ನಿರ್ಮಲಾ ಸೀತಾರಾಮನ್ ಸಹಾಯ ಕೋರಿದ ಉಡುಪಿ ಮೀನುಗಾರರು
ಉಡುಪಿ, ಫೆಬ್ರವರಿ 25: ಆಳಸಮುದ್ರ ಮೀನುಗಾರಿಕೆಗೆ ಉಡುಪಿಯ ಮಲ್ಪೆ ಬಂದರಿನಿಂದ ಹೊರಟು ಕಣ್ಮರೆಯಾಗಿರುವ 7 ಮಂದಿ ಮೀನುಗಾರರ ಬಗ್ಗೆಯಾಗಲಿ, ಅವರು ತೆರಳಿದ್ದ ಸುವರ್ಣ ತ್ರಿಭುಜ ಬೋಟ್ ಬಗ್ಗೆಯಾಗಲಿ ಈವರೆಗೆ ಚಿಕ್ಕ ಕುರುಹು ಕೂಡ ಲಭ್ಯವಾಗಿಲ್ಲ.
ಉಡುಪಿ ಪೊಲೀಸರ ತಂಡ, ಕೋಸ್ಟ್ ಗಾರ್ಡ್ ಹಾಗೂ ನೌಕಾ ಪಡೆ ಕಳೆದ 2 ತಿಂಗಳಿನಿಂದ ಶೋಧಕಾರ್ಯ ನಡೆಸಿದರೂ ಒಂದೇ ಒಂದು ಸುಳಿವು ಪತ್ತೆಯಾಗದ ಹಿನ್ನೆಲೆಯಲ್ಲಿ ಕೈ ಚೆಲ್ಲಿ ಕೂತಿವೆ. ಕಣ್ಮರೆಯಾಗಿರುವ ಮೀನುಗಾರರ ನಿಗೂಢತೆ ಬೇಧಿಸಲು ಉಡುಪಿ ಮೀನುಗಾರರು ರಕ್ಷಣಾ ಸಚಿವರ ಸಹಾಯ ಕೋರಿದ್ದಾರೆ.
ನಾಪತ್ತೆಯಾಗಿರುವ ಮೀನುಗಾರರ ಮೊಬೈಲ್ 46 ದಿನಗಳ ಬಳಿಕ ರಿಂಗಣಿಸಿತೆ?
ಉಡುಪಿ ಶಾಸಕ ಕೆ. ರಘುಪತಿ ಭಟ್ ಅವರ ನೇತೃತ್ವದ ಉಡುಪಿ ಮೀನುಗಾರರ ನಿಯೋಗವು ನಿನ್ನೆ ಬೆಂಗಳೂರಿನಲ್ಲಿ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಅವರನ್ನು ಭೇಟಿಯಾಗಿ ಕಣ್ಮರೆಯಾಗಿರುವ ಮೀನುಗಾರರ ಪತ್ತೆ ಹಾಗೂ ರಕ್ಷಣೆಗೆ ಆಗ್ರಹಿಸಿದೆ.
ಈ ಸಂದರ್ಭದಲ್ಲಿ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಸಕಾರಾತ್ಮಕವಾಗಿ ಸ್ಪಂದಿಸಿದ್ದು, ಖುದ್ದಾಗಿ ತಾನೇ ಮಾರ್ಚ್ 5ರೊಳಗೆ ನೌಕಾ ಪಡೆಯ ಅಧಿಕಾರಿಗಳ ಸಹಿತ ಮಲ್ಪೆಗೆ ಆಗಮಿಸಿ ಮೀನುಗಾರರೊಂದಿಗೆ ಸಭೆ ನಡೆಸಿ ಮುಂದಿನ ಕಾರ್ಯಾಚರಣೆ ಬಗ್ಗೆ ಕ್ರಮ ಕೈಗೊಳ್ಳುತ್ತೇನೆ ಎಂದು ಭರವಸೆ ನೀಡಿದ್ದಾರೆ. ಇದು ಕಣ್ಮರೆಯಾಗಿರುವ ಮೀನಗಾರರ ಕುಟುಂಬಸ್ಥರಲ್ಲಿ ಆಶಾ ಭಾವನೆ ಮೂಡಿಸಿದೆ.
ಹೈಡ್ರೊಗ್ರಾಫಿಕ್ಸ್ ಮೂಲಕ ಮುಂದುವರೆದ ನಾಪತ್ತೆಯಾದ ಮೀನುಗಾರರ ಪತ್ತೆ ಕಾರ್ಯಾಚರಣೆ
ನಿಯೋಗದಲ್ಲಿ ಮೀನು ಮಾರಾಟ ಫೆಡರೇಶನ್ ಅಧ್ಯಕ್ಷ ಯಶ್ ಪಾಲ್ ಸುವರ್ಣ, ಮಲ್ಪೆ ಮೀನುಗಾರರ ಸಂಘದ ಅಧ್ಯಕ್ಷ ಸತೀಶ್ ಕುಂದರ್, ಅಖಿಲ ಭಾರತೀಯ ಮೀನುಗಾರರ ವೇದಿಕೆಯ ಪದಾಧಿಕಾರಿಗಳಾದ ದಯಾನಂದ ಸುವರ್ಣ, ಕರುಣಾಕರ ಸಾಲ್ಯಾನ್ , ಶಶಿಧರ ತಿಂಗಳಾಯ, ಗೋಪಾಲ ಆರ್.ಕೆ., ಹರೀಶ್ ಕುಂದರ್ ಹಾಗೂ ನಾಪತ್ತೆಯಾದ ಮೀನುಗಾರರ ಕುಟುಂಬ ಸದಸ್ಯರಾದ ಗಣೇಶ್ ಕೋಟ್ಯಾನ್ , ಪ್ರಮೋದ್ ಸಾಲ್ಯಾನ್ , ಪಾಂಡು ಮೊಗೇರ ಉಪಸ್ಥಿತರಿದ್ದರು.