ಬೆಂಗಳೂರಿನ ಇಂಜಿನಿಯರಿಂಗ್ ವಿದ್ಯಾರ್ಥಿ ಮಲ್ಪೆ ಸಮುದ್ರ ಪಾಲು
ಉಡುಪಿ, ಮಾರ್ಚ್ 20: ಪ್ರವಾಸಕ್ಕೆ ಬಂದಿದ್ದ ಬೆಂಗಳೂರಿನ ಖಾಸಗಿ ಇಂಜಿನಿಯರ್ ಕಾಲೇಜಿನ ವಿದ್ಯಾರ್ಥಿಯೊಬ್ಬ ಸಮುದ್ರದಲ್ಲಿ ಮುಳುಗಿ ಮೃತಪಟ್ಟ ಘಟನೆ ಉಡುಪಿಯ ಮಲ್ಪೆ ಕಡಲ ತೀರದಲ್ಲಿ ನಡೆದಿದೆ. ಬೆಂಗಳೂರಿನ ಖಾಸಗಿ ಇಂಜಿನಿಯರ್ ಕಾಲೇಜಿನ ವಿದ್ಯಾರ್ಥಿಗಳ ತಂಡ ಮಂಗಳವಾರ ಮಲ್ಪೆ ಸಮೀಪದ ತೊಟ್ಟಂ ಸಮುದ್ರ ಕಿನಾರೆಗೆ ಬಂದಿತ್ತು .
ಮೋಜು ಮಸ್ತಿಗೆ ವಿದ್ಯಾರ್ಥಿಗಳು ಕಡಲಿಗೆ ಇಳಿದ ವೇಳೆ ಈ ಘಟನೆ ನಡೆದಿದೆ. ಮೃತ ವಿದ್ಯಾರ್ಥಿಯನ್ನು ತುಮಕೂರು ಜಿಲ್ಲೆಯ ತಿಪಟೂರಿನ ನರಸಿಂಹ ಎಂಬುವವರ ಮಗ ಕೀರ್ತನ್ (21) ಎಂದು ಗುರುತಿಸಲಾಗಿದೆ.ಅಂತಿಮ ವರ್ಷದ ಸುಮಾರು 30 ವಿದ್ಯಾರ್ಥಿಗಳು ಪ್ರವಾಸ ಹೊರಟಿದ್ದರು.
ಜೋಕೆ...ಮಲ್ಪೆ ಬೀಚ್ ನಲ್ಲಿ ಮತ್ತೆ ಕಾಣಿಸಿಕೊಂಡಿವೆ ಜೆಲ್ಲಿ ಫಿಶ್ ಗಳು, ನೀರಿಗಿಳಿಯುವ ಮುನ್ನ ಯೋಚಿಸಿ
ಬೆಳಗ್ಗೆ ಉಡುಪಿ ಶ್ರೀಕೃಷ್ಣ ಮಠಕ್ಕೆ ಆಗಮಿಸಿದ ವಿದ್ಯಾರ್ಥಿಗಳು ಮಧ್ಯಾಹ್ನ ವೇಳೆ ಮಲ್ಪೆ ಬೀಚ್ಗೆ ತೆರಳಿದ್ದರು. ಅಲ್ಲಿ ವಿದ್ಯಾರ್ಥಿಗಳು ನೀರಿಗೆ ಇಳಿದು ಆಟ ಆಡುತ್ತಿದ್ದರು ಎಂದು ಹೇಳಲಾಗಿದೆ. ಈ ವೇಳೆ ಬೀಚ್ನಲ್ಲಿರುವ ಜೀವ ರಕ್ಷಕರು ವಿದ್ಯಾರ್ಥಿಗಳಿಗೆ ಅಪಾಯದ ಎಚ್ಚರಿಕೆಯನ್ನು ನೀಡುತ್ತಿದ್ದರೂ ವಿದ್ಯಾರ್ಥಿಗಳು ಎಚ್ಚರಿಕೆಯನ್ನು ನಿರ್ಲಕ್ಷಿಸಿದ್ದರು ಎಂದು ಹೇಳಲಾಗಿದೆ.
ವಿದ್ಯಾರ್ಥಿಗಳು ಮಲ್ಪೆ ಬೀಚ್ನಿಂದ ತೊಟ್ಟಂ ಬೀಚ್ವರೆಗೆ ತೆರಳಿ ಅಲ್ಲಿ ಸಮುದ್ರಕ್ಕೆ ಇಳಿದು ಆಟ ಆಡುತ್ತಿದ್ದರು. ಈ ಸಂದರ್ಭ ಸಮುದ್ರದ ಅಲೆಗೆ ಸಿಲುಕಿ ನಾಲ್ಕು ವಿದ್ಯಾರ್ಥಿಗಳು ಸಮುದ್ರ ಪಾಲಾಗಿದ್ದು, ಇತರ ವಿದ್ಯಾರ್ಥಿಗಳ ಬೊಬ್ಬೆ ಕೇಳಿ ಓಡಿ ಬಂದ ಜೀವ ರಕ್ಷಕರು ಕೂಡಲೇ ಸಮುದ್ರಕ್ಕೆ ಹಾರಿ ಮೂವರು ವಿದ್ಯಾರ್ಥಿಗಳನ್ನು ರಕ್ಷಿಸಿದರು. ಆದರೆ ನೀರಿನಲ್ಲಿ ಮುಳುಗಿ ಅಸ್ವಸ್ಥಗೊಂಡಿದ್ದ ಕೀರ್ತನ್ ಅದಾಗಲೇ ಮೃತಪಟ್ಟಿದ್ದರು ಎಂದು ಹೇಳಲಾಗಿದೆ.