ಶಿವಸೇನೆಗೆ ಇನ್ನೂ ಕಾಲ ಮಿಂಚಿಲ್ಲ; ಬಿಜೆಪಿ ಜೊತೆ ಕೈ ಜೋಡಿಸಿ ಎಂದ ಡಿವಿಎಸ್
ಉಡುಪಿ, ನವೆಂಬರ್ 12: ಬಿಜೆಪಿಯ ಮಿತ್ರಪಕ್ಷವಾಗಿದ್ದ ಶಿವಸೇನಾ, ಮೈತ್ರಿ ಮುರಿದುಕೊಂಡು ಎನ್ಸಿಪಿ ಮತ್ತು ಕಾಂಗ್ರೆಸ್ ಜತೆ ಸೇರಿ ಸರ್ಕಾರ ರಚಿಸುವ ಕಸರತ್ತು ನಡೆಸಿದ್ದು, ಇದಕ್ಕೆ ಪ್ರತಿಕ್ರಿಯಿಸಿರುವ ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಸಚಿವ ಡಿವಿ ಸದಾನಂದ ಗೌಡ, "ಅಧಿಕಾರಕ್ಕಾಗಿ ನಮ್ಮ ಮಿತ್ರರೇ ಆಟವಾಡ್ತಿದ್ದಾರೆ. ಪ್ರಜಾತಂತ್ರ ವ್ಯವಸ್ಥೆಗೆ ಈ ಬೆಳವಣಿಗೆ ಮಾರಕ" ಎಂದಿದ್ದಾರೆ.
ಉಡುಪಿಯಲ್ಲಿ ಮಹಾರಾಷ್ಟ್ರದ ರಾಜಕೀಯ ಬೆಳವಣಿಗೆಯ ಬಗ್ಗೆ ಮಾತನಾಡಿದ ಅವರು, "ಶಿವಸೇನೆಗೆ ಇನ್ನೂ ಕಾಲ ಮಿಂಚಿಲ್ಲ. ಮಹಾರಾಷ್ಟ್ರದಲ್ಲಿ ಬಿಜೆಪಿ ಜೊತೆಗೆ ಕೈ ಜೋಡಿಸಿ, ನಿಮ್ಮನ್ನು ಪ್ರೀತಿ ವಿಶ್ವಾಸದಿಂದ ನೋಡ್ಕೊಳ್ತೀವಿ. ಚುನಾವಣೆಯಲ್ಲಿ ಜನಾದೇಶ ಬಿಜೆಪಿ ನೇತೃತ್ವದ ಟೀಮ್ ಗೆ ಸಿಕ್ಕಿತ್ತು. ಅಧಿಕಾರಕ್ಕಾಗಿ ನಮ್ಮ ಮಿತ್ರರೇ ಆಟವಾಡ್ತಿದ್ದಾರೆ. ಶಿವಸೇನೆ ಮತ್ತು ಬಿಜೆಪಿ ತುಂಬಾ ಸಮಯದ ಗೆಳೆಯರು. ನಮ್ಮ ಅರ್ಧದಷ್ಟು ಸಂಖ್ಯೆ ಕೂಡ ಶಿವಸೇನೆಯಲ್ಲಿ ಇಲ್ಲ. ಇನ್ನೂ ಕಾಲ ಮಿಂಚಿಲ್ಲ ಅವರಿಗೆ" ಎಂದು ಆಹ್ವಾನ ನೀಡಿದ್ದಾರೆ.
ರಸ್ತೆಯಲ್ಲಿ ಬಿದ್ದ ದಂಪತಿಗೆ ಕಾರು ಕೊಟ್ಟು ನಡೆದು ಹೋದ ಸದಾನಂದಗೌಡರು
"ಮೋದಿ ಆಡಳಿತ, ಫಡ್ನವೀಸ್ ಆಡಳಿತ ಮಾದರಿಯಾಗಿದೆ. ಮಹಾರಾಷ್ಟ್ರದಲ್ಲಿ ಇನ್ನೂ ಯಾವ ಹೊಂದಾಣಿಕೆಯೂ ಆಗಿಲ್ಲ. ರಾಜ್ಯಪಾಲರು ನ್ಯಾಚುರಲ್ ಜಸ್ಟೀಸ್ ಪಾಲಿಸುತ್ತಿದ್ದಾರೆ. ಎಲ್ಲರಿಗೂ ಸರ್ಕಾರ ನಡೆಸಲು ಆಹ್ವಾನ ನೀಡುತ್ತಿದ್ದಾರೆ. ಮುಂದೆ ರಾಷ್ಟ್ರಪತಿ ಆಡಳಿತ ಬಂದರೂ ಬರಬಹುದು" ಎಂದರು.
ಇನ್ನು ಅನರ್ಹ ಶಾಸಕರ ಬಗ್ಗೆ ಮಾತನಾಡಿದ ಸದಾನಂದ ಗೌಡ, "ನಾಳೆ ಅನರ್ಹರ ತೀರ್ಪು ಬರುತ್ತದೆ. ತೀರ್ಪು ಬಂದ ನಂತರ ಮುಂದಿನ ತೀರ್ಮಾನ ಮಾಡುತ್ತೇವೆ. ನ್ಯಾಯಾಂಗವನ್ನು ಗೌರವದಿಂದ ನೋಡ್ತೇವೆ. ರಾಮಜನಭೂಮಿ ವಿಚಾರದಲ್ಲಿ ಕೋರ್ಟ್ ಸಮಾನತೆಯ ಸಂದೇಶ ಕೊಟ್ಟಿದೆ. ಅನರ್ಹರ ವಿಚಾರವೂ ಯೋಗ್ಯ ರೀತಿಯ ತೀರ್ಪು ಬರುತ್ತೆ ಎಂದರು.