ಉಡುಪಿ ಕೃಷ್ಣ ಮಠದಲ್ಲಿ ದೀಪಾವಳಿ ಸಡಗರ; ಗಂಗಾಪೂಜೆ, ತೈಲಾಭ್ಯಂಜನ
ಉಡುಪಿ, ಅಕ್ಟೋಬರ್ 27: ಉಡುಪಿಯ ಶ್ರೀ ಕೃಷ್ಣಮಠದಲ್ಲಿ ದೀಪಾವಳಿ ಹಬ್ಬದ ಸಂಭ್ರಮ ಮನೆ ಮಾಡಿದೆ. ಶ್ರೀ ಕೃಷ್ಣ ಮಠದಲ್ಲಿ ದೀಪಾವಳಿಯ ಪ್ರಯುಕ್ತ ಭಾನುವಾರ ಜಲ ಪೂರಣ ಗಂಗಾ ಪೂಜೆ ನೆರವೇರಿತು. ಪರ್ಯಾಯ ಪಲಿಮಾರು ಶ್ರೀ ವಿದ್ಯಾಧೀಶತೀರ್ಥ ಶ್ರೀಪಾದರು ಹಾಗೂ ಪಲಿಮಾರು ಕಿರಿಯ ಯತಿಗಳಾದ ಶ್ರೀ ವಿದ್ಯಾರಾಜೇಶ್ವರತೀರ್ಥ ಶ್ರೀಪಾದರ ಉಪಸ್ಥಿತಿಯಲ್ಲಿ ಮಠದ ಪುರೋಹಿತರಾದ ಮಧುಸೂದನ ಆಚಾರ್ಯರು ಪೂಜೆ ನೆರವೇರಿಸಿದರು.
ನರಕ ಚತುರ್ದಶಿ ಪ್ರಯುಕ್ತ ಮಠದ ಚಂದ್ರ ಶಾಲೆಯಲ್ಲಿ ಎಣ್ಣೆ ಶಾಸ್ತ್ರ ಕಾರ್ಯಕ್ರಮವೂ ನೆರವೇರಿತು. ಮಠದ ಚಂದ್ರ ಶಾಲೆಯಲ್ಲಿ ಎಣ್ಣೆ ಶಾಸ್ತ್ರ ಕಾರ್ಯಕ್ರಮ ನಡೆದಿದ್ದು, ಪರ್ಯಾಯ ಪಲಿಮಾರು ಶ್ರೀಗಳು ಸಹಿತ ಮಠಾಧೀಶರು ತೈಲಾಭ್ಯಂಜನ ಮಾಡಿಕೊಂಡರು.
ಪರ್ಯಾಯ ಶ್ರೀಗಳ ಉಪಸ್ಥಿತಿಯಲ್ಲಿ ನೂರಾರು ಭಕ್ತರಿಗೆ ಸ್ವಾಮೀಜಿಗಳು ತೈಲ ಅಭ್ಯಂಜನ ಮಾಡಿಸುವುದು ಪದ್ಧತಿ.
ಬೆಂಗಳೂರಿನಲ್ಲಿರುವ ಹಿರಿಯ ಯತಿ ಪೇಜಾವರ ಶ್ರೀಗಳು ವಿದ್ಯಾಪೀಠದಲ್ಲಿ ಎಣ್ಣೆ ಶಾಸ್ತ್ರ ಮಾಡಿದರು. ಹಿರಿಯ ವಿದ್ವಾಂಸರಾದ ಶ್ರೀ ಕೇಶವಬಾಯಿರಿ ಆಚಾರ್ಯರು ಪೇಜಾವರ ಶ್ರೀಗಳಿಗೆ ಎಣ್ಣೆಶಾಸ್ತ್ರ ನೆರವೇರಿಸಿದರು.