ಜನ ಬಿಜೆಪಿ ಕನಸು ಕಂಡಿದ್ದರು; ಬಿಜೆಪಿ ಗೆದ್ದೇ ಗೆಲ್ಲುತ್ತದೆ; ಡಿ.ವಿ.ಸದಾನಂದ ಗೌಡ
ಉಡುಪಿ, ಸೆಪ್ಟೆಂಬರ್ 21: ಕರ್ನಾಟಕ ರಾಜ್ಯದ 15 ವಿಧಾನಸಭೆ ಕ್ಷೇತ್ರಗಳಿಗೆ ಉಪಚುನಾವಣೆ ನಿಗದಿ ಮಾಡಲಾಗಿದೆ. ಅಕ್ಟೋಬರ್ 21 ರಂದು ಮತದಾನ ನಡೆಯಲಿದ್ದು, ಇದರ ಬೆನ್ನಲ್ಲೇ, ಸರ್ಕಾರ ರಚನೆಯಾದ ದಿನದಿಂದ ಚುನಾವಣೆಗೆ ಕೆಲಸ ಶುರು ಮಾಡಿರುವುದಾಗಿ ಉಡುಪಿಯಲ್ಲಿ ಕೇಂದ್ರ ಸಚಿವ ಸದಾನಂದ ಗೌಡ ಹೇಳಿಕೆ ನೀಡಿದ್ದಾರೆ.
ಉಪಚುನಾವಣೆ ಘೋಷಣೆ; ಬೀಸೋ ದೊಣ್ಣೆಯಿಂದ ತಪ್ಪಿಸಿಕೊಂಡ ಸಿಎಂ
"ಲೋಕಸಭಾ ಚುನಾವಣಾ ಫಲಿತಾಂಶದ ಮೂಲಕ ಜನ ತೀರ್ಮಾನಿಸಿದ್ದಾರೆ. ರಾಜ್ಯದಲ್ಲಿ ಬಿಜೆಪಿ ಸರ್ಕಾರದ ಕನಸನ್ನು ಜನ ಕಂಡಿದ್ದಾರೆ. ಜೆಡಿಎಸ್ ಕಾಂಗ್ರೆಸ್ ಶಾಸಕರ ಅಯೋಗ್ಯ ಸರ್ಕಾರವನ್ನು ತಿರಸ್ಕರಿಸಿದ್ದಾರೆ. ಉಪಚುನಾವಣೆಯಲ್ಲಿ ಬಿಜೆಪಿ 15 ಸ್ಥಾನಗಳಲ್ಲಿ ಬಿಜೆಪಿ ಗೆಲ್ಲುತ್ತದೆ" ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಅನರ್ಹರಿಗೆ ಮತ್ತೆ ಅವಕಾಶ ಸಿಗಬಹುದು
ಶಾಸಕರ ಅನರ್ಹತೆ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಅವರು, "ನಾಮಪತ್ರ ಸಲ್ಲಿಸಲು ಇನ್ನೂ ಹಲವು ದಿನ ಬಾಕಿ ಇದೆ. ಸೋಮವಾರ ಸುಪ್ರೀಂ ಕೋರ್ಟಲ್ಲಿ ವಿಚಾರಣೆ ನಡೆಯಲಿದೆ. ಒಂದೇ ದಿನದಲ್ಲಿ ಎಲ್ಲವೂ ಇತ್ಯರ್ಥ ಆಗಬಹುದು. ಕಾನೂನಿನ ಚೌಕಟ್ಟಿನಲ್ಲಿ ಶಾಸಕರಿಗೆ ಸಮಸ್ಯೆಗಳು ಆಗಿದೆ. ಅನರ್ಹತೆ ಹೊಂದಿದವರೇ ಮತ್ತೆ ಸ್ಪರ್ಧೆ ಮಾಡುವ ಅವಕಾಶ ಆಗುತ್ತದೆ. ಅನರ್ಹರು ಮೊದಲು ಬಿಜೆಪಿ ಸೇರುತ್ತಾರೆ. ಪಕ್ಷ ಆಮೇಲೆ ತೀರ್ಮಾನ ತೆಗೆದುಕೊಳ್ಳುತ್ತದೆ. ಪಕ್ಷದ ತೀರ್ಮಾನಕ್ಕೆ ಬದ್ಧರಾಗಿದ್ದರೆ ಅವರು ಬಿಜೆಪಿಯಿಂದ ಕಣಕ್ಕೆ ಇಳಿಯಲಿದ್ದಾರೆ" ಎಂದು ಹೇಳಿದ್ದಾರೆ.
ತೇಜಸ್ವಿ ಸೂರ್ಯ ಮಾತಿಗೆ ತಿರುಗೇಟು
ರಾಜ್ಯ ನೆರೆ ಪರಿಹಾರ ವಿಚಾರವಾಗಿ ಮಾತನಾಡಿದ ಅವರು, "ಸದುಪಯೋಗ ಆಗುವಾಗ ಪರಿಹಾರ ಕೊಡುತ್ತೇವೆ. ಕೇಂದ್ರ ಎಸ್ ಡಿ ಆರ್ ಎಫ್ ನಿಂದ 380 ಕೋಟಿ ಕೊಟ್ಟಿದೆ. ನೆರೆ ನಷ್ಟದ ವರದಿಗಳನ್ನು ಗೃಹ ಇಲಾಖೆ ಪಡೆದುಕೊಂಡಿದೆ. ತಾತ್ಕಾಲಿಕ ಪರಿಹಾರಕ್ಕೆ ರಾಜ್ಯದಲ್ಲಿ ದುಡ್ಡು ಇದೆ" ಎಂದರು. ಇದೇ ಸಂದರ್ಭದಲ್ಲಿ, ಕೇಂದ್ರದ ನೆರೆ ಪರಿಹಾರ ಬೇಡ ಅಂದಿರುವ ಸಂಸದ ತೇಜಸ್ವಿ ಸೂರ್ಯ ಅವರಿಗೂ ತಿರುಗೇಟು ನೀಡಿದರು. "ಸಂಸದರು ಈಗ ಪರಿಹಾರ ಬೇಡ ಅಂದಿರಬಹುದು. ಶಾಶ್ವತ ಕಾಮಗಾರಿಗೆ ಕೇಂದ್ರದ ಅನುದಾನ ಅವಶ್ಯಕ. ಅಷ್ಟು ದೊಡ್ಡ ಮೊತ್ತ ಕೇಂದ್ರದಿಂದ ಕೊಡಲು ಮಾತ್ರ ಸಾಧ್ಯ" ಎಂದು ಪ್ರತಿಕ್ರಿಯಿಸಿದ್ದಾರೆ.
ಅತ್ತ ಚುನಾವಣೆ ಘೋಷಣೆ, ಇತ್ತ ಅನರ್ಹ ಶಾಸಕರೊಡನೆ BSY ಸಭೆ
ಬಿಜೆಪಿಯವರು ತಪ್ಪು ಮಾಡಿದ್ದರೆ ಅವರ ಮೇಲೂ ತನಿಖೆ ನಡೆಯಲಿ
ಇಡಿ ವಿಚಾರಣೆಯಲ್ಲಿರುವ ಡಿಕೆ ಶಿವಕುಮಾರ್ ಅವರ ಕುರಿತೂ ಮಾತನಾಡಿದ ಸಚಿವರು, "ತನಿಖೆ ನಡೆಯುವಾಗ ನಾನು ಮಾತನಾಡಲ್ಲ. ತಪ್ಪು ಮಾಡಿದವರ ಮೇಲೆ ಕಾರ್ಯಾಚರಣೆ ನಡೆಯಲೇಬೇಕು. ನಾನು ತನಿಖಾ ಸಂಸ್ಥೆ ಅಲ್ಲ. ಬಿಜೆಪಿಯವರು ತಪ್ಪು ಮಾಡಿದ್ದರೆ ಅವರ ಮೇಲೆ ಕಾರ್ಯಾಚರಣೆ ಆಗಲಿ" ಎಂದು ಹೇಳಿದ್ದಾರೆ.
ಆರೋಪ ಮಾಡುವುದು ಬಲು ಸುಲಭ
"ಯಾರು ತಪ್ಪು ಮಾಡಿದ್ದಾರೆ ಎಂದು ತನಿಖಾ ಸಂಸ್ಥೆ ನಿರ್ಧರಿಸುತ್ತದೆ. ಅಲ್ಲಿಯವರೆಗೂ ಮೌನವಾಗಿರಬೇಕು. ಆಡಳಿತ ಪಕ್ಷದ ಮೇಲೆ ಆರೋಪ ಮಾಡುವುದು ಸುಲಭ. ವಿರೋಧ ಪಕ್ಷದವರು ಅದೇ ಕೆಲಸ ಮಾಡುತ್ತಿದ್ದಾರೆ" ಎಂದು ಉಡುಪಿಯಲ್ಲಿ ಕೇಂದ್ರ ಸಚಿವ ಸದಾನಂದ ಗೌಡ ಹೇಳಿಕೆ ನೀಡಿದ್ದಾರೆ.