ಆಳಸಮುದ್ರದಲ್ಲಿ ಈವರೆಗೂ ಪತ್ತೆಯಾಗದ ಬೋಟ್: ಮೀನುಗಾರರು ಎಲ್ಲಿಗೆ ಹೋದರು?
ಉಡುಪಿ, ಡಿಸೆಂಬರ್ 26: ಉಡುಪಿಯ ಮಲ್ಪೆ ಬಂದರಿನಿಂದ ಆಳಸಮುದ್ರ ಮೀನುಗಾರಿಕೆಗೆ ಹೋಗಿದ್ದ ಬೋಟ್ ನಾಪತ್ತೆಯಾಗಿದ್ದು, ಈವರೆಗೂ ಪತ್ತೆಯಾಗಿಲ್ಲ. ಬೋಟ್ ನಲ್ಲಿದ್ದ ಮೀನುಗಾರರ ಸಂಪರ್ಕ ಸಾಧ್ಯವಾಗಿಲ್ಲ.ಇದು ಮಲ್ಪೆ ಮೀನುಗಾರರನ್ನು ಆತಂಕಕ್ಕೆ ಈಡು ಮಾಡಿದೆ.
ನಾಪತ್ತೆಯಾದ ಮೀನುಗಾರರಿಗಾಗಿ ಮಂಗಳೂರು ಮತ್ತು ಗೋವಾದ ಕರಾವಳಿ ಕಾವಲು ಪಡೆ ತೀವ್ರ ಶೋಧಕಾರ್ಯ ನಡೆಸುತ್ತಿದ್ದರೂ ಯಾವುದೇ ಸುಳಿವು ಲಭ್ಯವಾಗಿಲ್ಲ.ಈ ಮಧ್ಯೆ ಬೋಟ್ ಅನ್ನು ಬೇರೆ ರಾಜ್ಯದ ಮೀನುಗಾರರು ದರೋಡೆ ಮಾಡಿರಬಹುದು ಅಥವಾ ಭಯೋತ್ಪಾದಕರು ಮೀನುಗಾರರನ್ನು ಹೈಜಾಕ್ ಮಾಡಿರಬಹುದು ಎಂದು ಮಲ್ಪೆ ಮೀನುಗಾರರು ಆತಂಕ ವ್ಯಕ್ತಪಡಿಸಿದ್ದಾರೆ.
ಆಳ ಸಮುದ್ರದಲ್ಲಿ ಮೀನುಗಾರಿಕೆಗೆ ತೆರಳಿದವರು ನಾಪತ್ತೆ
ಅರಬ್ಬೀ ಸಮುದ್ರದ ನಡುವಿನಿಂದ ಬೋಟ್ ಸಮೇತ ಮೀನುಗಾರರನ್ನು ಪಾಕಿಸ್ತಾನ ಮೂಲದ ಉಗ್ರರು ಅಪಹರಣ ಮಾಡಿರಬಹುದು ಎಂಬ ಗುಮಾನಿ ಶುರುವಾಗಿದೆ.
ಮಲ್ಪೆಯ ಸರ್ವ ಋತು ಬಂದರಿನಿಂದ ನಿತ್ಯ ಸಾವಿರಾರು ಮೀನುಗಾರರು ಆಳ ಸಮುದ್ರಕ್ಕೆ ಕಡಲಿಗೆ ತೆರಳಿ ಮೀನುಗಾರಿಕೆ ಮಾಡ್ತಾರೆ. ಆದರೆ ಕಳೆದ ವಾರದಿಂದ ಇಲ್ಲಿ ಆತಂಕದ ಪರಿಸ್ಥಿತಿ ಸೃಷ್ಠಿಯಾಗಿದೆ. ಇದಕ್ಕೆ ಕಾರಣ ,ಇಲ್ಲಿಂದ ಹೊರಟ ಎಂಟು ಮಂದಿ ಮೀನುಗಾರರು ಆಳ ಸಮುದ್ರದಿಂದ ನಾಪತ್ತೆಯಾಗಿ ಈವರೆಗೆ ಪತ್ತೆಯಾಗಲಿಲ್ಲ.
1 ಗಂಟೆಯವರೆಗೆ ಮಾತ್ರ ಸಂಪರ್ಕ
ನಾಪತ್ತೆಯಾಗಿರುವ ಎಲ್ಲಾ ಮೀನುಗಾರರರು ಮಲ್ಪೆ ಬಂದರಿನಿಂದ ಹೊರಟಿದ್ದ ಸುವರ್ಣ ತ್ರಿಭುಜ ಎಂಬ ಮೀನುಗಾರಿಕಾ ಬೋಟಿನಲ್ಲಿ ಡಿಸೆಂಬರ್ .13 ರಂದು ರಾತ್ರಿ 11 ಗಂಟೆ ಸುಮಾರಿಗೆ ಆಳ ಸಮುದ್ರ ಮೀನುಗಾರಿಕೆಗೆ ತೆರಳಿದ್ದರು. ಡಿಸೆಂಬರ್.15ರ ರಾತ್ರಿ ಒಂದು ಗಂಟೆಯವರೆಗೆ ಸಂಪರ್ಕದಲ್ಲಿದ್ದ ಇವರು ನಂತರ ಸಂಪರ್ಕ ಸಿಗದೇ ನಾಪತ್ತೆಯಾಗಿದ್ದಾರೆ.
ಕೋಸ್ಟ್ ಗಾರ್ಡ್ಸ್ ಗೆ ಮಾಹಿತಿ
ಈ ಸಂಬಂಧ ಮಲ್ಪೆ ಠಾಣೆಯಲ್ಲಿ ದೂರು ದಾಖಲಾದ ನಂತರವೇ ಇಲ್ಲಿನ ಮೀನುಗಾರರಿಗೆ ವಿಷಯ ತಿಳಿದದ್ದು.ಇದೀಗ ಮೀನುಗಾರಿಕಾ ಇಲಾಖೆ ಕೋಸ್ಟ್ ಗಾರ್ಡ್ ಗೆ ಮಾಹಿತಿ ನೀಡಿದ್ದು, ಮಂಗಳೂರು ಮತ್ತು ಗೋವಾದ ಕರಾವಳಿ ಕಾವಲು ಪಡೆ ತೀವ್ರ ಶೋಧ ಕಾರ್ಯಾಚರಣೆ ನಡೆಸುತ್ತಿದೆ. ಈ ನಡುವೆ ಭಾರತೀಯ ನೌಕಾದಳ ಕೂಡ ಶೋಧಕಾರ್ಯ ಆರಂಭಿಸಿದೆ. ಹ್ಯಾಲಿಕಾಪ್ಟರ್ ಹಾಗೂ ಡೋನಿಯರ್ ವಿಮಾನ ವನ್ನು ಬಳಸಲಾಗುತ್ತಿದೆ. ಆದರೆ ನಾಪತ್ತೆಯಾದ ಬೋಟ್ ಮತ್ತು ಮೀನುಗಾರರ ಕುರಿತು ಈ ತನಕ ಯಾವುದೇ ಸುಳಿವು ಲಭ್ಯವಾಗಿಲ್ಲ.
ಆಳ ಸಮುದ್ರದಲ್ಲಿ ಅಪಾಯದಲ್ಲಿದ್ದ 15 ಮೀನುಗಾರರನ್ನು ರಕ್ಷಿಸಿದ ಭಾರತೀಯ ತಟರಕ್ಷಣಾ ಪಡೆ
ಮೊಬೈಲ್ ಗಳ ಮೂಲಕ ಸಂಪರ್ಕ
ಸಾಮಾನ್ಯವಾಗಿ ಆಳಸಮುದ್ರ ಮೀನುಗಾರಿಕೆಗೆ ತೆರಳುವ ಬೋಟ್ ಗಳು ಎರಡು ವಾರಗಳ ಕಾಲ ಸಮುದ್ರದಲ್ಲಿರುತ್ತವೆ. ಗೋವಾ ,ಮಹಾರಾಷ್ಟ್ರ ಮತ್ತು ಕೇರಳ ಗಡಿಗಳಲ್ಲಿ ಮೀನು ಬೇಟೆ ಮುಗಿಸಿ ವಾಪಾಗುತ್ತವೆ. ಈ ಸಮಯದಲ್ಲಿ ಮೀನುಗಾರರು ಜಿಪಿಎಸ್ ಮತ್ತು ತಮ್ಮ ಮೊಬೈಲ್ ಗಳ ಮೂಲಕ ನಿರಂತರ ಸಂಪರ್ಕದಲ್ಲಿರುತ್ತಾರೆ. ಅವಘಡಗಳಾದಾಗ ಪರಸ್ಪರ ಸಂಪರ್ಕ ಮಾಡಿ ಇತರೆ ಬೋಟ್ ಗಳ ನೆರವು ಪಡೆಯುತ್ತಾರೆ.
ಸಂಪರ್ಕಕ್ಕೇ ಸಿಕ್ಕಿಲ್ಲ!
ಆದರೆ ಈ ಬಾರಿ ಮಲ್ಪೆಯಿಂದ ಹೊರಟ ಸುರ್ಣ ತ್ರಿಭುಜ ಬೋಟ್ ನ ಮೀನುಗಾರರು ಹದಿನೈದನೇ ತಾರೀಕಿನ ಬಳಿಕ ಸಂಪರ್ಕಕ್ಕೇ ಸಿಕ್ಕಿಲ್ಲ. ಜಿಪಿಎಸ್ ಮೂಲಕವೂ ಅವರ ಇರುವಿಕೆ ಗೊತ್ತಾಗುತ್ತಿಲ್ಲ. ಹಾಗಾದರೆ ಈ ಮೀನುಗಾರರು ಎಲ್ಲಿಗೆ ಹೋದರು? ಇದುವೇ ಯಕ್ಷ ಪ್ರಶ್ನೆ.