ಉಡುಪಿಯತ್ತ ಸುಳಿಯದ ಉಸ್ತುವಾರಿ ಸಚಿವ ಬೊಮ್ಮಾಯಿ
ಉಡುಪಿ, ಎಪ್ರಿಲ್ 01: ಎಲ್ಲ ಜಿಲ್ಲೆಗಳಲ್ಲಿ ಜಿಲ್ಲಾ ಉಸ್ತುವಾರಿ ಸಚಿವರ ನೇತೃತ್ವದಲ್ಲಿ ಕೊರೊನಾ ವೈರಸ್ ಕುರಿತ ಜಾಗೃತಿಗಳು, ಮುನ್ನೆಚ್ಚರಿಕಾ ಕ್ರಮಗಳ ಬಗ್ಗೆ ಸಭೆಗಳು ನಡೀತಾ ಇವೆ. ಆದರೆ ಕರಾವಳಿ ಜಿಲ್ಲೆ ಉಡುಪಿಯಲ್ಲಿ ಮಾತ್ರ ಉಸ್ತುವಾರಿ ಸಚಿವರ ಸುಳಿವೇ ಇಲ್ಲದಂತಾಗಿದೆ.
ವೈದ್ಯಕೀಯ ಸಿಬ್ಬಂದಿ, ಜನಪ್ರತಿನಿಧಿಗಳು, ಅಧಿಕಾರಿ ವರ್ಗ ಮತ್ತು ಪೊಲೀಸರು ನಿದ್ದೆಬಿಟ್ಟು ಕೆಲಸ ಮಾಡುತ್ತಿದ್ದಾರೆ. ರಾಜ್ಯ ಸರಕಾರ ಇತ್ತೀಚಿಗೆ ಒಂದು ಆದೇಶ ನೀಡಿ ಕೊರೊನಾಕ್ಕೆ ಸಂಬಂಧಿಸಿದಂತೆ ಜಿಲ್ಲಾ ಉಸ್ತುವಾರಿ ಸಚಿವರುಗಳು ಆಯಾ ಜಿಲ್ಲೆಗಳ ಜವಾಬ್ದಾರಿ ತೆಗೆದುಕೊಂಡು ಕೆಲಸ ಮಾಡಬೇಕು ಎಂದು ಕಟ್ಟುನಿಟ್ಟಾಗಿ ಹೇಳಿದೆ.
ಗೃಹ ಸಚಿವ ಬಸವರಾಜ ಬೊಮ್ಮಾಯಿಯವರು ಉಡುಪಿ ಜಿಲ್ಲೆಯ ಉಸ್ತುವಾರಿ ಸಚಿವರೂ ಹೌದು. ಆದರೆ ಸಚಿವ ಬಸವರಾಜ ಬೊಮ್ಮಾಯಿ ಉಡುಪಿಗೆ ಕೊನೇ ಭೇಟಿ ನೀಡಿದ್ದು, ಜನವರಿ 26 ಗಣರಾಜ್ಯೋತ್ಸವದಂದು.
ಗಣರಾಜ್ಯೋತ್ಸವಕ್ಕೆ ಬಂದು ಹೋದ ಸಚಿವರು ಅದರ ಬಳಿಕ ಇತ್ತ ಒಮ್ಮೆಯೂ ಬಂದಿಲ್ಲ. ನಿನ್ನೆ ಉಡುಪಿಯಲ್ಲಿ ದಕ್ಷಿಣ ಕನ್ನಡ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ್ ಪೂಜಾರಿ ಆಗಮಿಸಿ ಸಭೆ ನಡೆಸಿ ಹೋಗಿದ್ದಾರೆ. ಉಡುಪಿ-ಚಿಕ್ಕಮಗಳೂರು ಸಂಸದೆ ಶೋಭಾ ಕರಂದ್ಲಾಜೆ ಮಾರ್ಚ್ 21 ರಂದು ಬಂದು ಹೋಗಿದ್ದಾರೆ.
ಆದರೆ ಜಿಲ್ಲಾ ಉಸ್ತುವಾರಿ ಸಚಿವರು ಕೊರೊನಾದ ಬಗ್ಗೆ ಸಭೆ ಮಾಡಲು ಒಮ್ಮೆಯೂ ಬಂದಿಲ್ಲ. ಮೊದಲೇ ಉಡುಪಿಗೆ ಹೊರ ಜಿಲ್ಲೆಯ ಮಂತ್ರಿಗಳೇ ಉಸ್ತುವಾರಿ ಸಚಿವರು. ಅವರಾದರೂ ಒಮ್ಮೆ ಜಿಲ್ಲೆಗೆ ಭೇಟಿ ನೀಡುವುದು ಬೇಡವೇ? ಎಂದು ಇಲ್ಲಿಯ ಜನ ಮಾತಾಡಿಕೊಳ್ಳುತ್ತಿದ್ದಾರೆ.
ಈ ಹಿಂದೆ ಉಡುಪಿ ಉಸ್ತುವಾರಿ ಸಚಿವರಾಗಿದ್ದ ಜಯಮಾಲಾ ಕೂಡ ಹೊರ ಜಿಲ್ಲೆಯವರಾಗಿದ್ದರು ಎಂಬುದು ಗಮನಾರ್ಹ ಸಂಗತಿ.