ಶಿವಣ್ಣ ಕುಣಿದ ಉಡುಪಿಯ ಸೇತುವೆಗೆ ಕುತ್ತು: ಅಪಾಯದ ಅಂಚಿನಲ್ಲಿ ದೀಪಕ್ ತೂಗು ಸೇತುವೆ
ಉಡುಪಿ, ಅಕ್ಟೋಬರ್ 19: ಅದು ಪ್ರವಾಸಿಗರ ಅಚ್ಚು ಮೆಚ್ಚಿನ ತೂಗು ಸೇತುವೆ. ವೀಕೆಂಡ್ಗಳಲ್ಲಿ ಪ್ರವಾಸಿಗರಿಂದ ತುಂಬಿರುವ ಈ ತೂಗು ಸೇತುವೆಯಲ್ಲಿ, ಸ್ಯಾಂಡಲ್ವುಡ್ನ ಖ್ಯಾತನಾಮರ ಸಿನಿಮಾ ಚಿತ್ರೀಕರಣ ಕೂಡ ನಡೆದಿದೆ.
ಆದರೆ ಸದ್ಯ ಸರ್ಕಾರದ ನಿರ್ಲಕ್ಷ್ಯದಿಂದ ಹಾಗೂ ನಿರ್ವಹಣೆ ಇಲ್ಲದೇ ಅಪಾಯವನ್ನು ಎದುರು ನೋಡುತ್ತಿದೆ. ಊರವರ ಕೊಂಡಿಯಂತಿರುವ ತೂಗು ಸೇತುವೆ ಕಳಚಿ ಬೀಳುವ ಸ್ಥಿತಿಯಲ್ಲಿದೆ.
ತುಕ್ಕು ಹಿಡಿದ ಕಬ್ಬಿಣ, ತುಂಡಾಗಿ ನೇತಾಡುವ ರಾಡ್ಗಳು, ಗ್ರೀಸಿಂಗ್ ಮಾಡದೇ ಇರುವ ವೈಯರ್ ರೋಪ್ಗಳು. ನಡೆದಾಡುವಾಗ ಭಯಪಡುವಷ್ಟು ಮೇಲೆ ಕೆಳಗೆ ಅಲುಗಾಡುವ ಹಲಗೆಗಳು. ಹೀಗಿದ್ದರೂ ಇಲ್ಲಿಗೆ ನೂರಾರು ಸಂಖ್ಯೆಯಲ್ಲಿ ಪ್ರವಾಸಿಗರು ಬರುತ್ತಾರೆ.
ಹ್ಯಾಟ್ರಿಕ್ ಹೀರೋ ಶಿವರಾಜ್ಕುಮಾರ್ ಅಭಿನಯದ ಟಗರು ಸಿನಿಮಾದ ಕೆಲ ದೃಶ್ಯ ತುಣುಕುಗಳು ಈ ತೂಗು ಸೇತುವೆಯಲ್ಲಿ ಚಿತ್ರೀಕರಣಗೊಂಡಿದೆ. ಇದು ಉಡುಪಿಯಿಂದ ಕೇವಲ 10 ಕಿ.ಮೀ ದೂರದಲ್ಲಿರುವ ದೀಪಕ್ ತೂಗು ಸೇತುವೆ ಸದ್ಯದ ಪರಿಸ್ಥಿತಿ.
ಪಡುಕುದ್ರು ಮತ್ತು ತಿಮ್ಮಣ್ಣಕುದ್ರುವಿಗೆ ಹಿಂದೆ ದೋಣಿ ಮೂಲಕ ಸಂಪರ್ಕ ಇತ್ತು. ನಂತರ ಸುಳ್ಯದ ತೂಗು ಸೇತುವೆಗಳ ಹರಿಕಾರ, ಗಿರೀಶ್ ಭಾರಧ್ವಾಜ್ರವರ ಮಾರ್ಗದರ್ಶನದಲ್ಲಿ 1991ರಲ್ಲಿ ತೂಗು ಸೇತುವೆ ನಿರ್ಮಾಣ ಮಾಡಿ, ದೀಪಕ್ ತೂಗು ಸೇತುವೆ ಅಂತ ನಾಮಕರಣ ಮಾಡಲಾಯಿತು.
ಆರಂಭದಲ್ಲಿ ಕುದ್ರುವಿಗೆ ಸಂಪರ್ಕಕ್ಕೆ ಮಾತ್ರ ಸೀಮಿತವಾಗಿದ್ದ ಈ ತೂಗು , ನಂತರದ ದಿನಗಳಲ್ಲಿ ದೊಡ್ಡ ಪ್ರವಾಸಿ ತಾಣವಾಗಿದೆ ಮಿಂಚುತ್ತಿದೆ. ಆದರೆ ಸದ್ಯ ತೂಗು ಸೇತುವೆ ನಿರ್ವಹಣೆ ಇಲ್ಲದೇ ಅಪಾಯದ ಕರೆ ಘಂಟೆ ಬಾರಿಸುತ್ತಿದೆ. ಅನಾಹುತ ಎದುರು ನೋಡುತ್ತಿದೆ.
ಕನ್ನಡ ಹಲವಾರು ಸಿನಿಮಾಗಳು, ಶಾರ್ಟ್ ಮೂವಿಗಳು ಇಲ್ಲಿ ತಯಾರಾಗಿದೆ. ವೆಡ್ಡಿಂಗ್ ಶೂಟ್ಗಳು ದಿನ ನಿತ್ಯ ನಡೆಯುತ್ತಿದೆ. ವೀಕೆಂಡ್ಗಳು ಸಾವಿರಾರು ಸಂಖ್ಯೆಯಲ್ಲಿ ಬರುವ ಇಲ್ಲಿಗೆ ಬರುವ ಪ್ರವಾಸಿಗರು, ಸ್ವರ್ಣನದಿ ಕಾಯಕಿಂಗ್ ಮಾಡಿ ತೂಗು ಸೇತುವೆಯಲ್ಲಿ ಸೆಲ್ಪಿ ಕ್ಲಿಕ್ಕಿಸಿ ಎಂಜಾಯ್ ಮಾಡುತ್ತಾರೆ.
ಇಂತಹ ಪ್ರಸಿದ್ಧಿ ಪಡೆದ ತೂಗು ಸೇತುವೆ ನಿರ್ವಹಣೆ ಇಲ್ಲದೇ ಸೊರಗುತ್ತಿದೆ. ಕಾಂಕ್ರೀಟ್ ಹಲಗೆಗಳಲ್ಲಿ ಮಧ್ಯೆ ಒಂದೆರಡು ಹಲಗೆಗಳು ಒಡೆದಿದ್ದು, ಈ ಭಾಗದಲ್ಲಿ ಎಚ್ಚರತಪ್ಪಿ ಕಾಲಿಟ್ಟರೆ ಅಪಾಯ ತಪ್ಪಿದ್ದಲ್ಲ. ಸೇತುವೆಯ ಎರಡೂ ಬದಿಗೆ ಸುರಕ್ಷತೆಗಾಗಿ ಅಳವಡಿಸಿರುವ ಕಬ್ಬಿಣದ ರಾಡ್ಗಳು ತುಂಡಾಗಿ ನೇತಾಡುತ್ತಿದೆ. ಸೇತುವೆಯನ್ನು ಹಿಡಿದಿಟ್ಟುಕೊಳ್ಳುವ ಪ್ರಮುಖ ವೈಯರ್ ರೋಪ್ಗೆ ಗ್ರೀಸಿಂಗ್ ಮಾಡದೇ ಅನೇಕ ವರ್ಷಗಳು ಕಳೆದಿವೆ. ಎಲ್ಲಾ ನೆಟ್ ಬೋಲ್ಟ್ಗಳು ತುಕ್ಕು ಹಿಡಿದು ಹಾಳಾಗುತ್ತಿದೆ.
Recommended Video
ನಡೆದಾಡಲು ಭಯವಾಗುವ ತೂಗು ಸೇತುವೆಯನ್ನು ಆದಷ್ಟು ಬೇಗ ಸರಿ ಪಡಿಸಿ ಪ್ರವಾಸೋದ್ಯಮ ಅಭಿವೃದ್ಧಿಪಡಿಸಿ ಎನ್ನುವ ಆಗ್ರಹ ಊರವರದ್ದು. ಯಾಕೆಂದರೆ ಇಲ್ಲಿಗೆ ಬರುವ ಪ್ರವಾಸಿಗರನ್ನೇ ನಂಬಿ ಹಲವಾರು ಮಂದಿ ಜೀವನ ನಡೆಸುತ್ತಿದ್ದಾರೆ. ದುರದೃಷ್ಟವಶಾತ್ ಪ್ರವಾಸಿಗರು ತುಂಬಿರುವಾಗಲೇ ಏನಾದರೂ ಅಪಾಯ ಸಂಭವಿಸಿದರೆ ದೊಡ್ಡ ಸಾವು- ನೋವು ಉಂಟಾಗಬಹುದು, ಹೀಗಾಗಿ ಸರ್ಕಾರ ಆದಷ್ಟು ಬೇಗ ಎಚ್ಚೆತ್ತುಕೊಳ್ಳಬೇಕಿದೆ.