ಪಾಪನಾಶಿನಿ ನದಿ ಮಲಿನ; ಅಧಿಕಾರಿಗಳಿಗೆ ಪ್ರಮಾಣ ಮಾಡಿಸಿದ ಜನ!
ಉಡುಪಿ, ಸೆಪ್ಟೆಂಬರ್ 24; ಅದು ಪಾಪನಾಶಿನಿ ನದಿ. ಒಂದು ಕಾಲದಲ್ಲಿ ಈ ನದಿಯಲ್ಲಿ ಮಿಂದರೆ ಪಾಪಗಳೆಲ್ಲಾ ನಾಶವಾಗಿ, ಬಂದ ಸಂಕಷ್ಟಗಳೆಲ್ಲಾ ದೂರವಾಗುತ್ತೆ ಅನ್ನುವ ನಂಬಿಕೆಯಿತ್ತು. ಆದರೆ ಈಗ ನದಿಗಿಳಿದರೆ ಪಾಪ ಹೋಗೋದು ಬಿಡಿ, ರೋಗಗಳೆಲ್ಲಾ ಮೈಗೆ ಅಂಟಿಕೊಳ್ಳಲಿದೆ.
ಪಾಪನಾಶಿನಿ ಸಂಪೂರ್ಣ ಕಲುಷಿತಗೊಂಡಿದ್ದಾಳೆ. ಪಾಪನಾಶಿನಿಯ ಒಡಲು ಸ್ವಚ್ಛವಾಗಿ ಉಳಿದಿಲ್ಲ. ನದಿಯಲ್ಲಿ ಸ್ವಚ್ಛಂದವಾಗಿ ವಿಹರಿಸುತ್ತಾ, ಮೀನುಗಾರರ ಬಲೆಯೊಳಗೆ ಬೀಳುತ್ತಿದ್ದ ಮೀನುಗಳು ಈಗ ಸತ್ತು ನದಿಯಲ್ಲಿ ತೇಲುತ್ತಿದೆ. ಇದಕ್ಕೆಲ್ಲಾ ಕಾರಣ ಪಾಪನಾಶಿನಿಯನ್ನು ಸೇರುತ್ತಿರುವ ಫಿಶ್ ಮಿಲ್ ತ್ಯಾಜ್ಯ.
Video: ಕೊರೊನಾವೈರಸ್ ಲಸಿಕೆ ನೀಡಲು ತುಂಬಿ ಹರಿವ ನದಿ ದಾಟಿದ ವೈದ್ಯಕೀಯ ಸಿಬ್ಬಂದಿ!
ಉಡುಪಿಯ ಜಿಲ್ಲೆಯ ಉದ್ಯಾವರದ ಪಿತ್ರೋಡಿ ಪಾಪನಾಶಿನಿಯ ದಂಡೆಯಲ್ಲಿರುವ ಸುಂದರ ಊರು. ಹರಿಯುವ ನದಿ, ನದಿಯಲ್ಲಿ ಲಂಗರು ಹಾಕಿದ ದೋಣಿ, ಮೀನುಗಾರಿಕೆಯನ್ನೇ ನಂಬಿ ಜೀವನ ಮಾಡುತ್ತಿರುವ ಮೀನುಗಾರ ಕುಟುಂಬಗಳು. ಆದರೆ ಇದೀಗ ಎಲ್ಲವೂ ಬದಲಾಗಿದೆ. ಪಿತ್ರೋಡಿ ಎಂಬ ಊರು ಈಗ ಸ್ಮಶಾನ ಮೌನವಾಗಿದೆ. ಪಾಪನಾಶಿನಿ ನದಿ ಗಬ್ಬೆದ್ದು ನಾರುತ್ತಿದ್ದಾಳೆ. ಮೀನುಗಳು ಬಲೆಗೆ ಬೀಳುವ ಮುನ್ನವೇ ನದಿಯಲ್ಲೇ ವಿಲವಿಲನೇ ಒದ್ದಾಡಿ ಪ್ರಾಣಬಿಡುತ್ತಿವೆ.
ಓಯ್! ಮಂಗಳೂರಿನಲ್ಲಿ ಮೀನು ತುಂಬಾ ಅಗ್ಗ ಮಾರ್ರೆ!
ಫಿಶ್ ಮಿಲ್ನಿಂದ ಪಿತ್ರೋಡಿ ಪರಿಸರವೇ ಹಾಳಾಗುತ್ತಿರೋದರಿಂದ ಸ್ಥಳಕ್ಕೆ ಪರಿಸರ ಅಧಿಕಾರಿ ವಿಜಯಾ ಹೆಗ್ಡೆ, ಉಪಾಧಿಕಾರಿ ಪ್ರಮೀಳಾ, ಮೀನುಗಾರಿಕಾ ಸಹಾಯಕ ನಿರ್ದೇಶಕರು ದಿವಾಕರ್ ಖಾರ್ವಿ ಭೇಟಿ ನೀಡಿದ್ದಾರೆ. ನದಿ ನೀರಿನಲ್ಲಿ ವಿಷದ ಅಂಶ ಹೆಚ್ಚಾಗಿರೋದರಿಂದ ಆಮ್ಲಜನಕ ಕೊರತೆಯಿಂದ ಮೀನುಗಳು ಸಾವನ್ನಪ್ಪುತ್ತಿವೆ. ನದಿ ನೀರನ್ನೂ ಪರಿಶೀಲನೆ ಮಾಡಿದಾಗ ನದಿಯಾಳದಲ್ಲಿ ಕೊಳೆದ ತ್ಯಾಜ್ಯದ ಅಂಶಗಳು ಪತ್ತೆಯಾಗಿದೆ.
ಹಸಿವು ನೀಗಿಸಿಕೊಳ್ಳಲು ಕೊಳಚೆ ನೀರಲ್ಲಿ ಮೀನು ಹಿಡಿಯುವ ಸ್ಥಿತಿ!
ಇದರಿಂದಾಗಿ ನದಿ ಮಾಲಿನ್ಯವಾಗಿರುವ ಸಾಧ್ಯತೆ ಇದೆ ಅಂತಾ ಹೇಳಿದ್ದಾರೆ. ಪಾಪನಾಶಿನಿ ನದಿಗೆ ಸ್ಥಳೀಯ ಫಿಶ್ಮಿಲ್ನಿಂದ ತ್ಯಾಜ್ಯವನ್ನು ಬಿಡುತ್ತಿದ್ದು, ಇದು ಅಧಿಕಾರಿಗಳ ಗಮನಕ್ಕೂ ಬಂದಿದೆ. ಫಿಶ್ಮಿಲ್ನವರು ನದಿಗೆ ಅಳವಡಿಸಿರುವ ಪೈಪ್ ಲೈನ್ ತೆರವುಗೊಳಿಸಲು ನೊಟೀಸ್ ನೀಡೋದಾಗಿ ಅಧಿಕಾರಿಗಳು ಭರವಸೆ ನೀಡಿದ್ದಾರೆ. ಇನ್ನು ನದಿಯಲ್ಲಿ ಮೀನುಗಳ ಮಾರಣ ಹೋಮವೇ ನಡೆದಿದ್ದು, ಸತ್ತ ಮೀನುಗಳ ಸ್ಯಾಂಪಲ್ ಅನ್ನು ಮೀನುಗಾರಿಕಾ ಕಾಲೇಜಿನಲ್ಲಿ ಪರೀಕ್ಷೆಗೆ ಒಳಪಡಿಸಿ, ವರದಿಯನ್ನು ಮೇಲಾಧಿಕಾರಿಗಳಿಗೆ ಕಳುಹಿಸೋದಾಗಿ ಅಧಿಕಾರಿಗಳು ಹೇಳಿದ್ದಾರೆ.
ಅಧಿಕಾರಿಗಳು ಸ್ಥಳ ಪರಿಶೀಲನೆ ಮಾಡಿದರೂ ಜನರಿಗೆ ಮಾತ್ರ ಅಧಿಕಾರಿಗಳ ಮೇಲೆ ನಂಬಿಕೆ ಕಳೆದುಹೋಗಿದೆ. ಯಾಕೆಂದರೆ ಫಿಶ್ಮಿಲ್ಗಳು ಅವ್ಯಾಹತವಾಗಿ ಈ ಹಿಂದೆಯೂ ಹಲವು ಕಡೆಗಳಲ್ಲಿ ನದಿ, ಹೊಳೆಗಳಿಗೆ ತ್ಯಾಜ್ಯ ಬಿಟ್ಟರೂ ಅಧಿಕಾರಿಗಳು ಮಾತ್ರ ಸುಮ್ಮನಿದ್ದರು. ಧನ ಬಲದ ಮುಂದೆ ಜನರ ಸಮಸ್ಯೆಗಳೆಲ್ಲವೂ ಅಧಿಕಾರಿಗಳ ಕಣ್ಣೆದೆರು ಗೌಣವಾಗಿದ್ದವು. ಹಾಗಾಗಿ ಈ ಬಾರಿ ವಿಶಿಷ್ಟವಾಗಿ ಅಧಿಕಾರಿಗಳನ್ನು ಎಚ್ಚರಿಸುವ ಕೆಲಸವನ್ನು ಜನರು ಮಾಡಿದ್ದಾರೆ.
2019ರಿಂದ ಪಾಪನಾಶಿನಿ ನದಿಗೆ ಫಿಶ್ಮಿಲ್ ತ್ಯಾಜ್ಯ ಸೇರುತ್ತಿದ್ದು, ಈವರೆಗೆ ಅಧಿಕಾರಿಗಳು ಫಿಶ್ಮಿಲ್ಗಳಿಗೆ ಕೇವಲ ನೋಟೀಸ್ ನೀಡಿ ಕೈ ತೊಳೆದುಕೊಂಡಿದ್ದಾರೆ. ತ್ಯಾಜ್ಯ ಸೇರೋದನ್ನು ತಪ್ಪಿಸುವ ಯಾವುದೇ ಕೆಲಸ ಅಧಿಕಾರಿಗಳು ಮಾಡಿಲ್ಲ. ಈ ಬಗ್ಗೆ ವರದಿಯನ್ನೂ ಸಿದ್ಧಪಡಿಸಿಲ್ಲ. ಹೀಗಾಗಿ ಈ ಬಾರಿ ಅಧಿಕಾರಿಗಳು ಪ್ರಾಮಾಣಿಕ ವಾಗಿ ಈ ಪ್ರಕರಣಕ್ಕೆ ತಾರ್ಕಿಕ ಅಂತ್ಯ ನೀಡಬೇಕೆಂದು ಜನ ಒತ್ತಾಯಿಸಿದ್ದಾರೆ.
ಅಧಿಕಾರಿಗಳು ಪಾಪನಾಶಿನಿ ನದಿಯನ್ನು ಉಳಿಸುವ ದೃಷ್ಟಿಯಿಂದ ನಿಷ್ಪಕ್ಷಪಾತ ವಾದ ತನಿಖೆಯನ್ನು ನಡೆಸಲೆಂದು ಸ್ಥಳದಲ್ಲೇ ಪ್ರಮಾಣ ಮಾಡಿಸಿದ್ದಾರೆ. ಎಲ್ಲಾ ಅಧಿಕಾರಿಗಳಿಗೆ ತೆಂಗಿನಕಾಯಿ ಮುಟ್ಟಿಸಿ, ಪ್ರಾಮಾಣಿಕ ವಾಗಿ ಕೆಲಸ ಮಾಡುವಂತೆ ಪ್ರಮಾಣ ಮಾಡಿಸಿದ್ದಾರೆ.
Recommended Video
ಈ ತೆಂಗಿನಕಾಯಿಯನ್ನು ಮುಂದೆ ಊರ ದೈವಸ್ಥಾನಕ್ಕೆ ಜನ ನೀಡಲಿದ್ದಾರೆ. ತೆಂಗಿನ ಕಾಯಿಯನ್ನು ಮಟ್ಟಿ ಪ್ರಮಾಣ ಮಾಡಿ ಮಾತು ತಪ್ಪಿದರೆ, ವಿನಾಶ ಕಟ್ಟಿಟ್ಟ ಬುತ್ತಿ ಅನ್ನುವ ನಂಬಿಕೆ ಇರುವುದರಿಂದ ಅಧಿಕಾರಿಗಳಿಗೆ ಈ ಮೂಲಕ ಜನ ಎಚ್ಚರಿಸಿದ್ದಾರೆ.