ನಾಪತ್ತೆಯಾಗಿದ್ದ ಅಪ್ಪ ಮಗನ ಶವ ಕಟಪಾಡಿ ಸಮುದ್ರ ಕಿನಾರೆಯಲ್ಲಿ ಪತ್ತೆ
ಉಡುಪಿ, ಫೆಬ್ರವರಿ 29: ದಕ್ಷಿಣ ಕನ್ನಡದ ಉಳ್ಳಾಲದಲ್ಲಿ ನದಿಗೆ ಹಾರಿದ್ದ ತಂದೆ -ಮಗನ ಶವ ಸುಮಾರು ಐವತ್ತು ಕಿ.ಮೀ ದೂರದ ಉಡುಪಿ ಜಿಲ್ಲೆಯ ಕಟಪಾಡಿ ಸಮುದ್ರ ಕಿನಾರೆ ಬಳಿ ಪತ್ತೆಯಾಗಿದೆ.
ಫೆಬ್ರವರಿ 16ರ ಮುಂಜಾನೆ ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿನಲ್ಲಿ ತಂದೆ ಹಾಗೂ ಆರು ವರ್ಷದ ಮಗ ರಾಷ್ಟ್ರೀಯ ಹೆದ್ದಾರಿ 66ರ ನೇತ್ರಾವತಿ ಸೇತುವೆ ಬಳಿ ನಾಪತ್ತೆಯಾಗಿದ್ದರು. ಅಲ್ಲೇ ಕಾರು ನಿಲ್ಲಿಸಿ ಹೋಗಿದ್ದು, ಅವರಿಬ್ಬರ ಸುಳಿವೂ ಸಿಕ್ಕಿರಲಿಲ್ಲ. ಆಗಿನಿಂದಲೂ ಇವರಿಬ್ಬರಿಗಾಗಿ ಪೊಲೀಸರು ಶೋಧ ಕಾರ್ಯ ನಡೆಸುತ್ತಿದ್ದರು. ಇಂದು ಅವರಿಬ್ಬರ ಮೃತದೇಹಗಳು ಸಿಕ್ಕಿವೆ.
ವಿಜಯಪುರ: ಚಿಕ್ಕದೊಂದು ಮಾತಿಗೆ ಒಂದೇ ಕುಟುಂಬದ ಮೂವರ ಆತ್ಮಹತ್ಯೆ
ಮಗನೊಂದಿಗೆ ನದಿಗೆ ಹಾರಿದ ತಂದೆ
ಮಂಗಳೂರಿಗೆ ಬಂದು ನಾಪತ್ತೆಯಾದವರನ್ನು ಬಂಟ್ವಾಳದ ಬಾಳ್ತಿಲ ಶಂಭೂರು ಚರ್ಚ್ ಬಳಿಯ ನಿವಾಸಿ ಗೋಪಾಲಕೃಷ್ಣ ರೈ(45) ಹಾಗೂ ಅವರ ಪುತ್ರ ಅನೀಶ್ ರೈ (6) ಎಂದು ಗುರುತಿಸಲಾಗಿತ್ತು. ಇವರಿಬ್ಬರೂ ಕೊಣಾಜೆಯಲ್ಲಿನ ತಮ್ಮ ಸಂಬಂಧಿಯೊಬ್ಬರ ಮನೆಗೆ ಬಂದಿದ್ದರು. ಆ ಸಂದರ್ಭ ಇವರಿಬ್ಬರೂ ರಾಷ್ಟ್ರೀಯ ಹೆದ್ದಾರಿ 66ರ ನೇತ್ರಾವತಿ ಸೇತುವೆ ಬಳಿಯಿಂದ ನಾಪತ್ತೆಯಾಗಿದ್ದರು.
ಮುಂಬೈನಲ್ಲಿ ನೆಲೆಸಿದ್ದ ಕುಟುಂಬ
ಪ್ರಸ್ತುತ ಮುಂಬೈಯಲ್ಲಿ ನೆಲೆಸಿರುವ ಗೋಪಾಲಕೃಷ್ಣ ರೈ ಅವರು ಆತ್ಮಹತ್ಯೆ ಮಾಡಿಕೊಳ್ಳುವ ಎರಡು ದಿನಗಳ ಹಿಂದೆ ಮುಂಬೈನಿಂದ ಕೊಣಾಜೆಯ ಪಾವೂರಿಗೆ ಸಂಬಂಧಿಕರ ಮನೆಗೆ ನೇಮಕ್ಕೆ ಬಂದಿದ್ದರು. ಭಾನುವಾರ ನಸುಕಿನ ಜಾವ 4.30ರ ವೇಳೆ ಮಗ ಅನೀಶ್ ರೈಯೊಂದಿಗೆ ಗೋಪಾಕೃಷ್ಣ ರೈ ಅವರು ಕಾರು ಚಲಾಯಿಸಿ ಮನೆಯಿಂದ ಹೊರಗೆ ಹೊರಟಿದ್ದರು. ಈ ಕಾರು ಫೆಬ್ರವರಿ ಹದಿನಾರರಂದು ಭಾನುವಾರ ಬೆಳಗ್ಗಿನ ಜಾವ ಉಳ್ಳಾಲ ನೇತ್ರಾವತಿ ನದಿಯ ಸೇತುವೆ ಬಳಿ ಪತ್ತೆಯಾಗಿತ್ತು.
ಪರೀಕ್ಷೆಗೂ ಮೊದಲೇ ದ್ವಿತೀಯ ಪಿಯುಸಿ ವಿದ್ಯಾರ್ಥಿನಿ ಆತ್ಮಹತ್ಯೆ
"ನಾನು ಮಹಾಪಾಪಿ" ಎಂದು ಡೆತ್ ನೋಟ್
ನೇತ್ರಾವತಿ ಸೇತುವೆಯಲ್ಲಿ ಕಾರು ನಿಂತಿದ್ದು, ವಾಹನದಲ್ಲಿ ಯಾರೂ ಇಲ್ಲದ್ದು ನೋಡಿ ಸಾರ್ವಜನಿಕರು ಪೊಲೀಸರಿಗೆ ಮಾಹಿತಿ ನೀಡಿದ್ದರು. ‘ತನಗೆ ಒಂದು ವಾರದಿಂದ ನಿದ್ರೆ ಬರುತ್ತಿಲ್ಲ. ನಾನೊಬ್ಬ ಮಗನನ್ನು ಕೊಲ್ಲುವ ಮಹಾ ಪಾಪಿ. ಇದಕ್ಕಾಗಿ ನನ್ನ ಕ್ಷಮಿಸಿರಿ. ಪತ್ನಿ ಅಶ್ವಿನಿ ರೈ... ನಿನ್ನ ಬಿಟ್ಟು ಇಬ್ಬರೂ ದೂರ ಹೋಗುತ್ತಿದ್ದೇವೆ' ಎಂದು ಡೆತ್ ನೋಟ್ ಬರೆದಿಟ್ಟದ್ದೂ ಪತ್ತೆಯಾಗಿತ್ತು. ಆತ್ಮಹತ್ಯೆಗೆ ನಿಖರ ಕಾರಣ ತಿಳಿದುಬಂದಿಲ್ಲ.
ಹಗಲು ರಾತ್ರಿ ನಡೆಯುತ್ತಿದ್ದ ಶೋಧ
ಮಂಗಳೂರು ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮೃತದೇಹಕ್ಕಾಗಿ ರಾತ್ರಿ ಹಗಲು ಶೋಧಕಾರ್ಯ ನಡೆಸಿದ್ದರು. ಆದರೂ ಯಾವುದೇ ಕುರುಹುಗಳು ಪತ್ತೆಯಾಗಿರಲಿಲ್ಲ. ನಿನ್ನೆ ಕಟಪಾಡಿ ಸಮೀಪ ತಂದೆ ಮಗನ ಶವ ಕೊಳೆಯ ಸ್ಥಿತಿಯಲ್ಲಿ ಒಟ್ಟಿಗೇ ಸಿಕ್ಕಿವೆ. ಸದ್ಯ ಉಡುಪಿಯ ಅಜ್ಜರಕಾಡು ಶವಾಗಾರದಲ್ಲಿ ಶವಗಳ ಮರಣೋತ್ತರ ಪರೀಕ್ಷೆ ನಡೆಯುತ್ತಿದ್ದು, ಪೊಲೀಸರು ಹೆಚ್ಚಿನ ಮಾಹಿತಿ ಸಂಗ್ರಹಿಸುತ್ತಿದ್ದಾರೆ.