ಕಾಮನ್ ವೆಲ್ತ್ ಗೇಮ್ಸ್ : ಕಂಚು ಗೆದ್ದಉಡುಪಿಯ ಗುರುರಾಜ ಮನೆಯಲ್ಲಿ ಸಂಭ್ರಮ
ಉಡುಪಿ, ಜುಲೈ 31: ಬರ್ಮಿಂಗ್ ಹ್ಯಾಮ್ ನಲ್ಲಿ ನಡೆದ ಕಾಮನ್ ವೆಲ್ತ್ ಗೇಮ್ಸ್ನ ವೇಯ್ಟ್ ಲಿಪ್ಟಿಂಗ್ ವಿಭಾಗದ 61 ಕೆಜಿ ವಿಭಾಗದಲ್ಲಿ ಕನ್ನಡಿಗ ಉಡುಪಿ ಮೂಲದ ಗುರುರಾಜ್ ಪೂಜಾರಿ ಕಂಚಿನ ಪದಕ ಗೆಲ್ಲುವ ಭಾರತದ ತ್ರಿವರ್ಣ ಧ್ವಜ ಹಾರಿಸುವುದರ ಜೊತೆಗೆ ರಾಜ್ಯಕ್ಕೂ ಹೆಮ್ಮೆ ತಂದಿದ್ದಾರೆ.
ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ವಂಡ್ಸೆ ಗ್ರಾಮದ ಮಹಾಬಲ ಹಾಗೂ ಪದ್ದು ಪೂಜಾರಿ ದಂಪತಿ ಮಗನಾಗಿರುವ ಗುರುರಾಜ್ ಪೂಜಾರಿ ಬರ್ಮಿಂಗ್ ಹ್ಯಾಮ್ನಲ್ಲಿ ಪದಕ ಖಚಿತಪಡಿಸಿಕೊಳ್ಳುತ್ತಿದ್ದಂತೆ ಕುಟುಂಬಸ್ಥರು ಗುರುರಾಜ್ ಗೆಲುವನ್ನು ಪಟಾಕಿ ಸಿಡಿಸಿ ಸಿಹಿ ಹಂಚುವ ಮೂಲಕ ಕುಣಿದು ಸಂಭ್ರಮಿಸಿದ್ದಾರೆ.
ಕಾಮನ್ವೆಲ್ತ್ ವೇಟ್ಲಿಫ್ಟಿಂಗ್ನಲ್ಲಿ ಕಂಚು ಗೆದ್ದ ಹೆಮ್ಮೆಯ ಕನ್ನಡಿಗ ಗುರುರಾಜ ಪೂಜಾರಿ
ಗುರುರಾಜ್ ಪೂಜಾರಿ ಅವರು ಪುರುಷರ 61 ಕೆ.ಜಿ ವಿಭಾಗದಲ್ಲಿ 269 ಕೆಜಿ ಭಾರ ಎತ್ತುವ ಮೂಲಕ ಕಂಚಿನ ಪದಕ ಜಯಿಸಿ ಸಾಧನೆ ಮಾಡಿದ್ದಾರೆ. ಈ ವಿಭಾಗದಲ್ಲಿ ಮಲೇಷ್ಯಾದ ಕ್ರೀಡಾಪಟು ಚಿನ್ನ ಹಾಗೂ ಪಪುವಾ ನ್ಯೂಗಿನಿಯಾ ಕ್ರೀಡಾಪಟು ಬೆಳ್ಳಿ ಪದಕಗಳನ್ನು ತಮ್ಮದಾಗಿಸಿಕೊಂಡರು.
ಟ್ರಕ್ ಚಾಲಕನ ಮಗನಾಗಿರುವ ಗುರುರಾಜ ಬಡತನದಲ್ಲೇ ಬೆಳೆದರೂ, ಸಾಧನೆ ಮಾಡಬೇಕೆಂಬ ಛಲ ಹಾಗೂ ಕ್ರೀಡೆ ಮೇಲಿನ ಆಸಕ್ತಿ ಅವರನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ವಿಜೃಂಭಿಸುವಂತೆ ಮಾಡಿದೆ. ವಿಶೇಷವೆಂದ್ರೆ ವೇಟ್ ಲಿಫ್ಟರ್ ಆಗಿರುವ ಗುರುರಾಜ ಮೊದಲು ಕುಸ್ತಿಪಟು ಆಗಿದ್ದರು.
2008ರ ಬೀಜಿಂಗ್ ಒಲಿಂಪಿಕ್ಸ್ನಲ್ಲಿ ಸುಶೀಲ್ ಕುಮಾರ್ ಒಲಂಪಿಕ್ ಪದಕ ಗೆದ್ದಿದ್ದನ್ನು ನೋಡಿ ಪ್ರಭಾವಿತರಾಗಿದ್ದ ಗುರುರಾಜ್ ಕುಸ್ತಿಯಲ್ಲಿ ಮೊದಲು ಅಭ್ಯಾಸ ಪ್ರಾರಂಭಿಸಿದ್ದರು. ಆದರೆ ಶಾಲೆಯ ಶಿಕ್ಷಕರ ಸಲಹೆಯ ನಂತರ ವೇಟ್ಲಿಫ್ಟಿಂಗ್ ಕಡೆಗೆ ಜಾರಿದ್ದರು. ಇದೀಗ ಕಾಮನ್ವೆಲ್ತ್ ಗೇಮ್ಸ್ನಲ್ಲಿ ತಮ್ಮ 2ನೇ ಪದಕ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.
ಪೋಷಕರೊಂದಿಗೆ ಸಂಭ್ರಮಿಸಿದ ಗುರುರಾಜ್
ಆಂಗ್ಲರ ನೆಲದಲ್ಲಿ ಕಂಚಿನ ಪದಕ ಗೆದ್ದ ಖುಷಿಯನ್ನ ಗುರುರಾಜ್ ವಾಟ್ಸಪ್ನಲ್ಲಿ ವಿಡಿಯೋ ಕರೆ ಮಾಡಿ ತಮ್ಮ ಪೋಷಕರೊಂದಿಗೆ ಹಂಚಿಕೊಂಡಿದ್ದಾರೆ. ಪದಕ ಹಂಚುವ ಕ್ಷಣವನ್ನು ಟಿವಿಯಲ್ಲಿ ನೋಡಿ ಎಂದು ತಮ್ಮವರಿಗೆ ಗುರುರಾಜ್ ಹೇಳಿದ್ದರು.
ಅನಾರೋಗ್ಯದ ನಡುವೆಯೂ ಗುರುರಾಜ್ ಸ್ಪರ್ಧೆಯಲ್ಲಿ ಭಾಗವಹಿಸಿ ಪದಕ ಗೆದ್ದಿದ್ದಾರೆ. ಸ್ಪರ್ಧೆಗೂ ಮುನ್ನ ಜ್ವರ, ಮೈ, ಕೈ ನೋವಿನಿಂದ ಬಳಲಿದ್ದರು. ಸಂಪೂರ್ಣ ಚೇತರಿಸಿಕೊಳ್ಳದಿದ್ದರೂ ಸ್ಪರ್ಧೆಯಲ್ಲಿ ಭಾಗವಹಿಸಿ ದೇಶಕ್ಕಾಗಿ ಪದಕ ತಂದುಕೊಟ್ಟಿದ್ದಾರೆ. ಆಗಸ್ಟ್ ಎರಡನೇ ವಾರದಲ್ಲಿ ಗುರುರಾಜ್ ತವರಿಗೆ ಆಗಮಿಸಲಿದ್ದಾರೆ. ಸ್ಪರ್ಧೆಗೆ ತಯಾರಿಯಲ್ಲಿದ್ದಿದ್ದರಿಂದ ಕಳೆದ 10 ತಿಂಗಳಲ್ಲಿ ಇದೇ ಮೊದಲ ಬಾರಿಗೆ ತವರಿಗೆ ಮರಳುತ್ತಿದ್ದಾರೆ.
ಕಾಮನ್ವೆಲ್ತ್: ಚಿನ್ನ ಗೆದ್ದ ಮೀರಾಬಾಯಿ ಚಾನು, 4 ಪದಕ ಗೆದ್ದ ಭಾರತ
ಸರಕಾರ, ಕ್ರೀಡಾ ಇಲಾಖೆಗೆ ಧನ್ಯವಾದ
ಕಂಚಿನ ಪದಕ ಗೆದ್ದಿರುವುದು ಬಹಳಷ್ಟು ಖುಷಿ ಕೊಟ್ಟಿದೆ, ಎಲ್ಲಾ ಪ್ರಯತ್ನದ ಮೂಲಕ ಬೆಸ್ಟ್ ಪರ್ಫಾಮೆನ್ಸ್ ನೀಡಿದರ ಫಲವಾಗಿ ಗೆಲುವು ನನ್ನದಾಗಿದೆ. ನನಗೆ ಸೂಕ್ತ ಬೆಂಬಲ ನೀಡಿ ಪ್ರೋತ್ಸಾಹಿಸಿದ ಭಾರತ ಸರಕಾರದ ಪ್ರಧಾನಿ ಮೋದಿ ಹಾಗೂ ನಮ್ಮ ರಾಜ್ಯ ಸರ್ಕಾರದ ಮುಖ್ಯಮಂತ್ರಿ ಹಾಗೂ ಕ್ರೀಡಾ ಇಲಾಖೆಗಳಿಗೆ ಧನ್ಯವಾದಗಳನ್ನು ಅರ್ಪಿಸುತ್ತೇನೆ. ಈ ನನ್ನ ಸಾಧನೆಯ ಹಿಂದೆ ಕೋಚ್ ಹಾಗೂ ಕುಟುಂಬದವರ ಪಾತ್ರ ಮಹತ್ವವಾಗಿದೆ ಎಂದು ಗುರುರಾಜ್ ಪೂಜಾರಿ ಧನ್ಯವಾದ ಅರ್ಪಿಸಿದ್ದಾರೆ.
ಮಗನ ಪರಿಶ್ರಮ ನೆನೆದ ಪೋಷಕರು
ಮಗನ ಸಂಭ್ರಮದ ಬಗ್ಗೆ ಮಾತನಾಡಿದ ಪೋಷಕರಾದ ತಂದೆ ಮಹಾಬಲ ಹಾಗೂ ತಾಯಿ ಪದ್ದು ಪೂಜಾರಿ, ಗುರು ಕಳೆದ ಬಾರಿ ಬೆಳ್ಳಿ ಪದಕ ಗೆದ್ದಿದ, ಈ ಬಾರಿ ಕಂಚು ಗೆದ್ದಿದ್ದಾನೆ. ಕ್ರೀಡೆಯಲ್ಲಿ ಅವರಿಗೆ ಬಹಳಷ್ಟು ಆಸಕ್ತಿ ಹೊಂದಿದ್ದಾನೆ. ಅದೇ ರೀತಿ ಬಹಳಷ್ಟು ಕಷ್ಟ ಪಟ್ಟು ಹಂತ ಹಂತವಾಗಿ ಎಲ್ಲಾ ಸ್ಪರ್ಧೆಗಳಲ್ಲಿ ಈ ಸ್ಥಾನಕ್ಕೆ ಬಂದಿದ್ದಾನೆ. ಅನಾರೋಗ್ಯ ಇದ್ದರೂ ಛಲ ಬಿಡದೆ ಪದಕ ಗೆದ್ದಿರುವುದು ನಮಗೆ ಮತ್ತು ನಮ್ಮ ಊರಿನ ಜನರಿಗೂ ಬಹಳಷ್ಟು ಖುಷಿ ತಂದಿದೆ ಎಂದು ಸಂತಸ ಹಂಚಿಕೊಂಡಿದ್ದಾರೆ.
ಮತ್ತೊಂದು ಚಿನ್ನ ಗೆದ್ದ ಚಾನು
2018 ರಲ್ಲಿ ನಡೆದ ಕಾಮನ್ ವೆಲ್ತ್ ಗೇಮ್ಸ್ ನಲ್ಲಿ 54ಕೆಜಿ ವಿಭಾಗದ ವೇಟ್ ಲಿಫ್ಟಿಂಗ್ನಲ್ಲಿ ಸ್ಪರ್ಧಿಸಿದ್ದ ಗುರುರಾಜ್ ಬೆಳ್ಳಿ ಪದಕ ಗೆದ್ದಿದ್ದರು. ಇನ್ನು ಭಾರತಕ್ಕೆ ವೇಟ್ ಲಿಫ್ಟಿಂಗ್ನಲ್ಲಿ ದಕ್ಕಿದ 3ನೇ ಪದಕ ಇದಾಗಿದೆ. ಟೋಕಿಯೋ ಒಲಿಂಪಿಕ್ಸ್ನಲ್ಲಿ ಬೆಳ್ಳಿ ಗೆದ್ದಿ ಮೀರಾಬಾಯಿ ಚಾನು ಕಾಮನ್ವೆಲ್ತ್ ಗೇಮ್ಸ್ನಲ್ಲಿ ಚಿನ್ನದ ಪಕದಕ್ಕೆ ಮುತ್ತಿಟ್ಟರು. 49 ಕೆಜಿ ಸ್ನಾಚ್ ಸ್ಪರ್ಧೆಯಲ್ಲಿ ಚಿನ್ನದ ಪದಕ ತಮ್ಮದಾಗಿಸಿಕೊಂಡರು. 55 ಕೆಜಿ ವಿಭಾಗದಲ್ಲಿ ಸಂಕೇತ್ ಸರ್ಗಾರ್ ಬೆಳ್ಳಿ ಪದಕ ತಮ್ಮದಾಗಿಸಿಕೊಂಡರು. ಮೀರಬಾಯಿ 2014 ಮತ್ತು 2018ರ ಗೋಲ್ಡ್ಕಾಸ್ಟ್ ಕಾಮನ್ವೆಲ್ತ್ ಗೇಮ್ಸ್ನಲ್ಲೂ ಚಿನ್ನದ ಪದಕ ಪಡೆದಿದ್ದರು.
ಕಂಚಿನ ಪದಕ ಜಯಿಸಿದ್ದೇನೆ, ಸಂಪೂರ್ಣ ಪರಿಶ್ರಮದ ಫಲವಾಗಿ ಕಂಚಿನ ಪದಕ ಬಂದಿದೆ. ನನಗೆ ಬೆಂಬಲ ನೀಡಿದ ಪ್ರಧಾನಿ ಮೋದಿ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಕ್ರೀಡಾ ಇಲಾಖೆ, ಕೋಚ್ ಮತ್ತು ಕುಟುಂಬಕ್ಕೆ ಧನ್ಯವಾದ ಅರ್ಪಿಸುತ್ತೇನೆ ಎಂದು ತಿಳಿಸಿದ್ದಾರೆ.