ಹತ್ತು ವರ್ಷ ಕಳೆದರೂ ಮುಗಿದಿಲ್ಲ ಕುಂದಾಪುರದ ಈ ಫ್ಲೈ ಓವರ್ ಕಾಮಗಾರಿ
ಉಡುಪಿ, ಅಕ್ಟೋಬರ್ 21: ಕರಾವಳಿಯ ರಾಷ್ಟ್ರೀಯ ಹೆದ್ದಾರಿಯ ಮೇಲ್ಸೇತುವೆಗಳದ್ದು ದೊಡ್ಡ ಗೋಳು. ಮಂಗಳೂರಿನ ಪಂಪ್ ವೆಲ್ ಫ್ಲೈ ಓವರ್ ಕಾಮಗಾರಿ ವರ್ಷಗಟ್ಟಲೆ ನಡೆಯುತ್ತಲೇ ಇದ್ದು, ಸಂಚಾರಕ್ಕೆ ಇನ್ನೂ ಮುಕ್ತವಾಗಿಲ್ಲ. ಈ ಸಾಲಿಗೆ ಸೇರುವ ಇನ್ನೂ ಒಂದು ಮೇಲ್ಸೇತುವೆ ಎಂದರೆ ಕುಂದಾಪುರದ ಶಾಸ್ತ್ರಿ ಸರ್ಕಲ್ ನದ್ದು. ಬಹುತೇಕ ದಶಮಾನೋತ್ಸವ ಕಂಡರೂ ಈ ಸೇತುವೆ ಕಾಮಗಾರಿ ಮುಗಿಸಿ ಸಂಚಾರಕ್ಕೆ ಮುಕ್ತಗೊಳಿಸಬೇಕು ಎಂದು ಇಲ್ಲಿನ ಸಂಸದರಿಗೂ ಅನ್ನಿಸಿಲ್ಲ.
ಹತ್ತು ವರ್ಷಗಳ ಹಿಂದೆ ಕಾಮಗಾರಿ ಆರಂಭ
ಈ ಮೇಲ್ಸೇತುವೆ ಕಾಮಗಾರಿ ಆರಂಭಿಸಿ ಸುಮಾರು ಹತ್ತು ವರ್ಷಗಳೇ ಆಗಿವೆ. ಅಂಡರ್ಪಾಸ್ ಕೆಲಸಕ್ಕೆ ಐದು ವರ್ಷ ತೆಗೆದುಕೊಂಡರೆ, ರಸ್ತೆ ಹಾಗೂ ಬ್ರಿಜ್ ಗಳ ಅರೆಬರೆ ಕಾಮಗಾರಿಯಷ್ಟೆ ಮುಗಿದಿದೆ. ಸುಗಮ ಸಂಚಾರಕ್ಕಾಗಿ ಕೈಗೊಂಡ ಹೆದ್ದಾರಿ ವಿಸ್ತರಣೆ ಸದ್ಯ ವಾಹನ ಸವಾರರ ಪ್ರಾಣಕ್ಕೇ ಸಂಚಕಾರ ತರುವಂತಿದೆ.
ಸಿರ್ಸಿ ವೃತ್ತ ಮೇಲ್ಸೇತುವೆಯ ಇನ್ನೊಂದು ಬದಿಯ ದುರಸ್ತಿ ಕಾಮಗಾರಿ ಕೇಳೋರಿಲ್ಲ
Recommended Video
ಕೂಳೂರು ಟು ಕುಂದಾಪುರ ಹೆದ್ದಾರಿ 66
ಇದು ಕೂಳೂರು ಟು ಕುಂದಾಪುರ ರಾಷ್ಟ್ರೀಯ ಹೆದ್ದಾರಿ 66ರ ಕಥೆ. 2012ರಲ್ಲಿ ಹೆದ್ದಾರಿ ವಿಸ್ತರಣೆ ಕಾಮಗಾರಿ ಮುಗಿಸಿ, ಸಂಚಾರಕ್ಕೆ ಬಿಟ್ಟು ಕೊಡಬೇಕಿದ್ದರೂ ಅವಧಿ ವಿಸ್ತರಣೆಗೊಂಡು 2014ಕ್ಕೆ ರಸ್ತೆ ಕಾಮಗಾರಿ ಪೂರೈಸಬೇಕಿತ್ತು. ಆದರೆ 2020 ಕಾಲಿಡುತ್ತಿದ್ದರೂ ರಸ್ತೆ ಇನ್ನೂ ಸಂಚಾರಕ್ಕೆ ಮುಕ್ತವಾಗಿಲ್ಲ. ಜನ ಹಲವು ಬಾರಿ ಹೋರಾಟ ಮಾಡಿ, ಜನಪ್ರತಿನಿಧಿಗಳಿಗೆ ಮನವಿ ಸಲ್ಲಿಸಿದ್ದರೂ ಗುತ್ತಿಗೆದಾರರು ಕ್ಯಾರೇ ಮಾಡುತ್ತಿಲ್ಲ. ಸಾಮಾಜಿಕ ಜಾಲತಾಣದಲ್ಲಿ ಅತಿ ಹೆಚ್ಚು ಟ್ರೋಲ್ ಗೆ ಒಳಗಾಗಿ ಕಾಮಗಾರಿ ನಿಂತು ತಿಂಗಳುಗಳೇ ಉರುಳಿವೆ.
2020 ಬರುತ್ತಿದ್ದರೂ ಮುಗಿಯುವ ಲಕ್ಷಣವಿಲ್ಲ
ಹೆದ್ದಾರಿ ವಿಸ್ತರಣೆ ಗುತ್ತಿಗೆ ಪಡೆದ ಕಂಪನಿ ಇಷ್ಟು ಹೊತ್ತಿಗೆ ಮೇಲ್ಸೇತುವೆ ಹಾಗೂ ಅಂಡರ್ಪಾಸ್ ಕೆಲಸ ಮುಗಿಸಬೇಕಿತ್ತು. ಸಾರ್ವಜನಿಕರು ಫ್ಲೈಓವರ್ ಮತ್ತು ಅಂಡರ್ಪಾಸ್ ಕಾಮಗಾರಿ ನಿಧಾನಗತಿ ವಿರುದ್ಧ ಕುಂದಾಪುರ ಅಂದಿನ ಎಸಿ ಭೂಬಾಲನ್ ಅವರಿಗೆ ದೂರು ನೀಡಿದ್ದರು. ದೂರು ದಾಖಲಿಸಿಕೊಂಡಿದ್ದ ಎಸಿ ಕಂಪೆನಿ ವಿರುದ್ಧ ಪ್ರಕರಣ ದಾಖಲಿಸಿ, ಕೋರ್ಟಿಗೆ ಹಾಜರಾಗುವಂತೆ ಸೂಚಿಸಿದ್ದರು.
ಎಸಿ ಕೋರ್ಟ್ನಲ್ಲಿ ಕಂಪನಿ 2019, ಮಾ.31ರೊಳಗೆ ಫ್ಲೈಓವರ್ ಹಾಗೂ 2019 ಮೇ 31ರ ಒಳಗೆ ಬಸ್ರೂರು ಅಂಡರ್ಪಾಸ್ ಕಾಮಗಾರಿ ಮುಗಿಸುತ್ತೇವೆ ಎಂದು ಹೇಳಿಕೆ ನೀಡಿತ್ತು. ಆದರೆ 2020 ಸಮೀಪಿಸುತ್ತಿದ್ದರೂ ಕಾಮಗಾರಿ ಮುಗಿಯುವ ಲಕ್ಷಣ ಕಾಣುತ್ತಿಲ್ಲ.
ತೊಕ್ಕೊಟ್ಟು ಮೇಲ್ಸೇತುವೆ ಉದ್ಘಾಟನೆ ಮತ್ತೆ ಮುಂದೂಡಿಕೆ
ಅಸಮಾಧಾನ ಹೊರಹಾಕಿದ್ದ ಶೋಭಾ ಕರಂದ್ಲಾಜೆ ಎಲ್ಲಿ?
ಸ್ಥಳೀಯ ಸಂಸದೆ ಶೋಭಾ ಕರಂದ್ಲಾಜೆ ಅವರನ್ನೂ ಈ ಕುರಿತು ಪ್ರಶ್ನಿಸಿದರೆ ಸಿಟ್ಟಾಗುತ್ತಿದ್ದಾರೆ. ಈ ಮೊದಲು ಬಿಜೆಪಿಯೇತರ ಸಂಸದರಿದ್ದಾಗ ರಾಷ್ಟ್ರೀಯ ಹೆದ್ದಾರಿ ವಿಸ್ತರಣೆ ಮತ್ತು ಫ್ಲೈ ಓವರ್ ಕಾಮಗಾರಿ ನಿಧಾನಗತಿ ಬಗ್ಗೆ ಅಸಮಾಧಾನ ಹೊರಹಾಕುತ್ತಿದ್ದ ಅವರು, ಈಗ ಮೌನಕ್ಕೆ ಜಾರಿದ್ದಾರೆ. ಮಾತ್ರವಲ್ಲ, ಉಡುಪಿ ಚಿಕ್ಕಮಗಳೂರು ಕ್ಷೇತ್ರದ ಸಂಸದೆಯಾಗಿರುವ ಶೋಭಾ, ಕ್ಷೇತ್ರಕ್ಕೆ ತಲೆ ಹಾಕದೆ, ರಾಜ್ಯ ರಾಜಕಾರಣದಲ್ಲಿ ಬ್ಯುಸಿಯಾಗಿದ್ದಾರೆ.
ಈ ಮೇಲ್ಸೇತುವೆ ಕಾಮಗಾರಿ ಕುರಿತು ಹೇಳುವವರು ಕೇಳುವವರೇ ಇಲ್ಲವಾಗಿದ್ದಾರೆ.