ಉಡುಪಿ ಕಾಡಂಚಿನಲ್ಲಿ ಮತ್ತೆ 6 ಮೃತ ಮಂಗಗಳ ಶವ ಪತ್ತೆ: ಜನರಿಗೆ ಎಚ್ಚರಿಕೆ
ಉಡುಪಿ, ಜನವರಿ 20:ಮಲೆನಾಡನ್ನು ಅತಿಯಾಗಿ ಕಾಡುತ್ತಿರುವ ಮಂಗನ ಕಾಯಿಲೆ ಉಡುಪಿ ಜಿಲ್ಲೆಯಲ್ಲೂ ಆತಂಕ ಸೃಷ್ಟಿಸಿದೆ. ಶಿವಮೊಗ್ಗ ಜಿಲ್ಲೆಯಲ್ಲಿ ಆವರಿಸಿರುವ ಮಂಗನ ಕಾಯಿಲೆ ಉಡುಪಿ ಜಿಲ್ಲೆಗೂ ವ್ಯಾಪಿಸುತ್ತಿದೆ.
ಇದುವರೆಗೆ ಉಡುಪಿ ಜಿಲ್ಲೆಯಲ್ಲಿ ಮನುಷ್ಯರಿಗೆ ಈ ರೋಗ ಹರಡಿರುವ ಪ್ರಕರಣಗಳು ಬಯಲಿಗೆ ಬಂದಿಲ್ಲ. ಆದರೆ ಪಶ್ಚಿಮ ಘಟ್ಟದ ತಪ್ಪಲು ಪ್ರದೇಶದಲ್ಲಿರುವ ಊರುಗಳಲ್ಲಿ ಮಂಗನ ಕಾಯಿಲೆಯಿಂದ ಮಂಗಗಳು ಸಾವನ್ನಪ್ಪುತ್ತಿರುವುದು ದೃಢಪಟ್ಟಿರುವುದಕ್ಕೆ ಆತಂಕವುಂಟಾಗಿದೆ.
ಉಡುಪಿ ಜಿಲ್ಲೆಯಲ್ಲಿ ಹೆಚ್ಚಿದ ಮಂಗಗಳ ಸಾವಿನ ಸಂಖ್ಯೆ: ಆತಂಕ
ಈ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಮಂಗನ ಕಾಯಿಲೆ ಬಗ್ಗೆ ಕಟ್ಟೆಚ್ಚರ ಹಾಕಲಾಗಿದೆ. ಕಾಡಿನಂಚಿನಲ್ಲಿರುವವರು ಕಾಡಿಗೆ ತೆರಳದಂತೆ ಜಾನುವಾರುಗಳನ್ನು ಕಾಡಿಗೆ ಬಿಡದಂತೆ ಇಲಾಖೆ ಮನವಿ ಮಾಡಿದೆ.
ಉಡುಪಿ ಜಿಲ್ಲೆಯ ವ್ಯಾಪ್ತಿಯಲ್ಲಿ ಶನಿವಾರ ಒಟ್ಟು 6 ಮಂಗಗಳ ಮೃತ ದೇಹ ಪತ್ತೆಯಾಗಿದೆ. ಕುಂದಾಪುರ ತಾಲೂಕಿನ ಬೆಳ್ವೆ, ಮಡಾಮಕ್ಕಿ, ವಡ್ಸೆ , ನಾಡ , ಸಿದ್ದಾಪುರ ಮತ್ತು ಬ್ರಹ್ಮಾವರ ತಾಲೂಕಿನ ಕೊಕ್ಕರ್ಣೆ ಸಮೀಪದ ಕೆಂದೂರು , ಕಾರ್ಕಳ ತಾಲೂಕಿನ ಕಡ್ತಲ ದೊಡೇರಂಗಡಿಯಲ್ಲಿ ಮಂಗಗಳ ಮೃತ ದೇಹಗಳು ಪತ್ತೆಯಾಗಿವೆ.
ಈ ಪೈಕಿ ಮಡಮಕ್ಕಿ ಮತ್ತು ಕಡ್ತಲದ ಮೃತ ಮಂಗಗಳ ಮಾದರಿಗಳನ್ನು ಪರೀಕ್ಷೆಗೆ ಕಳುಹಿಸಿಕೊಡಲಾಗಿದೆ. ಸಿದ್ದಾಪುರ ಹಾಗೂ ವಂಡ್ಸೆ ಪ್ರದೇಶದಲ್ಲಿ ಈಗಾಗಲೇ ಸಿಕ್ಕಿದ ಮಂಗಗಳಿಗೆ ಕಾಯಿಲೆ ತಗುಲಿರುವುದು ಪರೀಕ್ಷೆಯಿಂದ ದೃಢಪಟ್ಟಿದೆ.
ಮಂಗನಕಾಯಿಲೆಗೆ ಕಾರಣಗಳು, ಮುಂಜಾಗ್ರತಾ ಕ್ರಮಗಳು
ಮೊದಲು ಮರಣಹೊಂದಿದ ಮಂಗನ ಮೃತದೇಹ ಪತ್ತೆಯಾದ ದಿನದಿಂದಲೇ ಆರೋಗ್ಯ ಇಲಾಖೆ ತುರ್ತು ಕ್ರಮ ಕೈಗೊಂಡು ಬೇಕಾದ ಎಲ್ಲಾ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಂಡಿದೆ.
ಶಿವಮೊಗ್ಗ : ಮಂಗನಕಾಯಿಲೆಗೆ 18 ವರ್ಷದ ಯುವತಿ ಬಲಿ
ಕುಂದಾಪುರ ತಾಲೂಕಿನಲ್ಲಿರುವ 200ಕ್ಕೂ ಅಧಿಕ ಆಶಾ ಕಾರ್ಯಕರ್ತೆಯರ ಮೂಲಕ ಪಶ್ಚಿಮ ಘಟ್ಟದ ತಪ್ಪಲು ಹಾಗೂ ಸತ್ತ ಮಂಗಗಳು ಪತ್ತೆಯಾಗಿರುವ ಪ್ರದೇಶಗಳಲ್ಲಿನ ಮನೆ ಮನೆಗಳಿಗೆ ತೆರಳಿ ಜನರಿಗೆ ಜಾಗೃತಿ ಮೂಡಿಸಿ, ಕೈಗೊಳ್ಳಬೇಕಾದ ಎಚ್ಚರಿಕೆ ಕ್ರಮಗಳನ್ನು ತಿಳಿಸುತ್ತಿದ್ದಾರೆ.