ಅದ್ಯಾವ ದೈವೀಶಕ್ತಿ ಉಡುಪಿಯಲ್ಲಿ ಮಳೆಬರದಂತೆ ತಡೆದಿದೆ!
ಎಲ್ಲಿ ಮಳೆ ಬೀಳಬೇಕೋ ಅಲ್ಲಿ ಮಳೆ ಬರುತ್ತಿಲ್ಲ, ಎಲ್ಲಿ ಅಷ್ಟಾಗಿ ಮಳೆಯ ಅವಶ್ಯಕತೆಯಿಲ್ಲವೋ ಅಲ್ಲಿ ಬೇಡಬೇಡವೆಂದರೂ ಮಳೆ ಬೀಳುತ್ತಿದೆ. ಪರ್ಜನ್ಯ ಜಪಕ್ಕೂ ವರುಣದೇವ ಒಲಿಯುತ್ತಿಲ್ಲ, ಕಪ್ಪೆಗಳ ಮದುವೆಯೂ ವರ್ಕೌಟ್ ಆಗಿತ್ತಿಲ್ಲ.
ಕೃಷ್ಣನ ನಗರಿ ಉಡುಪಿಯಲ್ಲೂ ಮಳೆಯ 'ಮ' ಕೂಡಾ ಇಲ್ಲ. ಒಂದೆಡೆ ರಣಬಿಸಿಲು, ಇನ್ನೊಂದೆಡೆ ನೀರಿನ ಹಾಹಾಕಾರ.. ಪಕ್ಕದಲ್ಲೇ ಅಲೆಅಲೆಯಾಗಿ ಅರಬ್ಬೀ ಸಮುದ್ರ ಭೋರ್ಗರೆಯುತ್ತಿದ್ದರೂ ಉಪ್ಪುನೀರು ಸಿಹಿಯಾಗುತ್ತದೆಯೇ?
ಉಡುಪಿಯ ಪಲಿಮಾರು ಶ್ರೀಗಳಿಂದ ಮೋದಿಗೆ ಶುಭ ಸಂದೇಶ
ಆದರೆ, ಉಡುಪಿಯಲ್ಲಿ ಸ್ವಲ್ಪದಿನ ಮಳೆಬಾರದಂತೆ, ಕೃಷ್ಣ ಮುಖ್ಯಪ್ರಾಣ ಮತ್ತು ಅನಂತೇಶ್ವರ ದೇವಾಲಯಗಳಲ್ಲಿ ವಿಶೇಷ ಪೂಜೆ ಸಲ್ಲಿಸಲಾಗಿದೆ. ಅದಕ್ಕಾಗಿಯೇ ಅಲ್ಲಿ ಮಳೆ ಬರುತ್ತಿಲ್ಲ ಎನ್ನುವ ಮಾತು ಉಡುಪಿಯಲ್ಲಿ ದಟ್ಟವಾಗಿ ಹರಿದಾಡುತ್ತಿದೆ.
ಅಕ್ಕಪಕ್ಕದ ಊರಿನಲ್ಲೂ ಮಳೆ ಬೀಳುತ್ತಿದ್ದರೂ, ಉಡುಪಿ ನಗರದಲ್ಲಿ ಮಳೆ ಬೀಳದೇ ಇರುವುದಕ್ಕೆ ಕಾರಣ, ಪರ್ಯಾಯ ಮಠ, ದೇವರಲ್ಲಿ ಸಲ್ಲಿಸಿದ ವಿಶೇಷ ಪ್ರಾರ್ಥನೆ ಕಾರಣ ಎನ್ನುವ ಮಾತು ಕೇಳಿ ಬರುತ್ತಿದೆ. ವಿಶೇಷ ಸಂದರ್ಭಗಳಲ್ಲಿ, ಈ ರೀತಿ ಮಳೆ ಬರದಂತೆ ದೇವರಲ್ಲಿ ಪ್ರಾರ್ಥಿಸುವ ಪದ್ದತಿ ಹಿಂದಿನಿಂದಲೂ ಉಡುಪಿಯಲ್ಲಿದೆ.
ಮೋದಿ ಪ್ರಮಾಣ ವಚನ ಕಾರ್ಯಕ್ರಮ; ಪೇಜಾವರ ಶ್ರೀಗಳಿಗೆ ಆಹ್ವಾನ
ಅತಿವೃಷ್ಟಿ, ಅನಾವೃಷ್ಟಿಯ ವೇಳೆಯೂ, ಉಡುಪಿ ರಥಬೀದಿಯಲ್ಲಿರುವ ಅನಂತೇಶ್ವರ ದೇವರಿಗೆ ಎಳನೀರು ಅಭಿಷೇಕ ಮಾಡುವ ಪದ್ದತಿಯಿದೆ. ಹಾಗೆಯೇ, ಕೃಷ್ಣಮಠದಲ್ಲಿ ರಥೋತ್ಸವ, ಧಾರ್ಮಿಕ ಕಾರ್ಯಕ್ರಮದ ವೇಳೆ, ಮಳೆಯಿಂದಾಗಿ ಅಡಚಣೆ ಆಗಬಾರದೆಂದು ಕಾಣಿಕೆ ಹಾಕಿ ಪ್ರಾರ್ಥನೆ ಸಲ್ಲಿಸುವ ಪರಿಪಾಠ ನಡೆದುಕೊಂಡು ಬರುತ್ತಿದೆ.
ಹಾಲೀ ಪರ್ಯಾಯ ಪೀಠಾಧಿಪತಿಗಳಾದ ಪಲಿಮಾರು ಮಠದ ವಿದ್ಯಾಧೀಶತೀರ್ಥರ ಕನಸಿನ ' ಸುವರ್ಣ ಗೋಪುರ' ಯೋಜನೆ ಉದ್ಘಾಟನೆಯ ಹಂತದಲ್ಲಿದೆ. ಶುಕ್ರವಾರ (ಮೇ 31) ರಿಂದ ಈ ಸಂಬಂಧ ಧಾರ್ಮಿಕ ಕಾರ್ಯಕ್ರಮ ಆರಂಭವಾಗಿದೆ.
ಮುನ್ನೂರು ಕೆಜಿ ತಾಮ್ರ, 900 ಕೆಜಿ ಬೆಳ್ಳಿ ಮತ್ತು ನೂರು ಕೆಜಿ ಚಿನ್ನದಿಂದ ಗೋಪುರಕ್ಕೆ ಚಿನ್ನದ ಲೇಪನ ಹಾಕಲಾಗುತ್ತಿದೆ. ದ್ವೈತ ಸಿದ್ದಾಂತ ಮತ್ತು ಕರಾವಳಿ ಕರ್ನಾಟಕದ ವೈಶಿಷ್ಟ್ಯದಿಂದ ಕೂಡಿರುವ ಈ ಗೋಪುರವನ್ನು ನಲವತ್ತು ಕೋಟಿ ರೂಪಾಯಿ ವೆಚ್ಚದಿಂದ ನಿರ್ಮಿಸಲಾಗಿದೆ.
ಜೂನ್ ಆರರಂದು ಶಿಖರ ಸ್ಥಾಪನೆ, ಜೂನ್ 9ರಂದು ಬ್ರಹ್ಮಕಲಶ, ಸಹಸ್ರ ರಜತ ಕಲಶ ಅಭಿಷೇಕ ಕಾರ್ಯಕ್ರಮ ನಡೆಯಲಿದೆ. ಉತ್ತರಾದಿ, ಪೇಜಾವರ ಶ್ರೀಗಳು ಸೇರಿದಂತೆ ವಿವಿಧ ಪೀಠಾಧಿಪತಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.
ಈ ಎಲ್ಲಾ ಧಾರ್ಮಿಕ ಕಾರ್ಯಕ್ರಮಗಳು ಸಾಂಗವಾಗಿ ನಡೆಯಲೆಂದು ಮತ್ತು ಈ ಸಂದರ್ಭದಲ್ಲಿ ಮಳೆಯ ಅಡಚಣೆ ಬರದೇ ಇರಲು ಪರ್ಯಾಯ ಮಠದಿಂದ 'ಕಾಣಿಕೆ ಕಟ್ಟು' ಪ್ರಾರ್ಥನೆ ಸಲ್ಲಿಸಲಾಗಿದೆ ಎನ್ನುವ ಮಾತು ಹರಿದಾಡುತ್ತಿದೆ.