ಉಡುಪಿಯ ಕೃಷ್ಣಮಠದ ಬೀದಿಯಲ್ಲಿ ಮದ್ಯವ್ಯಸನಿಗಳ ಹಾವಳಿ
ಉಡುಪಿ. ಮೇ 6: ರಾಜ್ಯಾದ್ಯಂತ ಮದ್ಯದ ಅಂಗಡಿಗಳು ತೆರೆದಿದ್ದೇ ತಡ, ಎಲ್ಲೆಡೆ ಅದರ ದುಷ್ಪರಿಣಾಮಗಳು ವರದಿಯಾಗುತ್ತಿವೆ. ಸೋಮವಾರ ವೈನ್ ಶಾಪ್ ಗಳು ತೆರೆದ ಬಳಿಕ ಕೃಷ್ಣನಗರಿ ಉಡುಪಿಗೂ ಅದರ ಪರಿಣಾಮ ತಟ್ಟಿದೆ.
ಕಳೆದ ಎರಡು ದಿನಗಳಿಂದ ರಥಬೀದಿಯಲ್ಲಿ ಮದ್ಯವ್ಯಸನಿಗಳ ಹಾವಳಿ ಹೆಚ್ಚಾಗಿದೆ. ಮದ್ಯವ್ಯಸನಿಗಳು ಕುಡಿದು ಮನೆಗೆ ತೆರಳುವ ಬದಲು ಮಠದ ಜಗುಲಿ, ರಥಬೀದಿ, ಪಾದಚಾರಿ ರಸ್ತೆಗಳಲ್ಲಿ ಮಲಗಿರುವುದು ಕಂಡುಬರುತ್ತಿದೆ. ಅಮಲೇರಿದ ಮದ್ಯ ವ್ಯಸನಿಗಳು ರಥಬೀದಿಯಲ್ಲಿ ತೂರಾಡಿಕೊಂಡು ನಡೆದಾಡುತ್ತಿದ್ದಾರೆ.
ಕುಡಿದು ಅಲ್ಲಲ್ಲಿ ಬಿದ್ದಿರುವುದು ಭಕ್ತ ವಲಯಕ್ಕೆ ಬೇಸರ ತಂದಿದೆ. ಕೆಲವೊಮ್ಮೆ ಇವರ ಹೊಡೆದಾಟಗಳು, ಅಶ್ಲೀಲ ಬೈಗುಳ, ಮಲಗಿದಲ್ಲಿಯೇ ವಾಂತಿ, ಮಲ ಮೂತ್ರ ಮಾಡಿಕೊಂಡಿರುವುದು ಪ್ರಜ್ಞಾವಂತರನ್ನು ಕೆರಳಿಸಿದೆ.
ಕುಡಿದು ಕಾರು ಚಲಾವಣೆ: ಉಡುಪಿಯಲ್ಲಿ ಅಪಘಾತ
ರಥಬೀದಿಯಲ್ಲಿ ಯಾರೂ ಮಲಗಬಾರದು, ಕೊರೊನಾ ಸೋಂಕು ಹರಡುವ ಭೀತಿ ಇದೆ ಎಂದು ಎಚ್ಚರಿಸುವ ಫಲಕಗಳಿವೆ. ಮದ್ಯ ವ್ಯಸನಿಗಳು ಈ ಸೂಚನೆಗಳನ್ನು ಧಿಕ್ಕರಿಸುತ್ತಿದ್ದಾರೆ. ರಥಬೀದಿಯಲ್ಲಿ ಆಗುತ್ತಿರುವ ಬೆಳವಣಿಗೆಗೆ ಬೇಗ ತಡೆಯೊಡ್ಡಬೇಕಾಗಿದೆ ಎಂಬುದು ಪ್ರಜ್ಞಾವಂತ ಜನರ ಆಗ್ರಹವಾಗಿದೆ.