ಕಟಪಾಡಿ-ಶಿರ್ವ ರಸ್ತೆ ಬಳಿ ಕಾರಿನಲ್ಲಿ ಸಾಗಿಸುತ್ತಿದ್ದ ದಾಖಲೆ ರಹಿತ ನಗದು ವಶ
ಉಡುಪಿ, ಏಪ್ರಿಲ್ 05: ಉಡುಪಿ-ಚಿಕ್ಕಮಗಳೂರು ಕ್ಷೇತ್ರ ವ್ಯಾಪ್ತಿಯಲ್ಲಿ ಚುನಾವಣಾ ನೀತಿ ಸಂಹಿತೆಯನ್ನು ಕಟ್ಟು ನಿಟ್ಟಾಗಿ ಜಾರಿಗೊಳಿಸಲಾಗಿದೆ. ಚುನಾವಣಾ ಅಕ್ರಮ ತಡೆಯುವ ನಿಟ್ಟಿನಲ್ಲಿ ಎಲ್ಲಾ ಚೆಕ್ ಪೋಸ್ಟ್ ಗಳಲ್ಲಿ ಹದ್ದಿನ ಕಣ್ಣು ಇಡಲಾಗಿದೆ. ಚೆಕ್ ಪೋಸ್ಟ್ ಗಳಲ್ಲಿ ಪ್ರತಿಯೊಂದು ವಾಹನಗಳ ತಪಾಸಣೆ ನಡೆಸಲಾಗುತ್ತಿದೆ.
ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ
ಈ ನಡುವೆ ಕಾರಿನಲ್ಲಿ ಸಾಗಿಸುತಿದ್ದ 1.25 ಲಕ್ಷ ರೂಪಾಯಿ ನಗದನ್ನು ಚುನಾವಣಾ ಅಧಿಕಾರಿಗಳ ತಂಡ ವಶಪಡಿಸಿಕೊಂಡಿದೆ. ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಫ್ಲೈಯಿಂಗ್ ಸ್ಕ್ವಾಡ್ ನ ಅಧಿಕಾರಿಗಳ ತಂಡ ಕಟಪಾಡಿ-ಶಿರ್ವ ರಸ್ತೆಯಲ್ಲಿ ವಾಹನ ತಪಾಸಣೆ ನಡೆಸುತ್ತಿದ್ದ ವೇಳೆ ಕಾರಿನಲ್ಲಿ ಸಾಗಿಸಲಾಗುತ್ತಿದ್ದ ದಾಖಲೆ ರಹಿತ ನಗದನ್ನು ವಶಪಡಿಸಿಕೊಳ್ಳಲಾಗಿದೆ.
ಕಾರ್ಕಳ ಚೆಕ್ ಪೋಸ್ಟ್ ನಲ್ಲಿ ದಾಖಲೆ ರಹಿತ ನಗದು ವಶ
ಅಧಿಕಾರಿಗಳು ಕಟಪಾಡಿ-ಶಿರ್ವ ರಸ್ತೆಯಲ್ಲಿ ವಾಹನ ತಪಾಸಣೆ ನಡೆಸುತ್ತಿದ್ದ ಸಂದರ್ಭದಲ್ಲಿ ಬೆಳ್ಮಣ್ ಜಂತ್ರದಲ್ಲಿರುವ ಗುಜರಿ ವ್ಯಾಪಾರ ನಡೆಸುತ್ತಿರುವ ಉದ್ಯಾವರ ನಿವಾಸಿ ಸುರೇಶ್ ಕೋಟ್ಯಾನ್ ಅವರು ತಮ್ಮ ಕಾರಿನಲ್ಲಿ ಹಣವನ್ನು ಕೊಂಡೊಯ್ಯುತಿದ್ದರು ಎಂದು ಹೇಳಲಾಗಿದೆ.
ಕಾರಿನ ಡ್ಯಾಶ್ ಬೋರ್ಡ್ನಲ್ಲಿದ್ದ 2ಸಾವಿರ ರೂಪಾಯಿ ಮುಖ ಬೆಲೆಯ ನೋಟು ಗಳು ಸೇರಿದಂತೆ 500, 100, 50 ಮತ್ತು 10 ರೂಪಾಯಿ ನೋಟುಗಳ ಬಂಡಲ್ ವಶಪಡಿಸಿಕೊಳ್ಳಲಾಗಿದೆ.