ಕಾಪು ಹುಡುಗನ ಫೇಮಸ್ 'ಕಾಗೆ ಬಿಸ್ನೆಸ್'
ಉಡುಪಿ, ಜುಲೈ 12: ಅಂದು ಸ್ಮಶಾನದಲ್ಲಿ ಯಾರದ್ದೋ ಉತ್ತರಕ್ರಿಯೆ ನಡೆಯುತ್ತಿತ್ತು. ಸತ್ತ ಆ ಹಿರಿಯರಿಗೆ ಎಡೆ ಇಟ್ಟು ಆಕಾಶವನ್ನೇ ದಿಟ್ಟಿಸುತ್ತಿದ್ದರು ಆ ಮನೆಮಂದಿ. ಎಷ್ಟು ಹೊತ್ತಾದರೂ ಅವರು ಕದಲಲೇ ಇಲ್ಲ. ಅಲ್ಲೇ ಆತಂಕದಲ್ಲೇ ನಿಂತಿದ್ದ ಅವರು ಗುಸುಗುಸು ಮಾತಾಡಿಕೊಳ್ಳಲು ಆರಂಭಿಸಿದ್ದರು. ಪಕ್ಕದಲ್ಲೇ ಇದ್ದ ವ್ಯಕ್ತಿಯೊಬ್ಬರು ಮತ್ತೊಬ್ಬರ ಕಿವಿಯಲ್ಲಿ ಏನನ್ನೊ ಉಸುರಿ ಆ ಆತಂಕ ನೀಗಿಸುವ ಉಪಾಯದಲ್ಲಿದ್ದರು. ಏನೋ ಹೊಳೆದವರಂತೆ ಮೊಬೈಲ್ ಕೈಗೆತ್ತಿಕೊಂಡು ಮಾತಾಡಿದರು.
ನೋಡನೋಡುತ್ತಿದ್ದಂತೆ ಕಾಗೆಯೊಂದಿಗೆ ಪ್ರತ್ಯಕ್ಷನಾದ ಒಬ್ಬ ವ್ಯಕ್ತಿ. ಅಬ್ಬ! ಮನೆಯವರ ಮುಖದಲ್ಲಿ ಏನೋ ನಿರಾಳತೆ.
ಸಿದ್ದರಾಮಯ್ಯನವರನ್ನು ಬೆಂಬಿಡದ ಕಾಗೆ ಕಾಟ!
ಹೀಗೆ ಉತ್ತರಕ್ರಿಯೆಯಲ್ಲಿ ಕಾಗೆಯನ್ನು ನೀಡಿ ಕಾಗೆ ಬಿಸ್ನೆಸ್ ಗೆ ಪ್ರಸಿದ್ಧಿಯಾಗಿರುವ ವ್ಯಕ್ತಿ ಹೆಸರು ಪ್ರಶಾಂತ್ ಪೂಜಾರಿ. ಕರಾವಳಿಯ ಈ ಯುವಕ ಈಗ ಕಾಗೆ ಬಿಸ್ನೆಸ್ ಗೆಂದೇ ಮಾತಾಗಿರುವವನು.
ಇತ್ತೀಚೆಗೆ ಕಾಗೆಗಳ ಸಂತತಿ ಕಡಿಮೆಯಾಗಿದೆ. ಎಲ್ಲೆಂದರಲ್ಲಿ ಕಾಣುತ್ತಿದ್ದ ಕಾಗೆಗಳು ಈಗ ಮಾಯವಾಗಿವೆ. ಬೆಳ್ಳಂಬೆಳಿಗ್ಗೆ ಕಾಗೆಗಳ ಧ್ವನಿಯೂ ಕೇಳದಂತಾಗಿದೆ. ಇದರ ಬಗ್ಗೆ ತಲೆಕೆಡಿಸಕೊಳ್ಳುವವರೂ ಕಡಿಮೆ. ಆದರೆ ಯಾರಿಗೂ ಬೇಡವಾದ ಕಾಗೆ ಎಲ್ಲರಿಗೂ ನೆನಪಿಗೆ ಬರುವುದು ವ್ಯಕ್ತಿ ಸಾವಾದಾಗ ಮಾತ್ರ.
ಹಿಂದೂ ಸಂಪ್ರದಾಯದ ಪ್ರಕಾರ ಮನುಷ್ಯ ಸತ್ತು ಹನ್ನೊಂದನೇ ಅಥವಾ ಹದಿಮೂರನೇ ದಿನ ಉತ್ತರಕ್ರಿಯೆ ಮಾಡಲಾಗುತ್ತದೆ. ಈ ಸಮಯದಲ್ಲಿ ಸತ್ತ ವ್ಯಕ್ತಿಗೆ ಇಟ್ಟ ಎಡೆಯನ್ನು ಮೊದಲು ಕಾಗೆ ಮುಟ್ಟಬೇಕು. ಹಾಗೆ ಕಾಗೆ ತಿನ್ನದೇ ಬೇರೆಯವರು ತಿಥಿ ಊಟ ಮಾಡುವಂತಿಲ್ಲ. ಸತ್ತವರ ಆತ್ಮ ಕಾಗೆ ರೂಪದಲ್ಲಿ ಬಂದು ಊಟ ಸ್ವೀಕರಿಸುತ್ತಾರೆ ಎಂಬುದು ನಂಬಿಕೆ. ಹಾಗೆ ಕಾಗೆ ಬಂದು ತಿಂದರೆ ಸತ್ತವರಿಗೆ ತೃಪಿಯಾಗಿದೆ ಎಂದರ್ಥ.
ಕಾಗೆ ಕೂರೋದಕ್ಕೂ, ಕಾರು ಬದಲಾಯಿಸೋದಕ್ಕೂ ಸರಿ ಹೋಯ್ತು!
ಈ ಸಂಪ್ರದಾಯ, ನಂಬಿಕೆಯೇ ಉಡುಪಿ ಜಿಲ್ಲೆಯ ಕಾಪು ನಿವಾಸಿ ಪ್ರಶಾಂತ್ ಪೂಜಾರಿಗೆ ಈಗ ಬಂಡವಾಳವಾಗಿದೆ. ಕಾಗೆಯನ್ನೇ ತನ್ನ ನೂತನ ಬಿಸ್ನೆಸ್ ಗೆ ಬಳಸಿಕೊಂಡಿದ್ದಾನೆ ಈತ. ವೈಕುಂಠ ಸಮಾರಾಧನೆಯ ದಿನ ಕಾಗೆಯನ್ನು ಎಲ್ಲಿ ಅವಶ್ಯಕತೆಯಿದೆಯೋ ಅಲ್ಲಿ ನೀಡುವುದೇ ಕಾಯಕ. ಈ ವ್ಯವಹಾರಕ್ಕೆ ಈಗ ಗ್ರಾಹಕರೂ ಹೆಚ್ಚಿದ್ದಾರಂತೆ. ಡಿಮ್ಯಾಂಡ್ ಗೇನು ಕೊರತೆಯಿಲ್ಲ ಎನ್ನುತ್ತಾರೆ ಪ್ರಶಾಂತ್.
ಉತ್ತರ ಕ್ರಿಯೆ ದಿನ ಇವರಿಗೆ ಕರೆ ಮಾಡಿ ಬುಕ್ ಮಾಡಿದರೆ ಸಾಕು, ತಾವು ಸಾಕಿದ ಕಾಗೆ ತಂದು ಸತ್ತವರ ಉತ್ತರಕ್ರಿಯೆ ಊಟ ಮಾಡಿಸುವುದು ಇವರ ಕೆಲಸ.
ಇತ್ತೀಚೆಗೆ ಹೆಬ್ರಿ ಸಮೀಪ ಅಪಘಾತದಲ್ಲಿ ಮೃತಪಟ್ಟ ಯುವಕನೊಬ್ಬನ ಉತ್ತರಕ್ರಿಯೆಗೆ ಸಂಪ್ರದಾಯದಂತೆ ಎಡೆ ಇಟ್ಟಿದ್ದರು. ಅಲ್ಲಿ ಕಾಗೆ ಬರಲೇ ಇಲ್ಲ. ನಂತರ ಅಲ್ಲಿ ಪ್ರಶಾಂತ್ ಪೂಜಾರಿ ಕಾಗೆಯೊಂದಿಗೆ ಹೋಗಿದ್ದರು. ಕಾಗೆಗೆ ಎಡೆ ಊಟ ಮಾಡಿಸಿದ್ದನ್ನು ನೋಡಿ ಜನರು ಅಚ್ಚರಿ ಪಟ್ಟಿದ್ದರು. ಅಲ್ಲಿಂದ ಪ್ರಶಾಂತ್ ಬಿಸ್ನೆಸ್ ಮತ್ತಷ್ಟು ಚುರುಕಾಯಿತು.
ಶನೈಶ್ಚರನ ವಾಹನ ಕಾಗೆಗಳ ಸಂತತಿ ಕ್ಷೀಣ, ಸಿಟ್ಟಾಗುತ್ತಾನಾ ರವಿ ಪುತ್ರ!
ತಿಥಿ ನಡೆಸುವ ಕುಟುಂಬದವರು ದಕ್ಷಿಣೆ ನೀಡುವುದರೊಂದಿಗೆ ಕ್ರಿಯೆ ನಡೆಯುವ ಸ್ಥಳಕ್ಕೆ ವಾಹನ ವ್ಯವಸ್ಥೆ ಅಥವಾ ವಾಹನ ಬಾಡಿಗೆಯನ್ನು ನೀಡಬೇಕಿರುವುದು ಕಡ್ಡಾಐ.
ಪ್ರಶಾಂತ್ ಸಾಕಿರುವ ಕಾಗೆ ಹೆಸರು 'ರಾಜ'. ಹೀಗೆ ಕಾಗೆ ಸಾಕಿದ್ದ ಹಿಂದೆ ಒಂದು ಕಥೆಯೂ ಇದೆ. ತಮ್ಮ ಮನೆ ಸಮೀಪದ ತೆಂಗಿನ ಮರದಿಂದ ಬಿದ್ದಿದ್ದ ಮೂರು ಕಾಗೆ ಮರಿಗಳನ್ನು ಪ್ರಶಾಂತ್ ಮನೆಗೆ ತಂದಿದ್ದರು. ಸ್ವಲ್ಪ ಸಮಯದಲ್ಲೇ ಎರಡು ಮರಿಗಳು ಸತ್ತು ಹೋಗಿವೆ. ಉಳಿದ ಒಂದನ್ನು ಜತನದಿಂದ ಮರಿಯಿಂದಲೇ ಸಾಕಿ ಬೆಳೆಸಿದ್ದಾರೆ.
ಉತ್ತರಕ್ರಿಯೆ ದಿನ ಕಾಗೆಗಾಗಿ ಕಾದು ಸುಸ್ತಾಗುತಿದ್ದ ಜನರನ್ನು ನೋಡಿದ್ದ ಪ್ರಶಾಂತ್ ಗೆ ಹೀಗೆ ಹೊಸದೊಂದು ಆಲೋಚನೆ ಹೊಳೆದಿದ್ದಂತೆ. ತಾನು ಸಾಕಿದ ಕಾಗೆ ಮರಿಯನ್ನು ಉತ್ತರಕ್ರಿಯೆ ಕಾರ್ಯಕ್ರಮಗಳಿಗೆ ಜನ ಬಯಸಿದಲ್ಲಿ ಕೊಡುವುದಾಗಿ ಫೇಸ್ಬುಕ್ ನಲ್ಲಿ ಬರೆದುಕೊಂಡಿದ್ದೇ ಅವರಿಗೆ ಅದೃಷ್ಟ ಖುಲಾಯಿಸಿದೆಯಂತೆ.