ಆದಿತ್ಯ ರಾವ್ ಲಾಕರ್ನಿಂದ 150 ಗ್ರಾಂ ಸೈನೈಡ್ ವಶ
ಉಡುಪಿ, ಜನವರಿ 26: ಮಂಗಳೂರು ವಿಮಾನ ನಿಲ್ದಾಣಕ್ಕೆ ಬಾಂಬ್ ಇಟ್ಟ ಪ್ರಕರಣದ ಆರೋಪಿ ಆದಿತ್ಯ ರಾವ್ ನ ಬ್ಯಾಂಕ್ ಲಾಕರ್ನಿಂದ ಹಲವು ಅನುಮಾನಾಸ್ಪದ ವಸ್ತುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ನಗರದ ಕರ್ನಾಟಕ ಬ್ಯಾಂಕ್ನಲ್ಲಿ ಕೆಲವು ವರ್ಷಗಳ ಹಿಂದೆ ಬ್ಯಾಂಕ್ ಲಾಕರ್ನಲ್ಲಿ ಕೆಲವು ವಸ್ತುಗಳನ್ನು ಆದಿತ್ಯ ರಾವ್ ಇರಿಸಿದ್ದ. ಅದನ್ನು ನಿನ್ನೆ ಪೊಲೀಸರು ವಶಪಡಿಸಿಕೊಂಡಿದ್ದಾರೆ. ಅದರಲ್ಲಿ ಪುಡಿ ದೊರೆತಿದ್ದು ಅದನ್ನು ಸೈನೈಡ್ ಎಂದು ಶಂಕಿಸಲಾಗಿದೆ.
ಶನಿವಾರ ಆರೋಪಿ ಆದಿತ್ಯ ರಾವ್ ಅನ್ನು ಹಲವು ಸ್ಥಳಗಳಿಗೆ ಕರೆದೊಯ್ದು ಸ್ಥಳ ಮಹಜರು ಮಾಡಿದರು. ಆಗ ಉಡುಪಿಯ ಕುಂಜಿಬೆಟ್ಟು ಶಾಖೆ ಕರ್ನಾಟಕ ಬ್ಯಾಂಕ್ಗೂ ಕರೆದುಕೊಂಡು ಬರಲಾಗಿತ್ತು.
ಆದಿತ್ಯ ರಾವ್ ನ ಲಾಕರ್ನಿಂದ 150 ಪೌಡರ್ ದೊರೆತಿದೆ. ಅದು ಸೈನೈಡ್ ಎಂದು ಸ್ವತಃ ಆರೋಪಿ ಆದಿತ್ಯ ರಾವ್ ಪೊಲೀಸರಿಗೆ ಹೇಳಿದ್ದಾನೆ. ಆದರೆ ಅದನ್ನು ಖಚಿತಪಡಿಸಿಕೊಳ್ಳಬೇಕಿದೆ ಎಂದು ಪೊಲೀಸರು ಹೇಳಿದ್ದಾರೆ.
ಮಹಜರಿನ ವೇಳೆ ವಿಮಾನ ನಿಲ್ದಾಣ, ಆತ ಕೆಲಸ ಮಾಡುತ್ತಿದ್ದ ಬಾರ್, ವಿಮಾನ ನಿಲ್ದಾಣಕ್ಕೆ ದೂರವಾಣಿ ಕರೆ ಮಾಡಿದ ಸ್ಥಳ ಇನ್ನೂ ಹಲವು ಸ್ಥಳಗಳಿಗೆ ಪೊಲೀಸರು ಆದಿತ್ಯ ರಾವ್ ಅನ್ನು ಕರೆದುಕೊಂಡು ಹೋಗಿದ್ದರು.