ಮಹಾರಾಷ್ಟ್ರದಲ್ಲಿ ಮಲ್ಪೆಯಿಂದ ಹೊರಟಿದ್ದ ಮೀನುಗಾರರ ಬಂಧನ
ಉಡುಪಿ, ಫೆಬ್ರವರಿ 13: ಉಡುಪಿಯ ಮಲ್ಪೆಯಿಂದ ಮೀನುಗಾರಿಕೆಗೆ ಹೋಗಿದ್ದ ಶ್ರೀಲಕ್ಷ್ಮೀ ಹೆಸರಿನ ಡೀಪ್ ಸೀ ಬೋಟ್ ಮಹಾರಾಷ್ಟ್ರದಲ್ಲಿ ಸೆರೆಯಾಗಿದೆ. ಬೋಟಲ್ಲಿದ್ದ ಏಳು ಮಂದಿ ಮೀನುಗಾರರನ್ನು ಮಹಾರಾಷ್ಟ್ರ ಪೊಲೀಸರು ಬಂಧಿಸಿದ್ದಾರೆ.
ಶ್ರೀಲಕ್ಷ್ಮೀ ಬೋಟ್ ನ ಕ್ಯಾಪ್ಟನ್ ರಾಮ ಭಟ್ಕಳ ಸೇರಿ ಏಳು ಮಂದಿ ಎರಡು ದಿನಗಳ ಹಿಂದೆ ಮಲ್ಪೆಯಿಂದ ಆಳಸಮುದ್ರ ಮೀನುಗಾರಿಕೆಗೆ ತೆರಳಿದ್ದರು. ಬೋಟಲ್ಲಿದ್ದ ಏಳೂ ಮಂದಿ ಉತ್ತರ ಕನ್ನಡ ಜಿಲ್ಲೆಯವರು ಎಂಬ ಮಾಹಿತಿ ಇದೆ. ಗೋವಾ ರಾಜ್ಯ ದಾಟಿ ಮಹಾರಾಷ್ಟ್ರ ತಲುಪಿದ್ದ ಬೋಟ್ ಮಾಲ್ವಾನ್ ಸಮುದ್ರ ತಲುಪುತ್ತಿದ್ದಂತೆ ಅಲ್ಲಿನ ಕೋಸ್ಟ್ ಗಾರ್ಡ್ ಪೊಲೀಸರು ಬೋಟ್ ಮತ್ತು ಮೀನುಗಾರರನ್ನು ವಶಕ್ಕೆ ಪಡೆದಿದ್ದಾರೆ. ಮಹಾರಾಷ್ಟ್ರದ ಸಮುದ್ರ ತೀರದಿಂದ ಬೋಟ್ 12 ನಾಟೇಕಲ್ ದೂರ ಹೊರಗಿತ್ತು. ಆದರೂ ಮಹಾರಾಷ್ಟ್ರದ ಮಾಲ್ವಾನ್ ಕೋಸ್ಟ್ ಗಾರ್ಡ್ ಪೊಲೀಸರಿಗೆ ಅಲ್ಲಿನ ಮೀನುಗಾರರು ದೂರು ನೀಡಿದ್ದರಿಂದ ಬಂಧನವಾಗಿದೆ ಎಂದು ಮಲ್ಪೆಯ ಮೀನುಗಾರರು ದೂರಿದ್ದಾರೆ.
ಕಾರವಾರ ಬಂದರು ವಿಸ್ತರಣೆ ಯೋಜನೆ ಮರುಪರಿಶೀಲನೆ; ಬೆಂಗಳೂರಿನಲ್ಲಿ ಸಚಿವ, ಶಾಸಕರ ಸಭೆ
ಮಹಾರಾಷ್ಟ್ರ ರಾಜ್ಯದ ಗಡಿಯಿಂದ ಹೊರಗೆ ಅಂದರೆ ಭಾರತ ದೇಶದ ಗಡಿಯೊಳಗೆ ಮೀನುಗಾರಿಕೆ ಮಾಡುತ್ತಿದ್ದ ಬೋಟನ್ನು ಮಾಲ್ವಾನ್ ನ ಸ್ಥಳೀಯ ಮೀನುಗಾರರು ಅಡ್ಡಗಟ್ಟಿ ಪೊಲೀಸರಿಗೆ ಒಪ್ಪಿಸಿದ್ದಾರೆ. ಕಳೆದ ನಡುರಾತ್ರಿ 1 ಗಂಟೆಗೆ ಸುಮಾರಿಗೆ ಮೀನುಗಾರರ ಅಕ್ರಮ ಬಂಧನವಾಗಿದೆ. ನಮ್ಮವರು ನಿಯಮದಂತೆ ಮೀನುಗಾರಿಕೆ ಮಾಡಿದರೂ ಅರೆಸ್ಟ್ ಮಾಡಿದ ಮಹಾರಾಷ್ಟ್ರ ಪೊಲೀಸರ ಕ್ರಮವನ್ನು ಉಡುಪಿ ಬೋಟ್ ಚಾಲಕರ ಸಂಘದ ಅಧ್ಯಕ್ಷ ರವಿ ಖಂಡಿಸಿದ್ದಾರೆ. ಕೂಡಲೇ ಬಿಡುಗಡೆ ಮಾಡಬೇಕೆಂದು ಒತ್ತಾಯಿಸಿದ್ದಾರೆ.