ಮರಳು ಲೂಟಿ ಸಂಬಂಧ ಉಡುಪಿ ಡಿಸಿ ಮೇಲೆ ದೂರು; ಡಿಸಿ ಪ್ರತಿಕ್ರಿಯೆ
ಉಡುಪಿ, ಜೂನ್ 26: ಸ್ವರ್ಣಾ ನದಿಯ ಮರಳು ಲೂಟಿಗೆ ಸಂಬಂಧಿಸಿದಂತೆ ಉಡುಪಿಯ ಯುವ ಕಾಂಗ್ರೆಸ್, ಕರ್ತವ್ಯ ಲೋಪ ಮಾಡಿದ್ದಾರೆ ಎಂದು ಆರೋಪಿಸಿ ಉಡುಪಿ ಜಿಲ್ಲಾಧಿಕಾರಿ ವಿರುದ್ಧವೇ ದೂರನ್ನು ದಾಖಲಿಸಿದ್ದು, ಅದಕ್ಕೆ ಜಿಲ್ಲಾಧಿಕಾರಿಗಳು ಪ್ರತಿಕ್ರಿಯೆ ನೀಡಿದ್ದಾರೆ.
Recommended Video
"ಜಿಲ್ಲಾಧಿಕಾರಿ ಹೋಗಿ ಮರಳು ಕಾಯಲು ಆಗುವುದಿಲ್ಲ. ಯಾರ ಜವಾಬ್ದಾರಿ ಏನು ಎಂಬುದನ್ನು ಸ್ಪಷ್ಟವಾಗಿ ನಿರ್ದೇಶನ ನೀಡಿದ್ದೇನೆ. ಕರ್ತವ್ಯ ಲೋಪ ಮಾಡಿದವರ ವಿರುದ್ಧ ಕ್ರಮ ಜರುಗಿಸಿದ್ದೇವೆ. ಯುವ ಕಾಂಗ್ರೆಸ್ ಆರೋಪ ಸಮಾಜಕ್ಕೆ ತಪ್ಪು ಸಂದೇಶ ರವಾನಿಸುತ್ತದೆ" ಎಂದು ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ.
ಉಡುಪಿಯ ಸ್ವರ್ಣಾ ಅಕ್ರಮ ಮರಳು ದಾಸ್ತಾನು ಕಳ್ಳತನ: ದೂರು ದಾಖಲು
ಜಿಲ್ಲಾಡಳಿತ ಯಾವುದೇ ಕಾರಣಕ್ಕೂ ಅಕ್ರಮ ಗಣಿಗಾರಿಕೆಗೆ ಅವಕಾಶ ಕೊಡುವುದಿಲ್ಲ. ಈಗಾಗಲೇ ತಪ್ಪಿತಸ್ಥರ ವಿರುದ್ಧ ದೂರು ದಾಖಲಿಸಿದ್ದೇವೆ. ಐದು ವಾಹನಗಳನ್ನು ಸೀಝ್ ಮಾಡಿ, ಅಕ್ರಮ ಮರಳನ್ನೂ ವಶಕ್ಕೆ ಪಡೆದಿದ್ದೇವೆ. ನಿರ್ಲಕ್ಷ್ಯ ತೋರಿದ್ದಕ್ಕಾಗಿ ಗಣಿ, ಭೂವಿಜ್ಞಾನ ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸಲು ಲೋಕಾಯುಕ್ತಕ್ಕೆ ಶಿಫಾರಸು ಮಾಡಿದ್ದೇವೆ. ನಿನ್ನೆ ಮತ್ತೆ ಮರಳು ದಾಸ್ತಾನು ಕಳ್ಳತನ ಮಾಡಲಾಗಿದ್ದು ದೂರು ದಾಖಲಿಸಿಕೊಂಡಿದ್ದೇವೆ ಎಂದು ತಿಳಿಸಿದ್ದಾರೆ.
ನಿನ್ನೆ ಸ್ವರ್ಣಾ ನದಿಯ ಮರಳು ಲೂಟಿಗೆ ಸಂಬಂಧಿಸಿ ಉಡುಪಿಯ ಯುವ ಕಾಂಗ್ರೆಸ್, ಕರ್ತವ್ಯ ಲೋಪ ಮಾಡಿದ್ದಾರೆ ಎಂದು ಆರೋಪಿಸಿ ಉಡುಪಿ ಜಿಲ್ಲಾಧಿಕಾರಿ ವಿರುದ್ಧವೇ ದೂರನ್ನು ದಾಖಲಿಸಿತ್ತು. ಪತ್ರಿಕಾಗೋಷ್ಠಿ ನಡೆಸಿ ಲೋಕಾಯುಕ್ತ ಶೀಘ್ರ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿತ್ತು.