೆ ಎಚ್ಚೆತ್ತ ಪ್ರಾಣಿ ದಯಾ ಸಂಘದ ಸದಸ್ಯರು ಈ ಬಗ್ಗೆ ಅರಣ್ಯ ಇಲಾಖೆ ಹಿರಿಯ ಅಧಿಕಾರಿಗಳ ಗಮನಕ್ಕೆ ತಂದಿದ್ದಾರೆ ಎಂದು ಹೇಳಲಾಗಿದೆ.
ಈ ಹಿನ್ನೆಲೆಯಲ್ಲಿ ಉಡುಪಿ ವಲಯ ಅರಣ್ಯಾಧಿಕಾರಿಗಳ ಆದೇಶದ ಮೇರೆಗೆ ಕಾಪು ಅರಣ್ಯ ಇಲಾಖಾ ಅಧಿಕಾರಿಗಳು ಪ್ರಶಾಂತ್ ಪೂಜಾರಿ ಮನೆಗೆ ತೆರಳಿ ಕಾಗೆಯನ್ನು ವಶಕ್ಕೆ ಪಡೆದಿದ್ದಾರೆ. ನಂತರ ಅದನ್ನು ಕಾಡಿಗೆ ಬಿಟ್ಟಿದ್ದಾರೆ.