"ಡಿಕೆಶಿ ಸ್ವಾತಂತ್ರ್ಯ ಹೋರಾಟ ಮಾಡಿ ಜೈಲಿಗೆ ಹೋಗಿಲ್ಲ": ಕೋಟ ಶ್ರೀನಿವಾಸ ಪೂಜಾರಿ
ಉಡುಪಿ, ಸೆಪ್ಟೆಂಬರ್ 5: "ಡಿಕೆಶಿ ಬಂಧನದ ಹಿನ್ನೆಲೆಯಲ್ಲಿ ಕಾಂಗ್ರೆಸ್ ಮುಖಂಡರು ಮತ್ತು ಕಾರ್ಯಕರ್ತರು ನಡೆದುಕೊಂಡ ರೀತಿ ವಿಚಿತ್ರ ಹಾಗೂ ಖಂಡನಾರ್ಹ" ಎಂದು ಮೀನುಗಾರಿಕೆ ಹಾಗೂ ಮುಜರಾಯಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ.
ಉಡುಪಿಯಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ಅವರು, "ಡಿಕೆಶಿ ಬಂಧನ ಕಾನೂನಿಗೆ ಸಂಬಂಧಿಸಿದ ಪ್ರಕ್ರಿಯೆ. ಪ್ರತಿಭಟನೆ, ಧರಣಿ ಮಾಡಲು ಕಾಂಗ್ರೆಸ್ ಗೆ ಸ್ವಾತಂತ್ರ್ಯ ಇದೆ. ಅದನ್ನು ನಾವು ಪ್ರಶ್ನಿಸುವುದಿಲ್ಲ. ಆದರೆ ಪ್ರಧಾನಿ, ಗೃಹಮಂತ್ರಿ ಫೋಟೊ ಸುಟ್ಟು ವಿಕಾರವಾಗಿ ನಡೆದುಕೊಂಡಿದ್ದಾರೆ. ಈ ಅಸಹ್ಯ ವರ್ತನೆ ಖಂಡನಾರ್ಹ. ಇಡಿಯವರಿಂದ ಅನ್ಯಾಯವಾಗಿದ್ದರೆ ಸುಪ್ರೀಂ ಕೋರ್ಟ್ ಗೆ ಹೋಗಲಿ. ಡಿಕೆಶಿ ಸ್ವಾತಂತ್ರ್ಯ ಹೋರಾಟ ಮಾಡಿ ಜೈಲಿಗೆ ಹೋಗಿಲ್ಲ. ತುರ್ತುಪರಿಸ್ಥಿತಿ ಎದುರಿಸಿ ಜೈಲಿಗೆ ಹೋಗಿಲ್ಲ" ಎಂದು ಹೇಳಿದರು.
ಡಿಕೆಶಿ ಬಂಧನ ರಾಜಕೀಯ ಪ್ರೇರಿತ ಎನ್ನುವುದೇ ರಾಜಕೀಯ : ಬೊಮ್ಮಾಯಿ
"ಪ್ರಧಾನಿ, ಗೃಹ ಸಚಿವರಿಗೆ ಅವಮಾನ ಮಾಡಿದರೆ ಪ್ರತಿರೋಧ ಮಾಡೋದು ನಮಗೂ ಗೊತ್ತು. ನಾಗರಿಕ ಸಮಾಜಕ್ಕೆ ನಿಮ್ಮ ವರ್ತನೆ ಶೋಭೆಯಲ್ಲ. ಜಗನ್, ಜನಾರ್ದನ ರೆಡ್ಡಿ ಬಂಧನ ಆದಾಗ ಹೀಗೆಲ್ಲಾ ಆಗಿತ್ತಾ? ಬಿಜೆಪಿಗೆ ಹೋರಾಟ ಹೊಸತಲ್ಲ" ಎಂದು ದಿನೇಶ್ ಗುಂಡೂರಾವ್ ಗೆ ಕೋಟ ಎಚ್ಚರಿಕೆ ನೀಡಿದರು.
"ನಿನ್ನೆವರೆಗೂ ನಾವು ಸಾಫ್ಟ್ ಕಾರ್ನರ್ ಹೊಂದಿದ್ದೆವು. ಕಾನೂನು ಉಂಟು ಡಿಕೆಶಿ ಉಂಟು ಅಂತ ಸುಮ್ಮನಿದ್ದೆವು. ಹಾಗಾಗಿ ನಮ್ಮ ಹಿರಿಯರು ನಿಧಾನವಾಗಿ ಮಾತನಾಡಿದ್ದರು. ಆದರೆ ಬಸ್ಸಿಗೆ ಕಲ್ಲು ಹೊಡೆದ್ರೆ ನಾವು ಸಹಿಸಲ್ಲ. ಪ್ರತಿಭಟನೆ ಹೆಸರಲ್ಲಿ ದಬ್ಬಾಳಿಕೆ ಮಾಡಿದ್ರೆ ಸಹಿಸೋದಿಲ್ಲ. ಡಿಕೆಶಿ ಜೈಲಿಗೆ ಹೋಗಲು ನಾವು ಕಾರಣ ಅಲ್ಲ. ಅಪಮಾನಕಾರಿ ನಡವಳಿಕೆ, ಶಬ್ದ ಪ್ರಯೋಗ ಮಾಡಿದರೆ ಸುಮ್ಮನಿರಲ್ಲ" ಎಂದು ಮುಜುರಾಯಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಎಚ್ಚರಿಕೆ ನೀಡಿದರು.