ಶಿರೂರು ಶ್ರೀಗಳ ಸಾವಿನ ಪ್ರಕರಣ; ಮರು ತನಿಖೆಗೆ ಒತ್ತಾಯ
ಉಡುಪಿ, ಜುಲೈ 20: ಉಡುಪಿಯ ಅಷ್ಟಮಠಾಧೀಶರಲ್ಲಿ ಒಬ್ಬರಾಗಿದ್ದ ಶಿರೂರು ಮಠದ ಲಕ್ಷ್ಮೀವರ ತೀರ್ಥರು ನಿಗೂಢ ರೀತಿಯಲ್ಲಿ ಅಸುನೀಗಿ ಒಂದು ವರ್ಷ ಕಳೆದಿದೆ. ಇದೊಂದು ಸ್ವಾಭಾವಿಕ ಸಾವು ಎಂದು ಪೊಲೀಸರು ನ್ಯಾಯಾಲಯಕ್ಕೆ ವರದಿಯನ್ನೂ ಸಲ್ಲಿಸಿದ್ದಾರೆ. ಈ ನಡುವೆ ಪ್ರಕರಣದ ಮರುತನಿಖೆಗೆ ಕೂಗು ಕೇಳಿಬಂದಿದೆ.
ಶಿರೂರು ಸ್ವಾಮೀಜಿ ಸಾವಿನ ಪ್ರಕರಣಕ್ಕೆ ಸಂಬಂಧಿಸಿ ಮಣಿಪಾಲ ಕೆಎಂಸಿಯ ತಜ್ಞ ವೈದ್ಯರು ನೀಡಿದ ಮರಣೋತ್ತರ ಪರೀಕ್ಷೆ ವರದಿಯಲ್ಲಿ ಸ್ವಾಮೀಜಿಯ ರಕ್ತ, ಮೂತ್ರ, ಉದರಾಂಗಗಳಲ್ಲಿ ವಿಷದ ಅಂಶ ಪತ್ತೆಯಾಗಿರುವುದಾಗಿ ಉಲ್ಲೇಖಿಸಲಾಗಿದ್ದು, ಈ ದಾಖಲೆಗಳು ಸ್ವಾಮೀಜಿಯ ಸಾವು ಸ್ವಾಭಾವಿಕ ಅಲ್ಲ ಎಂಬುದನ್ನು ಸಾಬೀತು ಪಡಿಸುತ್ತದೆ ಎಂದು ಕುಂದಾಪುರದ ನ್ಯಾಯವಾದಿ ರವಿಕಿರಣ್ ಮುರ್ಡೇಶ್ವರ ಅಭಿಪ್ರಾಯಪಟ್ಟಿದ್ದಾರೆ.
ಶಿರೂರು ಮಠಾಧೀಶರಾಗಿದ್ದ ಲಕ್ಷ್ಮೀವರ ತೀರ್ಥರು ತೀರಿಕೊಂಡು ತುಂಬಿತು ವರ್ಷ
ಉಪ್ಪೂರಿನ ಸ್ಪಂದನಾ ವಿಶೇಷ ಮಕ್ಕಳ ಶಾಲೆಯಲ್ಲಿ ನಡೆದ ಶಿರೂರು ಸ್ವಾಮೀಜಿ ಸಂಸ್ಮರಣೆ ಕಾರ್ಯಕ್ರಮದಲ್ಲಿ ಅವರು ಇದನ್ನು ಉಲ್ಲೇಖಿಸಿದ್ದಾರೆ. ಶಿರೂರು ಸ್ವಾಮೀಜಿ ದೈವಾಧೀನರಾಗಿ ಸರಿಯಾಗಿ ಒಂದು ವರ್ಷ ಕಳೆಯಿತು. ಇಷ್ಟಾದರೂ ಸಾವಿನ ನಿಗೂಢತೆ ಬಗ್ಗೆ ಸಂಶಯಗಳ ನಿವಾರಣೆಯಾಗಿಲ್ಲ. ಈ ದಿನದವರೆಗೂ ಸ್ವಾಮೀಜಿ ಸಾವಿನ ಬಗ್ಗೆ ಕನಿಷ್ಠ ಒಂದು ದೂರು ಕೂಡ ದಾಖಲಾಗಿಲ್ಲ.
"ಸ್ವಾಮೀಜಿಯವರು ಸತ್ತ ಮರುಕ್ಷಣದಲ್ಲೇ ಮಣಿಪಾಲದ ಕೆಎಂಸಿ ಆಸ್ಪತ್ರೆಯ ಅಧೀಕ್ಷಕರು ದೇಹದಲ್ಲಿ ವಿಷಕಾರಿ ಅಂಶ ಇದೆ ಎಂದಿದ್ದರು. ವಿಷ ವಿಜ್ಞಾನ ವರದಿ ಪ್ರಕಾರ ಸ್ವಾಮೀಜಿಯ ರಕ್ತ, ಮೂತ್ರ, ಉದರಾಂಗಗಳಲ್ಲಿ ವಿಷ ಕಂಡುಬಂದಿದೆ. ಇದರ ಉಲ್ಲೇಖವನ್ನು ಮರಣೋತ್ತರ ಪರೀಕ್ಷೆಯ ವರದಿಯಲ್ಲೂ ಮಾಡಲಾಗಿದೆ. ರಕ್ತ ಮತ್ತು ಉದರ ಅಂಗದಲ್ಲಿ ಆರ್ಗನೋ ಪ್ರಾಸ್ಪೋರಸ್ ಮತ್ತು ಮೂತ್ರದಲ್ಲಿ ಡೆಂಜೋ ಡಯಜಿನ್ ಪೈನ್ ಎಂಬ ವಿಷ ಕಂಡುಬಂದಿರುವ ಬಗ್ಗೆ ಹೇಳಲಾಗಿತ್ತು. ಎರಡನೇ ವರದಿಯ ಆಧಾರದಲ್ಲಿ ತನಿಖಾಧಿಕಾರಿಗಳು ಇದೊಂದು ಸ್ವಾಭಾವಿಕ ಸಾವು ಎಂಬ ನಿರ್ಣಯಕ್ಕೆ ಬಂದಿದ್ದಾರೆ. ವಿಷಕಾರಿ ಅಂಶಗಳಿರುವ ವರದಿಯನ್ನಿಟ್ಟುಕೊಂಡು ಪ್ರಕರಣವನ್ನು ಮತ್ತೆ ತೆರೆಯಬಹುದೆಂದು ಕಾನೂನು ತಜ್ಞರು ತಿಳಿಸಿದ್ದಾರೆ" ಎಂದು ಅವರು ಹೇಳಿದರು.
ಉಡುಪಿ ಶ್ರೀಕೃಷ್ಣನ ವಿಗ್ರಹ ಅಲಂಕರಿಸುವ ತುಳಸಿ ದಳ ಔಷಧಿಗೆ ಬಳಕೆ
ಶಿರೂರು ಸ್ವಾಮಿಗಳು ದೈವಾಧೀನರಾಗಿ ಒಂದು ವರ್ಷ ಪೂರ್ಣಗೊಂಡ ಹಿನ್ನೆಲೆಯಲ್ಲಿ ವಿಶೇಷ ಮಕ್ಕಳ ಸಮ್ಮುಖದಲ್ಲಿ ಸಂಸ್ಮರಣಾ ಕಾರ್ಯಕ್ರಮವನ್ನು ನಡೆಸಲಾಯಿತು. ಈ ಸಂದರ್ಭದಲ್ಲಿ ಸ್ವಾಮಿಗಳ ಅಭಿಮಾನಿಗಳಿಂದ ಸಾವಿನ ಮರುತನಿಖೆಗೆ ವ್ಯಾಪಕ ಒತ್ತಾಯವೂ ಕೇಳಿಬಂತು.
ಭಯದಿಂದ ಸ್ವಾಮೀಜಿಯ ಬಂಧುಗಳ್ಯಾರೂ ಮುಂದೆ ಬರದ ಕಾರಣ ಇನ್ನೂ ದೂರು ದಾಖಲಾಗಿಲ್ಲ. ಸ್ವಾಮೀಜಿಯ ಸಾವಿನ ನಂತರವೂ ಅವರ ಬಗ್ಗೆ ಅಪಪ್ರಚಾರ ನಡೆಸಲಾಗುತ್ತಿದೆ. ಅಷ್ಟಮಠಾಧೀಶರಾರೂ ಈ ಸಾವಿನ ತನಿಖೆಗೆ ಆಗ್ರಹಿಸಿಲ್ಲ. ತನಿಖೆ ನೆಪದಲ್ಲಿ ಸ್ವಾಮೀಜಿಯ ಬಂಧುಗಳಿಗೆ ಕಿರುಕುಳ ನೀಡಲಾಗಿದೆ. ಸಾವಿಗೆ ಮುನ್ನ ಶಿರೂರು ಶ್ರೀಗಳು ಆತಂಕ ವ್ಯಕ್ತಪಡಿಸಿ ಪೊಲೀಸ್ ಇಲಾಖೆಗೆ ಪತ್ರ ಬರೆದಿದ್ದರು. ಈ ಪತ್ರದಲ್ಲಿ ಉಲ್ಲೇಖಿಸಿದ ಯಾವುದೇ ಮಠಾಧೀಶರನ್ನು, ವ್ಯಕ್ತಿಗಳನ್ನು ತನಿಖೆ ಮಾಡಿಲ್ಲ ಎಂದು ಅವರ ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.