ಪೇಜಾವರ ಶ್ರೀಗಳ ಆಪ್ತರೇ ಹೆಗ್ಗಣಗಳು, ಮಠ ಲೂಟಿ ಮಾಡುತ್ತಿದ್ದಾರೆ: ಶಿರೂರು ಶ್ರೀ ವಾಗ್ದಾಳಿ
Recommended Video
ಪೇಜಾವರ ಶ್ರೀಗಳ ಪಂಚಮ ಪರ್ಯಾಯ ಅವಧಿ ಮುಗಿಯುತ್ತಿದ್ದಂತೇ ಉಡುಪಿ ಅಷ್ಟಮಠದಲ್ಲಿ ಭಾರೀ ಬಿರುಕು ಕಾಣಿಸಿಕೊಂಡಿದೆ. ಹಿರಿಯ ಪೇಜಾವರ ಶ್ರೀಗಳ ಆಪ್ತರ ವಿರುದ್ದ ಶಿರೂರು ಮಠಾಧೀಶರು ತೊಡೆತಟ್ಟಿದ್ದಾರೆ.
ಏಕಾದಶಿ ವೃಥಾಚಾರಣೆ, ಕೃಷ್ಣಜನ್ಮಾಷ್ಠಮಿ ಆಚರಣೆ ಮುಂತಾದ ವಿಚಾರಗಳಲ್ಲಿ ಅಷ್ಟಮಠಗಳಲ್ಲಿನ ಬಿರುಕಿಗೆ ದಶಕಗಳ ಇತಿಹಾಸವಿದೆ. ಪೇಜಾವರ, ಪಲಿಮಾರು, ಪುತ್ತಿಗೆ ಮತ್ತು ಅದಮಾರು ಮಠ ಒಂದು ಕಡೆಯಾದರೆ, ಶಿರೂರು, ಕೃಷ್ಣಾಪುರ, ಕಾಣಿಯೂರು ಮತ್ತು ಪುತ್ತಿಗೆ ಮಠ ಇನ್ನೊಂದು ಕಡೆ.
ಕಣ್ಮನ ಸೆಳೆಯುವ ಉಡುಪಿ ಪರ್ಯಾಯ ಗ್ಯಾಲರಿ
ಆದರೆ, ಇತ್ತೀಚಿನ ದಿನಗಳಲ್ಲಿ ಬಹುತೇಕ ಎಲ್ಲಾ ಮಠಗಳು, ಪೇಜಾವರ ಹಿರಿಯ ಶ್ರೀಗಳ ಮಾರ್ಗದರ್ಶನದಲ್ಲಿ ಕೃಷ್ಣನ ದೈನಂದಿನ ಪೂಜೆ ಮತ್ತು ಇತರ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಜೊತೆಯಾಗಿ ಭಾಗವಹಿಸುತ್ತಿದ್ದರು. ಆದರೆ, ಈಗ ಜಾಗಕ್ಕೆ ಸಂಬಂಧಪಟ್ಟಂತಹ ವ್ಯಾಜ್ಯದಿಂದಾಗಿ, ಶಿರೂರು ಶ್ರೀಗಳೀಗ ಪೇಜಾವರ ಶ್ರೀಗಳ ಆಪ್ತರ ವಿರುದ್ದ ಬೀದಿಗಿಳಿದಿದ್ದಾರೆ.
ಕಳೆದ ಕೆಲವು ವರ್ಷಗಳಿಂದ ಕಣ್ಣೆದುರಿಗೇ ನಡೆಯುತ್ತಿದ್ದ ಅಕ್ರಮ ನೋಡಲಾಗದೇ, ಏನೂ ಮಾಡಲಾಗದೇ ಸುಮ್ಮನಿದ್ದೆ. ಇನ್ನು ಸುಮ್ಮನಿರಲು ಸಾಧ್ಯವಿಲ್ಲ ಎಂದು ಅಕ್ರಮವಾಗಿ ನಿರ್ಮಿಸಿಕೊಂಡಿದ್ದ ಅಂಗಡಿ, ಬಟ್ಟೆಮಳಿಗೆಗಳನ್ನು ಬುಲ್ಡೋಜರ್ ತಂದು ಶಿರೂರು ಶ್ರೀಗಳು ನೆಲಕ್ಕುರುಳಿಸಿದ್ದಾರೆ.
ಈ ಎಲ್ಲಾ ಅಕ್ರಮಗಳಿಗೆ ಪೇಜಾವರ ಶ್ರೀಗಳ ಆಪ್ತರೇ ಕಾರಣ ಎಂದಿರುವ ಶಿರೂರು ಶ್ರೀಗಳು, ಪಾರ್ಕಿಂಗ್ ಮತ್ತು ಅಕ್ರಮವಾಗಿ ಅಂಗಡಿಯವರಿಂದ ಹಣ ಪಡೆದುಕೊಂಡು ಮಠದ ಆದಾಯಕ್ಕೆ ಧಕ್ಕೆ ತಂದಿದ್ದಾರೆಂದು ಆರೋಪಿಸಿದ್ದಾರೆ. ಸದ್ಯ, ಉಡುಪಿ ಹೊರವಲಯದಲ್ಲಿರುವ ಪೇಜಾವರ ಶ್ರೀಗಳು ಭಾನುವಾರ (ಜ 21) ನಗರಕ್ಕೆ ಆಗಮಿಸಲಿದ್ದು, ಶ್ರೀಗಳ ಜೊತೆ ಸವಿಸ್ತಾರವಾಗಿ ಮಾತನಾಡುವುದಾಗಿ ಶಿರೂರು ಶ್ರೀಗಳು ಹೇಳಿದ್ದಾರೆ.
ಏನಿದು ವಿವಾದ, ಮುಂದೆ ಓದಿ..
ಬಿರ್ಲಾ ಛತ್ರದ ಹಿಂದುಗಡೆಯ ಪಾರ್ಕಿಂಗ್ ಜಾಗ ಶಿರೂರು ಮಠಕ್ಕೆ ಸೇರಿದ್ದು
ಉಡುಪಿ ಕೃಷ್ಣಮಠದ ಪಕ್ಕದಲ್ಲಿರುವ ಬಿರ್ಲಾ ಛತ್ರದ ಹಿಂದುಗಡೆಯ ಪಾರ್ಕಿಂಗ್ ಜಾಗ ಶಿರೂರು ಮಠಕ್ಕೆ ಸೇರಿದ್ದು. ಈ ಜಾಗದಲ್ಲಿ ಅಕ್ರಮವಾಗಿ ಅಂಗಡಿ ಮುಂಗಟ್ಟುಗಳನ್ನು ಕಟ್ಟಲಾಗಿದೆ. ಜೊತೆಗೆ, ಪ್ರವಾಸಿ ವಾಹನಗಳಿಗೆ ಭಾರೀ ಶುಲ್ಕ ವಿಧಿಸಲಾಗುತ್ತಿದೆ. ಸುಮಾರು ಐದು ಎಕರೆಯ ಈ ಜಾಗವನ್ನು ನಮ್ಮ ಮಠ ಕೃಷ್ಣಮಠ ಟ್ರಸ್ಟಿಗೆ ದಾನವಾಗಿ ಬರೆದುಕೊಟ್ಟಿದ್ದು ಎಂದು ಶಿರೂರು ಶ್ರೀಗಳು ಹೇಳಿದ್ದಾರೆ.
ಅಷ್ಠ ಮಠಗಳು ಕೃಷ್ಣಮಠ ಟ್ರಸ್ಟಿನ ಸದಸ್ಯರಾಗಿದ್ದಾರೆ
ಅಷ್ಟಮಠಗಳು ಕೃಷ್ಣಮಠ ಟ್ರಸ್ಟಿನ ಸದಸ್ಯರಾಗಿದ್ದಾರೆ. ಇಲ್ಲಿ ಅಕ್ರಮವಾಗಿ ತಲೆ ಎತ್ತಿರುವ ಸುಮಾರು ಹದಿನೈದು ಅಂಗಡಿಗಳಿಂದ ದಿನದ ಶುಲ್ಕವಿಧಿಸಿ ವಸೂಲು ಮಾಡಲಾಗುತ್ತಿದೆ. ಜೊತೆಗೆ, ಪಾರ್ಕಿಂಗ್ ನಿಂದ ಬರುವ ಆದಾಯ ಕಳೆದ ಎರಡು ವರ್ಷಗಳಿಂದ ದೇವಾಲಯಕ್ಕೆ ಹೋಗುತ್ತಿಲ್ಲ, ಪ್ರವಾಸಿಗರಿಗೆ ಇಲ್ಲಿ ತೊಂದರೆ ಕೊಡಲಾಗುತ್ತಿದೆ ಎಂದು ಶಿರೂರು ಶ್ರೀಗಳು ಯಾವುದೇ ಮುನ್ಸೂಚನೆ ನೀಡದೇ ಜೆಸಿಬಿಯಿಂದ ಎಲ್ಲಾ ಅಂಗಡಿಗಳನ್ನು ನೆಲೆಸಮಗೊಳಿಸಿದ್ದಾರೆ.
ಪಂಚಮ ಪರ್ಯಾಯ ಮುಗಿಯಲಿ ಎನ್ನುವ ಕಾರಣಕ್ಕಾಗಿ ಕಾಯುತ್ತಿದ್ದೆ
ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಶಿರೂರು ಶ್ರೀಗಳು, ಪೇಜಾವರ ಶ್ರೀಗಳ ಪಂಚಮ ಪರ್ಯಾಯ ಮುಗಿಯಲಿ ಎನ್ನುವ ಕಾರಣಕ್ಕಾಗಿ ಕಾಯುತ್ತಿದ್ದೆ. ಶ್ರೀಗಳು ನಮಗೆಲ್ಲಾ ಹಿರಿಯರು, ವಯೋವೃದ್ದರು, ಜ್ಞಾನವೃದ್ದರು. ಏನಾದರೂ ಹೇಳಿದರೆ, ಬೇಸರಿಸಿಕೊಂಡು ಉಪಾವಾಸ ಕೂರುತ್ತೇನೆಂದು ಹೇಳುತ್ತಾರೆ. ಪೇಜಾವರ ಶ್ರೀಗಳ ಆಪ್ತರು ಅಕ್ಢರಸ: ಲೂಟಿ ಮಾಡಿದ್ದಾರೆ, ಪೇಜಾವರ ಮಠಕ್ಕೆ ಅವರೇ ದೊಡ್ಡ ಹೆಗ್ಗಣಗಳು - ಶಿರೂರು ಶ್ರೀ.
ಪೇಜಾವರ ಶ್ರೀ ಗಳ ಆಪ್ತರಿಂದಲೇ ಈ ರೀತಿ ಅಕ್ರಮ ಚಟುವಟಿಕೆ
ಪಾರ್ಕಿಂಗ್ ಜಾಗದಲ್ಲಿ ಈ ರೀತಿಯಾಗಿ ಅಕ್ರಮ ಕಟ್ಟಡ ನಿರ್ಮಿಸಿದ್ದು ಎಷ್ಟು ಸರಿ ಎಂದು ಆಕ್ರೋಶ ವ್ಯಕ್ತಪಡಿಸಿರುವ ಶಿರೂರು ಶ್ರೀಗಳು, ಪಾರ್ಕಿಂಗ್ ಜಾಗದಲ್ಲಿ ಅಕ್ರಮ ಕಟ್ಟಡ ತಲೆ ಎತ್ತುವಲ್ಲಿ ಮಠದ ಒಳಗಿನವರ ಕೈವಾಡವಿದೆ.
ಪೇಜಾವರ ಶ್ರೀಗಳ ಆಪ್ತರಿಂದಲೇ ಈ ರೀತಿ ಅಕ್ರಮ ಚಟುವಟಿಕೆ ನಡೆದಿದೆ, ಹಾಗಾಗಿ ಜೆಸಿಬಿ ಮೂಲಕ ಧ್ವಂಸಗೊಳಿಸಿ ತೆರವು ಮಾಡಿಸುತ್ತಿದ್ದೇನೆಂದು ಶಿರೂರು ಶ್ರೀಗಳು ತಮ್ಮ ನಿರ್ಧಾರವನ್ನು ಸಮರ್ಥಿಸಿಕೊಂಡಿದ್ದಾರೆ.
ಪೇಜಾವರ ಶ್ರೀಗಳು ಭಾನುವಾರ ಉಡುಪಿಗೆ ಆಗಮನ
ನನಗೆ ಕೃಷ್ಣ ಮುಖ್ಯಪ್ರಾಣನ ಪೂಜೆ ಮಾಡಲೂ ಬರುತ್ತದೆ, ಜೆಸಿಬಿಯಿಂದ ನೆಲಸಮಗೊಳಿಸಲೂ ಬರುತ್ತದೆ ಎಂದು ಶಿರೂರು ಶ್ರೀಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪರ್ಯಾಯ ಮಹೋತ್ಸವದ ಸಡಗರ ಮುಗಿಯುತ್ತಿದ್ದಂತೆಯೇ ಅಷ್ಟಮಠಗಳಲ್ಲಿ ಬಿರುಕು ಕಾಣಿಸಿಕೊಂಡಿದ್ದು, ಪೇಜಾವರ ಶ್ರೀಗಳು ಭಾನುವಾರ ಉಡುಪಿಗೆ ಆಗಮಿಸಲಿದ್ದಾರೆ. ಪೇಜಾವರ ಶ್ರೀಗಳು ಶಿರೂರು ಶ್ರೀಗಳನ್ನು ಕರೆಸಿ ಮಾತನಾಡಿ, ಶಮನಕ್ಕೆ ಬ್ರೇಕ್ ಹಾಕುವ ಸಾಧ್ಯತೆಯಿದೆ.