ಉದ್ಯಮಿಯನ್ನು ಬ್ಲಾಕ್ ಮೇಲ್ ಮಾಡಿದ ನಕಲಿ ಪತ್ರಕರ್ತರ ಬಂಧನ
ಕುಂದಾಪುರ, ಏಪ್ರಿಲ್ 13 : ಕೋಟೇಶ್ವರದ ಉದ್ಯಮಿಯೊಬ್ಬರನ್ನು ಬೆದರಿಸಿ ಹಣ ಪಡೆದಿರುವುದಕ್ಕೆ ಮೂವರು ನಕಲಿ ಪತ್ರಕರ್ತರನ್ನು ಕುಂದಾಪುರ ಪೊಲೀಸರು ಬಂಧಿಸಿದ್ದಾರೆ. ಕುಂದಾಪುರದ ಲೋಕೇಶ್, ಮಂಜುನಾಥ್ ಹಾಗೂ ಧರ್ಮೇಂದ್ರ ಬಂಧಿತ ಆರೋಪಿಗಳು.
ಕೋಟೇಶ್ವರದ ಬೀಚ್ ರಸ್ತೆಯಲ್ಲಿನ ಎಫ್ ಎಮ್ ವೇಸ್ಟ್ ಪ್ಲಾಸ್ಟಿಕ್ ಕಟ್ಟಿಂಗ್ ಮತ್ತು ಹೈಡ್ರೋಲಿಕ್ ಪ್ರೆಸ್ಸಿಂಗ್ ಯುನಿಟ್ ಮಾಲೀಕ ಫಾರೂಕ್ ಫ್ಯಾಕ್ಟರಿಯಲ್ಲಿರುವಾಗ ಕಾರಿನಲ್ಲಿ ಬಂದ ಆರೋಪಿಗಳು ನಾವು ಮಾಧ್ಯಮದವರು. ನೀವು ಗ್ಲುಕೋಸ್ ಬಾಟಲಿಗಳನ್ನು ತೆಗೆದುಕೊಳ್ಳಬಾರದು ಎಂದು ಬೆದರಿಸಿದ್ದಾರೆ.
ನಂತರ ಒಂದು ಲಕ್ಷ ನೀಡದಿದ್ದರೆ ಈ ಬಗ್ಗೆ ಪತ್ರಿಕೆಯಲ್ಲಿ ಬರೆಯುತ್ತೇವೆ ಎಂದು ಬ್ಲಾಕ್ ಮೇಲ್ ಮಾಡಿ 5,000 ಹಣ ತೆಗೆದುಕೊಂಡು ಹೋಗಿದ್ದಾರೆ.
ಈ ಸಂಬಂಧ ಮಾಲೀಕ ಫಾರೂಕ್ ದೂರು ದಾಖಲಿಸಿದ್ದು, ಇಂತಹ ಘಟನೆಗಳ ಬಗ್ಗೆ ಸಾರ್ವಜನಿಕರು ಎಚ್ಚೆತ್ತುಕೊಳ್ಳಬೇಕೆಂದು ಉಡುಪಿ ಎಸ್ಪಿ ಲಕ್ಷ್ಮಣ್ ನಿಂಬರ್ಗಿ ತಿಳಿಸಿದ್ದಾರೆ.ಆರೋಪಿಗಳು ಹಿಂದೆಯು ಹಲವು ಬಾರಿ ಇಂತಹ ಕೃತ್ಯಗಳಲ್ಲಿ ಭಾಗಿಯಾಗಿದ್ದಾರೆ ಎಂಬ ಆರೋಪವಿದ್ದು, ಹೆಚ್ಚಿನ ಮಾಹಿತಿಗಾಗಿ ಪೊಲೀಸರು ಕಾರ್ಯಾಚರಣೆ ನಡೆಸುತ್ತಿದ್ದಾರೆ.