ಸಂತೋಷ್ ಆತ್ಮಹತ್ಯೆ ಯತ್ನ: ಆ ಸಚಿವ ಯಾರು? ಆ ಪರಿಷತ್ ಸದಸ್ಯ ಯಾರು?
ಬೆಂಗಳೂರು, ನ. 29: ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿಯೊಬ್ಬರು ಆತ್ಮಹತ್ಯೆಗೆ ಪ್ರಯತ್ನಿಸಿರೋದು ಗಂಭೀರ ವಿಚಾರ. ನನಗೆ ಮಾಧ್ಯಮದವರು ಹಾಗೂ ಸ್ನೇಹಿತರುಗಳು ಎರಡು ಮೂರು ತಿಂಗಳ ಹಿಂದೆಯೇ ನೀಡಿದ್ದ ಮಾಹಿತಿಯನ್ನು ಜನರ ಮುಂದೆ ಇಟ್ಟಿದ್ದೇನೆ. ನಾನು ಯಾರ ಹೆಸರನ್ನೂ ಹೇಳಿಲ್ಲ. ಆದರೆ ಅವರು ಕುಂಬಳಕಾಯಿ ಕಳ್ಳ ಎಂದರೆ ಹೆಗಲು ಮುಟ್ಟಿ ನೋಡಿಕೊಳ್ಳುತ್ತಿರೋದೇಕೆ? ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಪ್ರಶ್ನಿಸಿದ್ದಾರೆ.
ಭಾನುವಾರ ಉಡುಪಿಯಲ್ಲಿ ಮಾಧ್ಯಮಗಳ ಪ್ರತಿನಿಧಿಗಳೊಂದಿಗೆ ಮಾತನಾಡಿದ ಡಿ.ಕೆ. ಶಿವಕುಮಾರ್ ಅವರು, ನನ್ನ ಬಳಿ ಸಾಕ್ಷಿ ಇದೆ. ನಾನು ಬಿಡುಗಡೆ ಮಾಡುತ್ತೇನೆ ಎಂದು ಹೇಳಿಲ್ಲ. ಈ ಹಿಂದೆ ರಾಜಕೀಯ ಕಾರ್ಯದರ್ಶಿಯನ್ನು ವಜಾ ಮಾಡಿದ್ದರು. ಕೆಲ ದಿನಗಳ ಹಿಂದೆ ಮಾಧ್ಯಮ ಸಲಹೆಗಾರರು ರಾಜೀನಾಮೆ ನೀಡಿದ್ದಾರೆ. ಈಗ ಅವರ ಆಪ್ತ ಹಾಗೂ ಅವರ ರಾಜಕೀಯ ಕಾರ್ಯದರ್ಶಿ ಆತ್ಮಹತ್ಯೆಗೆ ಮುಂದಾಗಿದ್ದಾರೆ. ಮುಖ್ಯಮಂತ್ರಿ ರಾಜಕೀಯ ಕಾರ್ಯದರ್ಶಿ ಎಂದರೆ ಅದು ಜವಾಬ್ದಾರಿಯುತ ಸ್ಥಾನ. ಅವರ ಹೆಸರು ಅನೇಕ ವಿಚಾರದಲ್ಲಿ ಕೇಳಿಬಂದಿವೆ. ಹೀಗಾಗಿ ನನಗೆ ಬಂದ ಮಾಹಿತಿ ತಿಳಿಸಿದ್ದೇನೆ ಎಂದು ವಿವರಿಸಿದರು.
ಸಂತೋಷ್ ಪತ್ನಿ ಹೇಳಿಕೆ ಉಲ್ಲೇಖ
ಸಂತೋಷ್ ಅವರ ಪತ್ನಿ ಆತ್ಮಹತ್ಯೆ ಯತ್ನಕ್ಕೂ ಕುಟುಂಬಕ್ಕೂ ಸಂಬಂಧ ಇಲ್ಲ. ರಾಜಕೀಯ ಒತ್ತಡದಿಂದ ಈ ಪ್ರಯತ್ನ ಮಾಡಿರಬೇಕು ಎಂದು ಹೇಳಿದ್ದಾರೆ. ಅಂತಹ ಒತ್ತಡ ಅವರ ಮೇಲೆ ಏನಿತ್ತು? ಅವರನ್ನು ಯಾರಾದರೂ ಬೆದರಿಸುತ್ತಿದ್ದರೆ? ಅವರ ಹೆಸರಿಗೆ ಕಳಂಕ ತರುವಂತಹದ್ದು ಏನಾದರೂ ಇದೆಯೇ? ಅವರ ಮೇಲೆ ಇರುವ ರಾಜಕೀಯ ಒತ್ತಡ ಏನು ಎಂಬುದು ಜನರಿಗೆ ಗೊತ್ತಾಗಬೇಕು ಎಂದು ಡಿ.ಕೆ. ಶಿವಕುಮಾರ್ ಆಗ್ರಹಿಸಿದ್ದಾರೆ.
ಎನ್.ಆರ್. ಸಂತೋಷ್ ಆತ್ಮಹತ್ಯೆ ಯತ್ನದ ಹಿಂದೆ ಯಡಿಯೂರಪ್ಪ ಪುತ್ರ ವಿಜಯೇಂದ್ರ ಕೈವಾಡ?
ಉನ್ನತ ಮಟ್ಟದ ತನಿಖೆ ನಡೆಯಬೇಕು
ನಾನು ಜವಾಬ್ದಾರಿಯುತ ಪ್ರತಿಪಕ್ಷದ ಅಧ್ಯಕ್ಷನಾಗಿ, ಎರಡು ಮೂರು ತಿಂಗಳ ಹಿಂದೆ ನನಗೆ ಸ್ನೇಹಿತರ ಮೂಲಕ ಬಂದ ಮಾಹಿತಿಯನ್ನು ಬಹಿರಂಗಪಡಿಸಿದ್ದೇನೆ. ಇಷ್ಟು ದಿನ ಅದು ಅವರ ಪಕ್ಷದ ಆಂತರಿಕ ವಿಚಾರ ಎಂದು ಸುಮ್ಮನಿದ್ದೆ. ಆದರೆ ರಾಜಕೀಯ ಕಾರ್ಯದರ್ಶಿಯೊಬ್ಬರು ಆತ್ಮಹತ್ಯೆಗೆ ಮುಂದಾದಾಗ ಈ ಬಗ್ಗೆ ಮಾತನಾಡಬೇಕಾಗುತ್ತದೆ. ಸಂತೋಷ್ ಅವರಿಗೆ, ಸಾಲದ ಒತ್ತಡವಿಲ್ಲ. ಚಿಕ್ಕ ವಯಸ್ಸಿಗೆ ದೊಡ್ಡ ಜವಾಬ್ದಾರಿ, ಸ್ಥಾನಮಾನ ಸಿಕ್ಕಿದೆ. ಅವರಿಗೆ ರಾಜಕೀಯ ಒತ್ತಡ ಬಿಟ್ಟರೆ ಬೇರೆ ಯಾವುದೇ ಕಾರಣಗಳು ಇಲ್ಲವಾಗಿದೆ. ಅವರಿಗೆ ಸಾಕ್ಷಾಧಾರ ಬೇಕು ಎಂದರೆ ಉನ್ನತ ಮಟ್ಟದ ತನಿಖೆ ನಡೆಸಲಿ.
ಆ ಸಚಿವ, ಪರಿಷತ್ ಸದಸ್ಯ ಯಾರು?
ನಾನು ಆ ಸಚಿವ ಯಾರು? ಆ ವಿಧಾನ ಪರಿಷತ್ ಸದಸ್ಯ ಯಾರು? ಎಂದು ಹೇಳಿಲ್ಲ. ಆದರೂ ಅವರು ಯಾಕೆ ತಮ್ಮ ಹೆಗಲು ಮುಟ್ಟಿ ನೋಡಿಕೊಳ್ಳುತ್ತಿದ್ದಾರೆ? ಎಂದು ಪ್ರಶ್ನಿಸಿದರು. ಈ ಪ್ರಕರಣದಲ್ಲಿ ಉನ್ನತ ಮಟ್ಟದ ತನಿಖೆ ನಡೆದರೆ, ಈ ವಿಡಿಯೋ ಇದೆಯೋ, ಇಲ್ಲವೋ, ಅವರನ್ನು ಬೆದರಿಸಲಾಗಿತ್ತೋ, ಇಲ್ಲವೋ ಎಂಬುದೆಲ್ಲ ಹೊರಗೆ ಬರುತ್ತದೆ. ಗೃಹ ಸಚಿವರು ಆತ್ಮಹತ್ಯೆ ಯತ್ನ ಅಪ್ರಕರಣದ ತನಿಖೆ ನಡೆಸುವುದಾಗಿ ತಿಳಿಸಿರುವುದು ಸ್ವಾಗತಾರ್ಹ ಎಂದರು.
ಸಂಪುಟ ವಿಸ್ತರಣೆ ಅವರ ಆಂತರಿಕ ವಿಚಾರ
ಸಂಪುಟ ವಿಸ್ತರಣೆ ಆಗಲಿ ಅಥವಾ ಅವರ ಆಂತರಿಕ ವಿಚಾರಕ್ಕೆ ನಮಗೂ ಸಂಬಂಧವಿಲ್ಲ. ಅವರು ಏನಾದರೊ ಮಾಡಿಕೊಳ್ಳಲಿ. ಅದರ ಬಗ್ಗೆ ಜನ ತೀರ್ಮಾನ ಮಾಡುತ್ತಾರೆ. ಅವರ ಆಂತರಿಕ ವಿಚಾರದಲ್ಲಿ ನಾವು ಹಸ್ತಕ್ಷೇಪ ಮಾಡುವುದಿಲ್ಲ. ಅದಕ್ಕೂ ಕಾಂಗ್ರೆಸ್ ಪಕ್ಷಕ್ಕೂ ಸಂಬಂಧ ಇಲ್ಲ. ಶಾಸಕರ ಅಸಮಾಧಾನದ ಬಗ್ಗೆ ಮಾಧ್ಯಮಗಳಲ್ಲಿ ವರದಿ ನೋಡಿದ್ದೇವೆ. ಅದು ಅವರಿಗೆ ಬಿಟ್ಟದ್ದು, ಅವರ ಅಸ್ತಿತ್ವ ಹಾಗೂ ಅವರ ಭವಿಷ್ಯದ ವಿಚಾರ ಎಂದು ಡಿಕೆ ಶಿವಕುಮಾರ್ ಹೇಳಿದ್ದಾರೆ.