ಕಡಲ್ಕೊರೆತ ಪ್ರದೇಶಕ್ಕೆ ಸಚಿವ ಆರ್.ಅಶೋಕ್ ಭೇಟಿ: 5 ಕೋಟಿ ರೂ. ಘೋಷಣೆ
ಉಡುಪಿ, ಆಗಸ್ಟ್ 07: ಉಡುಪಿ ಜಿಲ್ಲೆ ಪಡುಬಿದ್ರೆಯ ಕಡಲ್ಕೊರೆತ ಪ್ರದೇಶಕ್ಕೆ ಇಂದು ಕಂದಾಯ ಸಚಿವ ಆರ್.ಅಶೋಕ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.
Recommended Video
ಈ ವೇಳೆ ಮಾತನಾಡಿದ ಸಚಿವ ಆರ್.ಅಶೋಕ್, ಉಡುಪಿ ಜಿಲ್ಲೆಯೂ ಸೇರಿದಂತೆ ರಾಜ್ಯದ ಹನ್ನೊಂದು ಜಿಲ್ಲೆಗಳಿಗೆ ಪ್ರಕೃತಿ ವಿಕೋಪ ನಿಧಿಯಿಂದ ತಲಾ ಐದು ಕೋಟಿ ರುಪಾಯಿ ಬಿಡುಗಡೆ ಮಾಡುವುದಾಗಿ ಘೋಷಿಸಿದರು.
ಕರಾವಳಿಯಲ್ಲಿ ಭಾರೀ ಮಳೆ: ಕಡಲ್ಕೊರೆತ ಪ್ರದೇಶಗಳಿಗೆ ಕಂದಾಯ ಸಚಿವರ ಭೇಟಿ
ಕೊಡಗು ಹೊರತುಪಡಿಸಿದರೆ ಉಳಿದ ಜಿಲ್ಲೆಗಳಲ್ಲಿ ಸಾಮಾನ್ಯ ಸ್ಥಿತಿ ಇದೆ ಎಂದ ಸಚಿವರು, ಮಳೆ ಮತ್ತು ನೆರೆಯ ಪರಿಸ್ಥಿತಿ ನಿಯಂತ್ರಣದಲ್ಲಿದೆ. ಕೊಡಗಿನಲ್ಲಿ ಅರ್ಚಕರು ಮನೆ ಖಾಲಿ ಮಾಡದ ಕಾರಣ ಸಮಸ್ಯೆಯಾಗಿದೆ. ಕೊಡಗಿಗೂ ನಾನು ಭೇಟಿ ನೀಡುತ್ತೇನೆ ಎಂದರು.
ಸದ್ಯ ಉಡುಪಿ-ಮಂಗಳೂರು, ಕಾರವಾರ ಪ್ರವಾಸದಲ್ಲಿದ್ದೇನೆ. ಅಧಿಕಾರಿಗಳನ್ನು ಅಲರ್ಟ್ ಮಾಡಲು ಈ ಪ್ರವಾಸ ಕೈಗೊಂಡಿದ್ದು, ಯಾವುದೇ ಅಧಿಕಾರಿಗಳು ರಜೆ ತೆಗೆದುಕೊಳ್ಳದೆ ಕೆಲಸ ಮಾಡಬೇಕು. ಕಂದಾಯ, ಪೊಲೀಸ್ ಇಲಾಖೆಯ ಜವಾಬ್ದಾರಿ ತುಂಬಾ ಹೆಚ್ಚಿದೆ. ಕಳೆದ ಬಾರಿಯಾದಂತೆ ಯಾವುದೇ ಅನಾಹುತ ಆಗಬಾರದು ಎಂದು ಹೇಳಿದರು.
ಕಳೆದ ಬಾರಿ ನಮ್ಮ ಸರ್ಕಾರ ಆಗಷ್ಟೆ ಅಧಿಕಾರಕ್ಕೆ ಬಂದಿತ್ತು. ಹಿಂದಿನ ಸರಕಾರ ಯಾವುದೇ ತಯಾರಿ ಮಾಡಿರಲಿಲ್ಲ. ಈ ಬಾರಿ ಎಲ್ಲ ರೀತಿಯ ತಯಾರಿ ಮಾಡಿಕೊಂಡಿದ್ದೇವೆ ಎಂದು ಹೇಳಿದರು. ಕಳೆದ ಒಂದು ತಿಂಗಳಿಂದ ಸನ್ನದ್ಧ ಸ್ಥಿತಿಯಲ್ಲಿದ್ದೇವೆ. ಎಲ್ಲ ಜಿಲ್ಲಾಧಿಕಾರಿಗಳ ಜೊತೆ ಸಭೆ ನಡೆಸಿದ್ದೇನೆ. ಜಿಲ್ಲಾಡಳಿತ ಕೇಳಿದಷ್ಟು ಹಣವನ್ನು ನೀಡಿದ್ದೇವೆ ಎಂದು ತಿಳಿಸಿದರು.
ಬೋಟು, ಕಟ್ಟಿಂಗ್ ಮಿಷನ್, ಲೈಟ್ ಎಲ್ಲ ವ್ಯವಸ್ಥೆ ಮಾಡಿದ್ದಾರೆ. ಅಗ್ನಿಶಾಮಕ ದಳಕ್ಕೆ ಪ್ರತ್ಯೇಕವಾಗಿ 20 ಕೋಟಿ ರೂ. ಬಿಡುಗಡೆ ಮಾಡಲಾಗಿದೆ. ಪೊಲೀಸ್, ಅಗ್ನಿಶಾಮಕ ದಳ, ಕಂದಾಯ ಇಲಾಖೆ ಜಂಟಿಯಾಗಿ ಕೆಲಸ ಮಾಡುತ್ತೇವೆ. ಕಳೆದ ಬಾರಿಯ ರೀತಿಯಲ್ಲಿ ಯಾವುದೇ ಅನಾಹುತ ಆಗದಂತೆ ಕ್ರಮ ಕೈಗೊಂಡು, ಮಳೆ ಪರಿಸ್ಥಿತಿಯನ್ನು ಸಮರ್ಥವಾಗಿ ನಿಭಾಯಿಸುತ್ತೇವೆ ಎಂದರು.
ಉಡುಪಿಯ ಪಡುಬಿದ್ರಿ ಬೀಚ್ ನಲ್ಲಿ ಕಡಲ್ಕೊರೆತ ಆಗಿದೆ. ಕಡಲ್ಕೊರೆತಕ್ಕೆ ಪ್ರವಾಸೋದ್ಯಮದ ಕೇಂದ್ರ ಕೊಚ್ಚಿಹೋಗಿದ್ದು, ಈ ಭಾಗದಲ್ಲಿ ಸಾಕಷ್ಟು ಮನೆಗಳು ಕೂಡ ಇವೆ. ಶಾಶ್ವತ ತಡೆಗೋಡೆ ನಿರ್ಮಿಸಲು ಎಸ್ಟಿಮೇಟ್ ಮಾಡಲು ಹೇಳಿದ್ದೇನೆ. ಕೇಂದ್ರ ಸರ್ಕಾರದ NDRF ಹಣ 300 ಕೋಟಿ ರುಪಾಯಿ ಇದೆ ಎಂದು ಹೇಳಿದರು.