ಮೀನುಗಾರಿಕೆಗೆ ವಿದಾಯ : ಕರ್ನಾಟಕ ಕರಾವಳಿಯ ಪಾಲಿಗೆ ಕರಾಳ ವರ್ಷ!
ಉಡುಪಿ, ಮೇ 26 : ಮೀನುಗಾರಿಕೆ ಅನ್ನೋದು ಬಹುದೊಡ್ಡ ಉದ್ಯಮ; ಕರಾವಳಿಯ ಒಂದು ವರ್ಗ ಈ ಮೀನುಗಾರಿಕೆಯನ್ನೇ ನಂಬಿ ಜೀವನೋಪಾಯ ಮಾಡುತ್ತಿದೆ.
ನೇರವಾಗಿ ಮತ್ತು ಪರೋಕ್ಷವಾಗಿ ಮೀನುಗಾರಿಕೆಯಲ್ಲಿ ತೊಡಗಿಸಿಕೊಂಡವರ ಸಂಖ್ಯೆ ಲಕ್ಷಾಂತರ. ಇಂತಹ ಮೀನುಗಾರರಿಗೆ ಪ್ರಕೃತಿಯ ಕೃಪೆ ಬಹುಮುಖ್ಯ. ಒಂದುವೇಳೆ ಪ್ರಕೃತಿ ಮುನಿದರೆ ಮೀನುಗಾರ ಆ ದಿನದ ಮಟ್ಟಿಗೆ ಉಪವಾಸ ಕೂರಬೇಕು.
ಕರ್ನಾಟಕ ಕರಾವಳಿಯಲ್ಲಿ ಆಳ ಸಮುದ್ರ ಮೀನುಗಾರಿಕೆ ಅವಧಿಗೂ ಮುನ್ನ ಮುಕ್ತಾಯವಾಗಿದೆ. ಏಷ್ಯಾದ ಅತೀ ದೊಡ್ಡ ಸರ್ವಋತು ಮೀನುಗಾರಿಕಾ ಬಂದರು ಎಂಬ ಹಿರಿಮೆಗೆ ಪಾತ್ರವಾದ ಉಡುಪಿಯ ಮಲ್ಪೆ ಬಂದರಿನಲ್ಲಿ ಮೀನುಕ್ಷಾಮದ ನೋವಿನೊಂದಿಗೆ ಈ ಋತು ಮುಗಿದಿದೆ. ಸಾವಿರಾರು ಬೋಟುಗಳು ಈಗಲೇ ಬಂದು ಲಂಗರು ಹಾಕಿವೆ.
ಇನ್ನೇನು ಮಳೆಗಾಲ ಬಂತು. ಜೂನ್ ಮೊದಲ ವಾರದಿಂದ ಆಳಸಮುದ್ರ ಮೀನುಗಾರಿಕೆಗೆ ಅವಕಾಶವಿಲ್ಲ. ಆದರೆ ಈ ಬಾರಿ 15 ದಿನ ಮುಂಚಿತವಾಗಿಯೇ ಬೋಟುಗಳು ಕಡಲು ತೊರೆದು ದಡಸೇರಿವೆ. ಮತ್ಸ್ಯಕ್ಷಾಮ ಉಂಟಾಗಿರುವುದೇ ಇದಕ್ಕೆ ಮೂಲ ಕಾರಣ.
ಮೀನುಗಾರರ ಪಾಲಿಗೆ ಇತ್ತೀಚಿನ ದಶಕಗಳಲ್ಲಿ 2016 ಅತ್ಯಂತ ನಷ್ಟದ ವರ್ಷವಾಗಿತ್ತು. ಡೀಸೆಲ್ ದರ ಏರಿಕೆ, ಮೀನಿನ ಲಭ್ಯತೆಯಲ್ಲಿನ ಕುಸಿತದಿಂದಾಗಿ ಮೀನುಗಾರರು ಸಂಕಷ್ಟ ಅನುಭವಿಸಿದ್ದಾರೆ. ಅದರಲ್ಲೂ ಏಕದಿನದ ಮೀನುಗಾರಿಕೆ ನಡೆಸುವ ಪರ್ಸೀನ್ ಬೋಟುಗಳ ಅವೈಜ್ಞಾನಿಕ ಮೀನುಗಾರಿಕೆಯಿಂದ ನಷ್ಟದ ಪ್ರಮಾಣ ಹೆಚ್ಚಿದೆ. ಬೋಟುಗಳಿಗೆ ಲೈಟ್ ಅಳವಡಿಸಿ ನಡೆಸುವ ಮೀನುಗಾರಿಕೆ ಆಳಸಮುದ್ರ ಬೋಟುಗಳಿಗೆ ದೊಡ್ಡ ತಲೆನೋವಾಗಿದೆ.
ಮೀನುಗಾರಿಕೆಯನ್ನು ಬಾಧಿಸಿದ ಇನ್ನೊಂದು ಪ್ರಮುಖ ಸಮಸ್ಯೆ ಚಲ್ಟ್ ಮೀನುಗಳದ್ದು. ಮೀನಿನ ಮರಿಗಳಿಗೆ ಚಲ್ಟ್ ಅಂತಾರೆ. ಸಣ್ಣ ತೂತುಗಳಿರುವ ಬಲೆ ಬಳಸಿ ನಡೆಸುವ ಮೀನುಗಾರಿಕೆಯಿಂದ ಮರಿ ಮೀನುಗಳು ಕೂಡಾ ಬಲೆಗೆ ಬೀಳುತ್ತಿವೆ. ಇದರಿಂದ ಮೀನಿನ ಸಂತತಿ ನಾಶವಾಗಿ ಕೋಟ್ಯಾಂತರ ರುಪಾಯಿ ನಷ್ಟವಾಗುತ್ತಿದೆ.
ಕೆಲವೇ ಸಾವಿರ ರುಪಾಯಿಗಳ ಆಸೆಗೆ ಫಿಶ್ ಮಿಲ್ ಗಳಿಗೆ ಈ ಮೀನನ್ನು ಮಾರಲಾಗುತ್ತಿದೆ. ಈ ಮೀನಿನ ಬೆಳವಣಿಗೆಗೆ ಬಿಟ್ರೆ ಭವಿಷ್ಯದಲ್ಲಿ ಕೋಟ್ಯಾಂತರ ರುಪಾಯಿ ಬೆಲೆ ಬಾಳುತ್ತವೆ. ಈ ಬಗೆಗೂ ಮೀನುಗಾರಿಕಾ ಇಲಾಖೆ ಕಠಿಣಕ್ರಮ ಕೈಗೊಳ್ಳಬೇಕಾಗಿದೆ. ಒಟ್ಟಾರೆ ಭರಿಸಲಾಗದ ನಷ್ಟದಲ್ಲಿ ಈ ಮೀನುಗಾರಿಕಾ ಋತು ಮುಗಿದಿದೆ. ಕರ್ನಾಟಕ ಕರಾವಳಿಯ ಪಾಲಿಗೆ ಇದು ಕರಾಳ ವರ್ಷ.
ಮಳೆಗಾಲದಲ್ಲಿ ಸಾಂಪ್ರದಾಯಿಕ ರೀತಿಯ ನಾಡದೋಣಿ ಮೀನುಗಾರಿಕೆ ಆರಂಭವಾಗುತ್ತೆ. ಈ ಮೀನುಗಾರಿಕೆ ಲಾಭದಾಯಕವಾಗಲು ಗಾಳಿ ಸಹಿತ ಕಡಲಿನಲ್ಲಿ ತೂಫಾನು ಏಳಬೇಕು. ಇನ್ನಾದರೂ ಪ್ರಕೃತಿಯ ಮುನಿಸು ಕಳೆದು ಮೀನುಗಾರರ ಸಂಕಷ್ಟ ಬಗೆಹರಿಯಲಿ ಅನ್ನೋದು ಮೀನುಗಾರರ ಹಾರೈಕೆ.