ಆಂಜನೇಯ ಭಾವಚಿತ್ರಕ್ಕೆ ಟೋಪಿ ಹಾಕಿ ಸೆಲ್ಫಿ, ಘಟನೆಯಿಂದ ಬಿಗುವಿನ ವಾತಾವರಣ
ಉಡುಪಿ, ನವೆಂಬರ್ 15: ಉಡುಪಿಯ ದೊಡ್ಡಣಗುಡ್ಡೆಯಲ್ಲಿ ದುಷ್ಕರ್ಮಿಗಳ ತಂಡವೊಂದು ಇಬ್ಬರಿಗೆ ಥಳಿಸಿ, ಆಂಜನೇಯನ ಭಾವಚಿತ್ರವನ್ನು ವಿರೂಪ ಮಾಡಲು ಯತ್ನಿಸಿದ ಘಟನೆ ನಡೆದಿದೆ.
ಜೆಎನ್ಯುದಲ್ಲಿ ಸ್ವಾಮಿ ವಿವೇಕಾನಂದರ ಪ್ರತಿಮೆ ವಿರೂಪ
ದೊಡ್ಡಣಗುಡ್ಡೆಯ ಜಲಜಾಕ್ಷಿ ಶೆಡ್ತಿ ರಂಗಮಂದಿರದಲ್ಲಿ ರಾತ್ರಿ ಈ ಘಟನೆ ನಡೆದಿದೆ. ನಿನ್ನೆ ಗುರುವಾರ ಇಲ್ಲಿ ಪೂಜೆ ನಡೆದಿತ್ತು. ಕತ್ತಲಾಗುತ್ತಿದ್ದಂತೆ ಬಂದ ಏಳೆಂಟು ಮಂದಿಯ ದುಷ್ಕರ್ಮಿಗಳ ತಂಡ, ಇಬ್ಬರಿಗೆ ಥಳಿಸಿ ಆಂಜನೇಯನ ಭಾವಚಿತ್ರಕ್ಕೆ ಟೋಪಿ ಹಾಕಿ ಸೆಲ್ಫಿ ತೆಗೆಯಲು ಮುಂದಾಗಿದೆ. ಇದನ್ನು ಗಮನಿಸಿದ ಕೆಲವರು ಹೀಗೆ ಮಾಡದಂತೆ ಸೂಚಿಸಿದ್ದಾರೆ. ಇದರಿಂದ ವಾಗ್ವಾದ ಉಂಟಾಗಿ ಸ್ಥಳದಲ್ಲಿ ಬಿಗುವಿನ ವಾತಾವರಣ ಏರ್ಪಟ್ಟಿದೆ. ತಕ್ಷಣವೇ ಆ ಗುಂಪಿನವರು ಪರಾರಿಯಾಗಿದ್ದಾರೆ. ದೊಡ್ಡಣಗುಡ್ಡೆ ಮಸೀದಿ ಹಿಂಬದಿ ಇರುವ ರಂಗಮಂದಿರ ಇದಾಗಿದ್ದು, ಪ್ರತಿನಿತ್ಯ ಇಲ್ಲಿ ಆಟೋಟಗಳು, ಪೂಜೆ ಪುನಸ್ಕಾರಗಳು ನಡೆಯುತ್ತಿರುತ್ತವೆ. ಈ ಘಟನೆ ಹಿನ್ನೆಲೆಯಲ್ಲಿ ಸ್ಥಳದಲ್ಲಿ ಸ್ಥಳೀಯರು ಜಮಾಯಿಸಿದ್ದಾರೆ.
ಈ ಕೃತ್ಯವನ್ನು ಭಿನ್ನ ಕೋಮಿನವರು ಮಾಡಿದ್ದಾರೆ ಎಂದು ಸ್ಥಳೀಯರು ಆರೋಪಿಸಿದ್ದು, ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಮೂವರನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಪ್ರಕರಣದ ಸೂಕ್ಷ್ಮತೆ ಅರಿತ ಪೊಲೀಸರು ಸ್ಥಳಕ್ಕೆ ಆಗಮಿಸಿ ಬಿಗಿ ಬಂದೋಬಸ್ತ್ ಕೈಗೊಂಡಿದ್ದಾರೆ. ಎಸ್ಪಿ ನಿಶಾ ಜೇಮ್ಸ್ ಸ್ಥಳಕ್ಕೆ ಆಗಮಿಸಿ ಮಾಹಿತಿ ಪಡೆದು ಸೂಕ್ತ ಬಂದೋಬಸ್ತ್ ಗೆ ನಿರ್ದೇಶನ ನೀಡಿದರು.