ದೋಣಿ, ಮೀನುಗಾರರ ಪತ್ತೆಗೆ ಕೇಂದ್ರ ಗೃಹ ಸಚಿವರನ್ನು ಭೇಟಿಯಾದ ಮುಖಂಡರು
ಉಡುಪಿ, ಜನವರಿ 3: ಉಡುಪಿಯ ಮಲ್ಪೆಯಿಂದ ಆಳ ಸಮುದ್ರಕ್ಕೆ ಮೀನುಗಾರಿಕೆಗೆ ತೆರಳಿದ್ದ ಸುವರ್ಣ ತ್ರಿಭುಜ ಹೆಸರಿನ ದೋಣಿ ನಾಪತ್ತೆಯಾಗಿ 18 ದಿನ ಕಳೆದಿದೆ. ಅದರಲ್ಲಿದ್ದ 7 ಮಂದಿ ಮೀನುಗಾರರ ಸುಳಿವು ಕೂಡ ಈ ವರೆಗೆ ಪತ್ತೆಯಾಗಿಲ್ಲ. ಆದ್ದರಿಂದ ದೋಣಿ ಪತ್ತೆ ಹಚ್ಚುವ ಕಾರ್ಯಕ್ಕೆ ಸಹಕಾರ ಕೋರಿ ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ರನ್ನು ಭೇಟಿ ಮಾಡಲಾಗಿದೆ.
ಕೇಂದ್ರ ಸಚಿವ ಡಿ.ವಿ.ಸದಾನಂದ ಗೌಡ ನೇತೃತ್ವದಲ್ಲಿ ನಡೆದ ಈ ಭೇಟಿಯಲ್ಲಿ ಸಂಸದ ನಳಿನ್ ಕುಮಾರ್ ಕಟೀಲು, ಉಡುಪಿ ಶಾಸಕ ಕೆ ರಘುಪತಿ ಭಟ್, ಕಾಪು ಶಾಸಕ ಲಾಲಾಜಿ ಮೆಂಡನ್ ಜನಪ್ರತಿನಿಧಿಗಳು ಇದ್ದರು.
ಇನ್ನು ದಕ್ಷಿಣ ಕನ್ನಡ ಮೊಗವೀರ ಮಹಾಜನ ಸಂಘದ ಅಧ್ಯಕ್ಷ ಜಯ ಸಿ.ಕೋಟ್ಯಾನ್, ಮೊಗವೀರ ಯುವ ಸಂಘಟನೆಯ ಅಧ್ಯಕ್ಷ ವಿನಯ್ ಕರ್ಕೇರ, ಕರ್ನಾಟಕ ರಾಜ್ಯ ಗಂಗಾಮತ ನೌಕರರ ಕ್ಷೇಮಾಭಿವೃದ್ಧಿ ಸಂಘದ ಗೌರವಾಧ್ಯಕ್ಷ ಬೆಂಗಳೂರಿನ ಶಿವಲಿಂಗಪ್ಪ, ಮೊಗವೀರ ಸಂಘಟನೆಯ ಮುಖಂಡ ರಾಘವೇಂದ್ರ ಹಾಗೂ ಮೊಗವೀರ ಸಮಾಜದ ಇತರ ಮುಖಂಡರು ಭೇಟಿಯಾಗಿ, ಕೇಂದ್ರ ಗೃಹ ಸಚಿವರನ್ನು ಮನವಿ ಮಾಡಿದರು.
ನಿಯೋಗದ ಮನವಿಗೆ ಸ್ಪಂದಿಸಿದ ಗೃಹ ಸಚಿವ ರಾಜನಾಥ್ ಸಿಂಗ್, ಕೂಡಲೇ ಕೇಂದ್ರ ಸರಕಾರದಿಂದಲೇ ಎಲ್ಲಾ ರೀತಿಯ ತನಿಖೆ ನಡೆಸಿ, ಕಾಣೆಯಾದ ದೋಣಿ ಮತ್ತು ಮೀನುಗಾರರನ್ನು ಪತ್ತೆ ಹಚ್ಚುವಂತೆ ರಕ್ಷಣಾ ಕಾರ್ಯದರ್ಶಿಗಳಿಗೆ ಸೂಚಿಸಿದ್ದಾರೆ. ಮಹಾರಾಷ್ಟ್ರ, ಗೋವಾ ಗಡಿ ಮತ್ತು ಗುಜರಾತ್ ಗಡಿಯಲ್ಲೂ ಮತ್ತು ಸಮುದ್ರ ಸೇರಿದಂತೆ ಸಂಶಯಾಸ್ಪದವಾಗಿರುವ ಎಲ್ಲ ಕಡೆ ಪತ್ತೆ ಕಾರ್ಯ ಮುಂದುವರಿಸುವ ಭರವಸೆ ನೀಡಿದ್ದಾರೆ.