ಸ್ವಾಮಿಯೇ ಶರಣಂ ಅಯ್ಯಪ್ಪ ಅಂದ ಕೊಲ್ಲೂರಿನ ನಾಯಿ!
ಉಡುಪಿ, ಡಿಸೆಂಬರ್.31 : ಬೀದಿ ನಾಯಿಯೊಂದು ಅಯ್ಯಪ್ಪ ಮಾಲಾಧಾರಿಗಳ ಜತೆ ಸೇರಿಕೊಂಡು 17 ದಿನಗಳ ಕಾಲ ಸುಮಾರು 700 ಕಿ.ಮೀ ನಡೆದು ಅಯ್ಯಪ್ಪ ಸ್ವಾಮಿಯ ದರ್ಶನ ಪಡೆದು ಮರಳಿ ತನ್ನ ಜಾಗಕ್ಕೆ ಸುರಕ್ಷಿತವಾಗಿ ಮರಳಿದೆ ಎಂದರೆ ನಿಮಗೆ ಆಶ್ವರ್ಯ ಆಗಿರಬೇಕಲ್ಲ...ಆಶ್ಚರ್ಯವಾದರೂ ಇದು ಸತ್ಯ...
ಈ ಶ್ವಾನ ಕೊಲ್ಲೂರಿನಿಂದ ಶಬರಿಮಲೆಗೆ ಯಾತ್ರೆ ಹೊರಟ ಯಾತ್ರಾರ್ಥಿ ಜತೆಗೆ ಸುಮಾರು 700 ಕಿ.ಮೀ ದೂರವನ್ನು ಕ್ರಮಿಸಿ ಯಾತ್ರಿಕರ ಜತೆ ಪುನಃ ಮನೆಗೆ ಮರಳಿದೆ. ಹೌದು. ಕೇರಳದ ವಿದ್ಯುತ್ ನಿಗಮದ ಉದ್ಯೋಗಿಯಾದ ನವೀನ್ ಅವರು ಕೊಲ್ಲೂರು ಮೂಕಾಂಬಿಕೆಯ ದೇವಸ್ಥಾನದಿಂದ ಶಬರಿಮಲೆಗೆ ಕಾಲ್ನಡಿಗೆ ಯಾತ್ರೆ ಆರಂಭಿಸಿದ್ದಾರೆ.
ಯಾತ್ರೆಯ ಎರಡನೇ ದಿನ ಅವರು ಈ ನಾಯಿಯನ್ನು ಕಂಡರು. ಮೊದಲ ಬಾರಿಗೆ ಈ ನಾಯಿಯನ್ನು ಕಂಡ ನವೀನ್ ಎಲ್ಲ ಬೀದಿನಾಯಿಗಳಂತೆ ಪರಿಗಣಿಸಿ, ದೂರ ಅಟ್ಟಲು ಪ್ರಯತ್ನಿಸಿದ್ದಾರೆ.
ಬೆಳಗಿನ ಜಾವಾ ಪಾದಯಾತ್ರಿಗಳ ಮೇಲೆ ದಾಳಿ ನಡೆಸುವ ಬೀದಿ ನಾಯಿಗಳಿಂದ ಭಯಗೊಂಡಿದ್ದ ನವೀನ್, ಮಾಲೂ ಕೂಡ ಅದೇ ರೀತಿ ಜಾತಿಗೆ ಸೇರಿದ್ದೆಂದು ಭಯಗೊಂಡಿದ್ದರು. ಆದರೆ, ಈ ನಾಯಿ ನವೀನ್ ಗೆ ಯಾವುದೇ ಕಾಟವನ್ನು ಕೊಡದೆ ಬೆಂಬಿಡದೆ ಹಿಂಬಾಲಿಸಿ ಕ್ಷೇತ್ರ ದರ್ಶನ ಮಾಡಿ ಹಿಂದಿರುಗಿರುವುದು ವಿಶೇಷ.
.ಬಿಸಿಲು,ಚಳಿ ಲೆಕ್ಕಿಸದೆ ಸತತ 17 ದಿನ ನವೀನ್ ರವರ ಜತೆಗೆ 700.ಕಿ.ಮೀ ನಡೆದಿದೆ. ಅವರ ಪ್ರತಿ ಹೆಜ್ಜೆಯಲ್ಲೂ ಜತೆಗಿದ್ದು, ಮೂಕಪ್ರಾಣಿಗಳ ಭಾವನಾತ್ಮಕ ನಂಟನ್ನು ಜಗತ್ತಿಗೆ ಸಾರಿದೆ.
ಕೆಎಸ್ಆರ್ ಟಿ ಸಿ ಬಸ್ ನಲ್ಲಿ ತಮ್ಮೂರುಗೆ ಕರತಂದ್ರು : ತಮ್ಮ ಯಾತ್ರೆಯ ಉದ್ದಕ್ಕೂ ಜತೆಗಿದ್ದ ನಾಯಿಯನ್ನು ಬಿಟ್ಟು ತೆರಳಲು ನವೀನ್ ಗೆ ಮನಸ್ಸು ಒಪ್ಲಿಲ್ಲ. ಹೀಗಾಗಿ ಆಕೆಗೂ ಟಿಕೆಟ್ ಕೊಂಡು ಕೆಎಸ್ಆರ್ ಟಿ ಸಿ ಬಸ್ ನಲ್ಲಿ ತಮ್ಮೂರಿಗೆ ಕರೆತಂದಿದ್ದಾರೆ.
17 ದಿನಗಳ ಕಾಲ ನಡೆದು ದಣಿದಿದ್ದ ಈ ಶ್ವಾನ ಬಸ್ ಏರುತ್ತಿದ್ದಂತೆ ನಿದ್ರೆಗೆ ಜಾರಿತ್ತು ಎಂದು ನವೀನ್ ತಿಳಿಸಿದ್ದಾರೆ. ಈಗ ನವೀನ್ ಅವರು ಈ ನಾಯಿಗೆ ಮಾಲೂ ಎಂದು ನಾಮಕರಣ ಮಾಡಿದ್ದು. ಕುಟುಂಬದ ಸದಸ್ಯಯಂತೆ ನೋಡಿಕೊಳ್ಳುತ್ತಿದ್ದಾರೆ.
ಆಕೆ ತುಂಬ ಬುದ್ದಿವಂತೆ : ಕೆಲವು ದಿನಗಳ ಕಾಲ ನನ್ನಿಂದ 20 ಮೀಟರ್ ಮುಂದೆ ನಡೆದುಕೊಂಡು ಹೋಗುತ್ತಿದ್ದ ಮಾಲೂ ಆಗಾಗ ಹಿತಿರುಗಿ ನೋಡಿ, ನಾನು ಬರುತ್ತಿರುವುದನ್ನು ಖಚಿತ ಪಡಿಸಿಕೊಂಡು ಬಳಿಕ ಮತ್ತೆ ಮುಂದೆ ಓಡುತ್ತಿದ್ದಳು.
ನಂತರದ ದಿನಗಳಲ್ಲಿ ನನ್ನ ಹೆಜ್ಜೆ ಜಾಡನ್ನು ಹಿಡಿದು ನನ್ನ ಹಿಂದೆ ಬರಲು ಪ್ರಾರಂಭಿಸಿದಳು.ಆಕೆ ತುಂಬ ಬುದ್ದಿವಂತೆ ನಾನು ಊಟಕ್ಕೆ ಅಥವಾ ಸ್ನಾನಕ್ಕೆ ತೆರಳಿದಾಗ ನನ್ನನ್ನು ಬಿಟ್ಟು ಎಲ್ಲಿಯೂ ತೆರಳುತಿರಲ್ಲಿಲ್ಲ. ತಾಳ್ಮೆಯಿಂದ ಕಾಯುತ್ತಿದ್ದಳು ಎಂದು ನವೀನ್ ಸಂತಸ ವ್ಯಕ್ತಪಡಿಸಿದ್ದಾರೆ.