ಕೋವಿಡ್ ನಿಯಮ ಗಾಳಿಗೆ ತೂರಿದ ಸಚಿವ ಸುನೀಲ್ ಕುಮಾರ್; ಸಾರ್ವಜನಿಕರಿಂದ ಛೀಮಾರಿ!
ಉಡುಪಿ, ಆಗಸ್ಟ್ 07: ರಾಜ್ಯದಲ್ಲಿ ಕೋವಿಡ್ ಮೂರನೇ ಅಲೆಯ ಆತಂಕ ಎದುರಾಗಿದೆ. ಸೋಂಕು ಪ್ರಕರಣಗಳು ಹೆಚ್ಚಾಗುವ ಸೂಚನೆಯನ್ನು ತಜ್ಞರು ನೀಡಿರುವ ಹಿನ್ನಲೆಯಲ್ಲಿ ರಾಜ್ಯ ಸರ್ಕಾರ ಎಚ್ಚೆತ್ತುಕೊಂಡು ಎಂಟು ಜಿಲ್ಲೆಗಳಲ್ಲಿ ವೀಕೆಂಡ್ ಕರ್ಫ್ಯೂ ಘೋಷಣೆ ಮಾಡಿದೆ. ಇದರ ಜೊತೆಗೆ ರಾಜ್ಯಾದ್ಯಂತ ರಾತ್ರಿ ಕರ್ಫ್ಯೂ ವಿಸ್ತರಣೆ ಮಾಡಿದೆ.
ರಾಜ್ಯದಲ್ಲಿ ಕೇರಳ ಮತ್ತು ಮಹಾರಾಷ್ಟ್ರ ಗಡಿಭಾಗವನ್ನು ಹಂಚಿಕೊಂಡಿರುವ ಎಂಟು ಜಿಲ್ಲೆಗಳಲ್ಲಿ ಕೋವಿಡ್ ಮಾರ್ಗಸೂಚಿಗಳನ್ನು ಸರ್ಕಾರ ಬಿಗಿಗೊಳಿಸಿದೆ. ಆದರೆ ಸರ್ಕಾರದ ನಿಯಮವನ್ನೇ ನೂತನ ಸಚಿವರು ಉಲ್ಲಂಘಿಸಿದ್ದಾರೆ. ರಾಜ್ಯ ಸಚಿವ ಸಂಪುಟಕ್ಕೆ ನೂತನವಾಗಿ ಆಯ್ಕೆಯಾದ ಕಾರ್ಕಳ ವಿಧಾನಸಭಾ ಕ್ಷೇತ್ರದ ಶಾಸಕ ವಿ. ಸುನೀಲ್ ಕುಮಾರ್, ಅಭಿನಂದನಾ ಸಮಾರಂಭದ ನೆಪದಲ್ಲಿ ಸರ್ಕಾರದ ಕೋವಿಡ್ ನಿಯಮವನ್ನು ಮುರಿದಿದ್ದಾರೆ.
ಕರ್ನಾಟಕದಲ್ಲಿ ವಾರಾಂತ್ಯ ಕರ್ಫ್ಯೂ, ರಾತ್ರಿ ಕರ್ಫ್ಯೂ ಮಾರ್ಗಸೂಚಿ ಬಿಡುಗಡೆ
ಉಡುಪಿ ಜಿಲ್ಲೆಯಲ್ಲಿ 144 ಸೆಕ್ಷನ್ ಜಾರಿಯಲ್ಲಿದ್ದರೂ, ಸಚಿವರಿಗೆ ಮಾತ್ರ ಈ ನಿಯಮ ಮಾತ್ರ ಅನ್ವಯವಾಗುವುದೇ ಇಲ್ಲ ಎಂಬಂತಾಗಿದೆ. ಬಡ ಹಾಗೂ ಮಧ್ಯಮ ವರ್ಗದ ಜನರಿಗೆ ಮಾಸ್ಕ್ ಹಾಕದಿದ್ದರೆ ಕೇಸ್ ಹಾಕಿ ವಾಹನ ಸೀಜ್ ಮಾಡುವ ಪೊಲೀಸರು ಮತ್ತು ಜಿಲ್ಲಾಡಳಿತ ಮಾತ್ರ ನೂತನ ಸಚಿವರ ಅಬ್ಬರದ ಅಭಿನಂದನಾ ಸಮಾವೇಶಕ್ಕೆ ಮಾತ್ರ ಕಣ್ಮುಚ್ಚಿ ಕೂತಿದೆ.
ಸಭೆ ಸಮಾರಂಭಗಳಿಗೆ ಅವಕಾಶ ಇಲ್ಲ
ಪ್ರಮಾಣ ವಚನ ಮುಗಿಸಿ ಉಡುಪಿ ಜಿಲ್ಲೆಗೆ ಆಗಮಿಸಿದ ಸಚಿವ ಸುನೀಲ್ ಕುಮಾರ್ ಬರುತ್ತಲೇ ಕೊವೀಡ್ ನಿಯಮಗಳನ್ನು ಗಾಳಿಗೆ ತೂರಿದ್ದಾರೆ. ಉಡುಪಿ ಜಿಲ್ಲೆಯಲ್ಲಿ ಯಾವುದೇ ರಾಜಕೀಯ, ಸಾರ್ವಜನಿಕ ಸಭೆ ಸಮಾರಂಭಗಳಿಗೆ ಅವಕಾಶ ಇಲ್ಲದೇ ಇದ್ದರೂ, ಸಚಿವ ಸುನೀಲ್ ಕುಮಾರ್ ಮಾತ್ರ ಜನ ಜಾತ್ರೆಯೇ ಮಾಡಿದ್ದಾರೆ.
ನೂತನ ಸಚಿವ ಸುನೀಲ್ ಕುಮಾರ್ಗೆ ಅಭಿನಂದನೆ ಸಲ್ಲಿಸುವ ನೆಪದಲ್ಲಿ ಸಾವಿರಾರು ಬಿಜೆಪಿ ಕಾರ್ಯಕರ್ತರು ಸೇರಿದ್ದು, ಬೆರಳಣಿಕೆಯ ಜನರಲ್ಲಿ ಮಾತ್ರ ಮಾಸ್ಕ್ ಕಂಡುಬಂದಿತು. ಸಾಮಾಜಿಕ ಅಂತರ ಇಲ್ಲದೇ ಕೊರೊನಾ ಮೂರನೇ ಅಲೆಯನ್ನು ಅಹ್ವಾನಿಸಿದ್ದಾರೆ.
ಬಿಜೆಪಿ ಶಾಸಕರೂ ಸಾಥ್ ನೀಡಿದ್ದಾರೆ
ನೂತನ ಸಚಿವರ ಕೊರೊನಾ ನಿಯಮ ಉಲ್ಲಂಘನೆಗೆ ದಕ್ಷಿಣ ಕನ್ನಡ ಜಿಲ್ಲೆಯ ಬಿಜೆಪಿ ಶಾಸಕರೂ ಸಾಥ್ ನೀಡಿದ್ದಾರೆ. ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ, ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದ ಶಾಸಕ ವೈ. ಭರತ್ ಶೆಟ್ಟಿಯೂ ಕೋವಿಡ್ ನಿಯಮವನ್ನು ಗಾಳಿಗೆ ತೂರಿದ್ದಾರೆ. ಕಾರ್ಕಳ ತಾಲೂಕಿನ ಬೆಳ್ಮಣ್ನಲ್ಲಿ ಮೊದಲು ಕಾರ್ಯಕರ್ತರು ಅಭಿನಂದನೆ ಕೋರಲು ಸಾವಿರಾರು ಸಂಖ್ಯೆಯಲ್ಲಿ ಸೇರಿದ್ದರೆ, ಸಂಜೆಯ ವೇಳೆ ಉಡುಪಿ ಅಮೃತ ಗಾರ್ಡನ್ನಲ್ಲಿ ಜಿಲ್ಲಾ ಬಿಜೆಪಿ ವತಿಯಿಂದ ಅಭಿನಂದನಾ ಸಮಾವೇಶ ನಡೆದಿದೆ.
ಸಾರ್ವಜನಿಕರಿಂದ ಛೀಮಾರಿ
ಈ ವೇಳೆಯೂ ಸಾವಿರಾರು ಸಂಖ್ಯೆಯಲ್ಲಿ ಬಿಜೆಪಿ ಕಾರ್ಯಕರ್ತರು ಮತ್ತು ಬಿಜೆಪಿ ನಾಯಕರು ಸೇರಿ ಕೊರೊನಾ ನಿಯಮವನ್ನು ಗಾಳಿಗೆ ತೂರಿದ್ದಾರೆ. ತಜ್ಞರ ಎಚ್ಚರಿಕೆಯ ಹಿನ್ನಲೆಯಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಜನ ಸಂದಣಿ ತಪ್ಪಿಸಲು ಕರ್ಫ್ಯೂ ಹೇರಿದರೆ, ಇತ್ತ ಅದೇ ಸರ್ಕಾರದ ಸಚಿವರು ಮಾತ್ರ ಕೊರೊನಾ ಆತಂಕದ ಸಂದರ್ಭದಲ್ಲಿ ಅದ್ಧೂರಿಯಾಗಿ ಅಭಿನಂದನಾ ಕಾರ್ಯಕ್ರಮ ಮಾಡಿ ಸಾರ್ವಜನಿಕರಿಂದ ಛೀಮಾರಿ ಹಾಕಿಸಿಕೊಂಡಿದ್ದಾರೆ.
ಆಗಿರುವ ತಪ್ಪನ್ನು ಸರಿಪಡಿಸಿ ಕೆಲಸ ಮಾಡುತ್ತೇವೆ
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಸಚಿವ ಕೋಟಾ ಶ್ರೀನಿವಾಸ ಪೂಜಾರಿ, ""ಸಚಿವರಾಗಿ ಕೋವಿಡ್ ನಿಯಮಗಳನ್ನು ಇಟ್ಟುಕೊಂಡೇ ನಾವು ಕೆಲಸ ಮಾಡಬೇಕು. ಸಚಿವರಾಗಿ ನಾವು ಮೊದಲ ಬಾರಿ ಜಿಲ್ಲೆಗೆ ಬಂದಿದ್ದೇವೆ. ಕಾರ್ಯಕರ್ತರು, ಜನರು ಬಹಳ ಉತ್ಸಾಹದಿಂದ ಅಭಿನಂದಿಸಲು ಬಂದಿದ್ದಾರೆ. ಆಗಿರುವ ತಪ್ಪನ್ನು ಸರಿಪಡಿಸಿ ಕೆಲಸ ಮಾಡುತ್ತೇವೆ,'' ಅಂತಾ ಕೋಟಾ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ.
ಉಡುಪಿಯಲ್ಲಿ ಕೊರೊನಾ ಪಾಸಿಟಿವ್ ಹೆಚ್ಚಳವಾಗಿರುವ ಹಿನ್ನಲೆಯಲ್ಲಿ ಉಡುಪಿ ಜಿಲ್ಲಾಧಿಕಾರಿ ಜಿ. ಜಗದೀಶ್, ಆಗಸ್ಟ್ 4ನೇ ತಾರೀಖಿನಂದು ಜಿಲ್ಲೆಯಾದ್ಯಂತ ಸೆಕ್ಷನ್ 144(3) ಜಾರಿ ಮಾಡಿದ್ದರು. ಅಲ್ಲದೇ ರಾತ್ರಿ 10 ಗಂಟೆಯಿಂದ ಬೆಳಗ್ಗೆ 5 ಗಂಟೆವರೆಗೆ ನೈಟ್ ಕರ್ಫ್ಯೂವನ್ನೂ ಹೇರಿದ್ದರು. ಜಿಲ್ಲೆಯಲ್ಲಿ ಪಬ್ಗಳಿಗೆ ಅವಕಾಶ ನೀಡದೇ, ಈಜುಕೊಳದಲ್ಲಿ ತರಬೇತಿ ಮಾತ್ರ ಅವಕಾಶ ನೀಡಿದ್ದರು.
Recommended Video
ರಾಜಕೀಯ ಸಮಾರಂಭಗಳಿಗೆ ಅವಕಾಶ ಇಲ್ಲ
ಮೈದಾನದಲ್ಲಿ ವ್ಯಾಯಾಮ ಮಾಡುವ ಸಾರ್ವಜನಿಕರಿಗೆ ಪ್ರವೇಶ ನಿರಾಕರಿಸಿದ್ದು, ಕ್ರೀಡಾಂಗಣದಲ್ಲಿ ಕ್ರೀಡಾಪಟುಗಳ ಅಭ್ಯಾಸಕ್ಕೆ ಅವಕಾಶ ನೀಡಲಾಗಿತ್ತು. ಯಾವುದೇ ರಾಜಕೀಯ, ಸಾರ್ವಜನಿಕ ಸಭೆ- ಸಮಾರಂಭಗಳಿಗೆ ಅವಕಾಶ ಇಲ್ಲ. ಮದುವೆ ಹಾಗೂ ಕೌಟುಂಬಿಕ ಕಾರ್ಯಕ್ರಮ 100 ಜನಕ್ಕೆ ಮಾತ್ರ ಅವಕಾಶವಿದೆ. ದೇವಸ್ಥಾನದಲ್ಲಿ ಜಾತ್ರೆ ಉತ್ಸವ ಮೆರವಣಿಗೆಗೆ ಅವಕಾಶ ಇಲ್ಲ. ಅಲ್ಲದೇ ಸಾರ್ವಜನಿಕ ಸಾರಿಗೆ ವ್ಯವಸ್ಥೆಯಲ್ಲಿ ನಿಂತು ಪ್ರಯಾಣಿಸಿದರೆ ದಂಡ ವಿಧಿಸುವುದಾಗಿ ಉಡುಪಿ ಜಿಲ್ಲಾಧಿಕಾರಿ ಜಿ. ಜಗದೀಶ್ ಆದೇಶ ಹೊರಡಿಸಿದ್ದರು.
ಈ ಹಿಂದೆ ಬಡವರ ಮೇಲೆ ದರ್ಪ ತೋರಿಸಿ ತೀವ್ರ ಟೀಕೆಗೆ ಗುರಿಯಾಗಿದ್ದ ಜಿಲ್ಲಾಧಿಕಾರಿ ಜಿ. ಜಗದೀಶ್, ಈಗ ಸಚಿವರು ಸಾರ್ವಜನಿಕರನ್ನು ಸೇರಿಸಿ ಕಾರ್ಯಕ್ರಮ ಮಾಡಿರೋದಕ್ಕೆ ಏನು ಕ್ರಮ ಕೈಗೊಳ್ಳುತ್ತಾರೆ ಎಂಬುವುದು ಮಾತ್ರ ಜಿಲ್ಲೆಯ ಜನರ ಪ್ರಶ್ನೆಯಾಗಿದೆ.