ಮಂಚಿಕೆರೆಯಲ್ಲಿ ಬಾಯ್ದೆರೆದ ಭೂಮಿ, ಪದರವಾಗಿ ಮೇಲೆದ್ದ ಕಲ್ಲು
ಇದಕ್ಕಿಂತ ಆತಂಕದ ವಿಷಯವೆಂದರೆ ಬಿರುಕು ಬಿಟ್ಟ ಸ್ಥಳದಲ್ಲಿ ಕಲ್ಲುಗಳು ಪದರ ಪದರವಾಗಿ ಮೇಲಕ್ಕೆದ್ದಿದೆ. ಶುಕ್ರವಾರ ಬೆಳಗ್ಗೆ ಸುಮಾರು 7 ಗಂಟೆ ಸಮಯದಲ್ಲಿ ಭೂಮಿ ಕಂಪಿಸಿದೆ. ಆಗ ನೋಡಿದಾಗ ಬಿರುಕು ಬಿಟ್ಟಿರುವುದು ಕಂಡುಬಂದಿದೆ ಎಂದು ಸ್ಥಳೀಯ ನಿವಾಸಿ ಜಗದೀಶ್ ತಿಳಿಸಿದ್ದಾರೆ.
ಉಡುಪಿ ತಹಸೀಲ್ದಾರರು ಹಾಗೂ ಗಣಿ ವಿಜ್ಞಾನ ಇಲಾಖೆ ಅಧಿಕಾರಿಗಳು ಸ್ಥಳವನ್ನು ಪರಿಶೀಲಿಸಿದ್ದಾರೆ. ಪದೇ ಪದೇ ಭೂಕಂಪನ ಉಂಟಾಗುತ್ತಿರುವ ಹಿನ್ನೆಲೆಯಲ್ಲಿ ಅನಿವಾರ್ಯತೆ ಕಂಡುಬಂದರೆ ಈ ಪ್ರದೇಶದ ಮನೆಗಳನ್ನು ಸ್ಥಳಾಂತರಿಸಲಾಗುವುದು ಎಂದು ಭರವಸೆ ನೀಡಿದ್ದಾರೆ.
50 ಅಡಿ ದೂರದ ಬಿರುಕು : ಸುಮಾರು 50 ಅಡಿ ಸ್ಥಳದಲ್ಲಿ ಬಿರುಕು ಬಿಟ್ಟಿದೆ. ಜಗದೀಶ್ ಅವರ ಮನೆ ಪಕ್ಕದಲ್ಲಿ ಬಿರುಕು ಹಾದು ಹೋಗಿದ್ದು, ಸ್ವಲ್ಪದರಲ್ಲಿ ಮನೆ ಉಳಿದಿದೆ. ಆದರೆ, ಅವರ ಮನೆಯ ಬಾವಿಯ ಗೋಡೆ ಬಿರುಕುಬಿಟ್ಟಿದೆ.
ಈ ಸ್ಥಳದಲ್ಲಿ ಸುಮಾರು 6 ತಿಂಗಳುಗಳ ಹಿಂದೆಯೂ 100 ಅಡಿ ದೂರದವರೆಗೆ ಭೂಮಿ ಬಿರುಕು ಬಿಟ್ಟಿತ್ತು. ಅನೇಕ ಮನೆಗಳ ಪಾಯ ಹಾಗೂ ಡಾಂಬರ್ ರಸ್ತೆಗಳಲ್ಲಿಯೂ ಬಿರುಕು ಕಂಡುಬಂದಿದ್ದವು.
ಭೂಮಿಯೊಳಗಿನ ಪದರಗಳು ಜರುಗುವುದರಿಂದ ಇಂತಹ ಪರಿಣಾಮ ಕಂಡುಬರುತ್ತದೆ ಎಂದು ಮಣಿಪಾಲ ಎಂಐಟಿ ಭೂ ವಿಜ್ಞಾನ ವಿಭಾಗದ ಪ್ರೊ. ಉದಯಶಂಕರ್ ಹೇಳಿದ್ದಾರೆ. ಅಲ್ಲದೆ, ಸಮೀಪದಲ್ಲಿರುವ ಮಣ್ಣಪಳ್ಳದಲ್ಲಿ ತುಂಬಿರುವ ನೀರು ಮಂಚಿಕೆರೆಯತ್ತ ಹರಿಯುವಾಗ ಭೂಮಿಯಲ್ಲಿ ಪದರಗಳು ದುರ್ಬಲಗೊಂಡು ಹೀಗೆ ಸಂಭವಿಸಿರಬಹುದು ಎಂದು ಅವರು ತಿಳಿಸಿದ್ದಾರೆ.
ಇಲ್ಲಿಂದ ಸುಮಾರು 2 ಕಿ.ಮೀ. ದೂರದಲ್ಲಿರುವ ಸರಳೇಬೆಟ್ಟು ಪ್ರದೇಶದಲ್ಲಿ ಭೂಮಿಯಿಂದ ಸಿಹಿ ನೀರು ಮೇಲಕ್ಕೆ ಉಕ್ಕುತ್ತಿರುವುದಕ್ಕೆ ಭೂಕಂಪನವೇ ಕಾರಣ ಎಂದು ಭೂ ವಿಜ್ಞಾನಿಗಳು ಹೇಳುತ್ತಾರೆ.