ಉಡುಪಿ ಜಿಲ್ಲೆಯಲ್ಲಿ ಮೊದಲ ತ್ರಿವಳಿ ತಲಾಖ್ ಪ್ರಕರಣ, ಆರೋಪಿ ಬಂಧನ
ಉಡುಪಿ, ಸೆಪ್ಟೆಂಬರ್ 9: ತ್ರಿವಳಿ ತಲಾಖ್ ಕಾನೂನು ಬಂದ ನಂತರ ಉಡುಪಿ ಜಿಲ್ಲೆಯಲ್ಲಿ ಮೊದಲ ಪ್ರಕರಣ ದಾಖಲಾಗಿರುವುದಲ್ಲದೇ ಆರೋಪಿಯ ಬಂಧನವೂ ಆಗಿದೆ. ತ್ರಿವಳಿ ತಲಾಖ್ ನೀಡಿದ ಪತಿಯ ವಿರುದ್ಧ ಕುಂದಾಪುರ ತಾಲೂಕು ಮೂಡುಗೋಪಾಡಿಯ ಮಹಿಳೆ ಅಲ್ಫಿಯಾ ಅಖ್ತರ್ ಕುಂದಾಪುರ ನಗರ ಠಾಣೆಯಲ್ಲಿ ದೂರು ನೀಡಿದ್ದಾರೆ.
ಚ್ಯೂಯಿಂಗ್ ಗಮ್ ತಿಂದಿಲ್ಲ ಎಂದು ಪತ್ನಿಗೆ ತಲಾಖ್ ಕೊಟ್ಟ ಭೂಪ
"ಪತಿ ಹನೀಫ್ ಜತೆ ಜುಲೈ 4ಕ್ಕೆ ಮೂಡುಗೋಪಾಡಿಯಲ್ಲಿ ಮದುವೆಯಾಗಿದ್ದು, ಪತಿ ಮನೆಯವರು 5 ಲಕ್ಷ ರೂಪಾಯಿ ವರದಕ್ಷಿಣೆ ಕೇಳಿದ್ದರು. ನಾವು 2 ಲಕ್ಷ ನೀಡಿದ್ದೆವು. ಇದೇ ಕಾರಣ ನೀಡಿ ಪತಿ ಹಾಗೂ ಮನೆಯವರು ನಿತ್ಯ ಕಿರುಕುಳ ನೀಡುತ್ತಿದ್ದರು. ಆ. 15ರಂದು ಪತಿ ತನಗೆ ನಿಷೇಧಿತ ತ್ರಿವಳಿ ತಲಾಖ್ ನೀಡಿದ್ದಾರೆ" ಎಂದು ಅಲ್ಫಿಯಾ ದೂರಿನಲ್ಲಿ ತಿಳಿಸಿದ್ದಾರೆ.
ಈ ವಿಚಾರವಾಗಿ ಹಿರಿಯಡಕ ನಿವಾಸಿಗಳಾದ ಪತಿ ಹನೀಫ್ ಸಯ್ಯದ್ (32), ಪತಿಯ ತಂದೆ ಅಬ್ಟಾಸ್ ಸಯ್ಯದ್, ತಾಯಿ ಜೈತುನ್ ಹಾಗೂ ಅಕ್ಕ ಆಯೇಷಾ ವಿರುದ್ಧ ದೂರು ನೀಡಿದ್ದಾರೆ. ಕುಂದಾಪುರ ನಗರ ಠಾಣೆಯಲ್ಲಿ ಸೆಕ್ಷನ್ 4ರ ಮುಸ್ಲಿಂ ಮಹಿಳೆಯರ ವಿವಾಹ ರಕ್ಷಣಾ ಕಾಯಿದೆ ಹಕ್ಕಿನಡಿ ಕೇಸು ದಾಖಲಾಗಿತ್ತು. ಜತೆಗೆ ವರದಕ್ಷಿಣೆ ಕಿರುಕುಳ ಹಾಗೂ ಕೌಟುಂಬಿಕ ದೌರ್ಜನ್ಯ ತಡೆ ಕಾಯ್ದೆಯಡಿ ಅಪರಾಧವು ಸೇರಿರುವ ಹಿನ್ನಲೆಯಲ್ಲಿ ಪ್ರಕರಣವನ್ನು ದಾಖಲಿಸಿದ ಕುಂದಾಪುರ ಪೊಲೀಸರು ಆರೋಪಿಯನ್ನು ತಡ ರಾತ್ರಿ ಬಂಧಿಸಿದ್ದಾರೆ.