ಕೊರೊನಾ ಎಫೆಕ್ಟ್: ಕೃಷ್ಣ... ಕೃಷ್ಣ... ಮಠ ನಡೆಸುವುದೂ ಕಷ್ಟ, ಕೋಟಿ ಸಾಲಕ್ಕೆ ಉಡುಪಿ ಕೃಷ್ಣಮಠ ಮೊರೆ!
ಉಡುಪಿ, ಆಗಸ್ಟ್ 31: ಕೊರೊನಾ ವೈರಸ್ ಸಂಕಷ್ಟ ಮತ್ತು ಐದು ತಿಂಗಳುಗಳ ಕಾಲ ಘೋಷಿಸಲ್ಪಟ್ಟಿದ್ದ ಲಾಕ್ ಡೌನ್ ಜನರ ಬದುಕನ್ನು ಮೂರಾಬಟ್ಟೆ ಮಾಡಿದ್ದಷ್ಟೇ ಅಲ್ಲ, ಮಠ-ಮಾನ್ಯಗಳಿಗೂ ಅದರ ಬಿಸಿ ತಟ್ಟಲು ಶುರುವಾಗಿದೆ. ಲಾಕ್ ಡೌನ್ ನಿಂದಾಗಿ ಬಂದ್ ಆಗಿದ್ದ ಉಡುಪಿಯ ಪ್ರಸಿದ್ಧ ಶ್ರೀಕೃಷ್ಣ ಮಠದ ನಿರ್ವಹಣೆಯೂ ಕಷ್ಟವಾಗಿದ್ದು, ಮಠಾಧೀಶರು ಕೃಷ್ಣ ಮಠದ ನಿರ್ವಹಣೆಗೆ ಬ್ಯಾಂಕ್ ಸಾಲದ ಮೊರೆ ಹೋಗಿದ್ದಾರೆ.
Recommended Video
ಸದ್ಯ ಉಡುಪಿಯ ಕೃಷ್ಣಮಠದಲ್ಲಿ ಅದಮಾರು ಮಠಾಧೀಶರಾದ ಈಶಪ್ರಿಯ ತೀರ್ಥ ಶ್ರೀಗಳು ಪರ್ಯಾಯ ನಡೆಸುತ್ತಿದ್ದು, ಒಂದು ವರ್ಷಗಳ ಕಾಲ ನಿರಂತರವಾಗಿ ಶ್ರೀಕೃಷ್ಣ ಪೂಜಾ ಕೈಂಕರ್ಯ ನಡೆಸಿ, ಭಕ್ತರ ಸೇವೆಯಲ್ಲಿ ತೊಡಗಿದ್ದ ಶ್ರೀಗಳು, ಕೊರೊನಾ ಲಾಕ್ ಡೌನ್ ಸಂದರ್ಭದಲ್ಲಿ ಕೃಷ್ಣಮಠವನ್ನೂ ಮುಚ್ಚುವ ನಿರ್ಧಾರ ತೆಗೆದುಕೊಂಡಿದ್ದರು.
ಕೃಷ್ಣನೂರಲ್ಲಿ ಇಂದು ಭಣಭಣ: ಅಷ್ಟಮಿ ಆಚರಣೆ ಮುಂದಿನ ತಿಂಗಳು
ಮಠ ನಿರ್ವಹಣೆ ಕಷ್ಟವಾಗಿದೆ
ಮಾರ್ಚ್ 22 ರಿಂದ ಭಕ್ತರಿಗೆ ಮಠಕ್ಕೆ ಪ್ರವೇಶ ನಿಷೇಧಿಸಲಾಗಿತ್ತು. ಭಕ್ತರೇ ಬಾರದಿದ್ದ ಮೇಲೆ ಮಠ ನಡೆಯುವುದಾದರೂ ಹೇಗೆ? ಸಾಧ್ಯವೇ ಇಲ್ಲ. ಉಡುಪಿಯ ಶ್ರೀ ಕೃಷ್ಣಮಠ ನಡೆಯಬೇಕಿದ್ದರೆ ಭಕ್ತರಿಂದ ಕಾಣಿಕೆ, ದೇಣಿಗೆ ಬರಲೇಬೇಕು. ಆದರೆ ಮಠ ಇನ್ನೂ ಭಕ್ತರಿಗಾಗಿ ತೆರೆದುಕೊಂಡಿಲ್ಲ. ಹೀಗಾಗಿ ಮಠ ನಿರ್ವಹಣೆಯೂ ಕಷ್ಟವಾಗಿದ್ದು, ಪರ್ಯಾಯ ಶ್ರೀಗಳು ಸಾಲಕ್ಕಾಗಿ ಬ್ಯಾಂಕ್ ಕದ ತಟ್ಟಿದ್ದಾರೆ.
ತಿಂಗಳಿಗೆ 40 ಲಕ್ಷ ಖರ್ಚು!
ಪ್ರತೀ ತಿಂಗಳು ಕೃಷ್ಣಮಠದ ನಿರ್ವಹಣೆಗೆ ಮೂವತ್ತರಿಂದ ನಲವತ್ತು ಲಕ್ಷ ರುಪಾಯಿ ಖರ್ಚು ತಗಲುತ್ತದೆ. ಮಠದಲ್ಲಿ ಅಂದಾಜು 300 ರಷ್ಟು ಸಿಬ್ಬಂದಿಗಳಿದ್ದಾರೆ. ಈ ಪೈಕಿ ಕೊರೊನಾ ವೈರಸ್ ಬಳಿಕ ನೂರೈವತ್ತು ಜನ ಮಠದಲ್ಲಿ ಕೆಲಸ ಮಾಡುತ್ತಿದ್ದರೆ, ಅಷ್ಟೇ ಜನ ವರ್ಕ್ ಫ್ರಂ ಹೋಮ್ ನಲ್ಲಿದ್ದಾರೆ. ಅವರೆಲ್ಲರ ಸಂಬಳ, ಊಟ ಇತ್ಯಾದಿ ಖರ್ಚು ದಿನವೊಂದಕ್ಕೆ ಒಂದರಿಂದ ಒಂದೂವರೆ ಲಕ್ಷ ರುಪಾಯಿಯಷ್ಟಾಗುತ್ತದೆ.
ಶ್ರೀಕೃಷ್ಣನ ಬಗ್ಗೆ ನಿಮಗೆ ಗೊತ್ತಿರದ ಕೆಲವು ಸಂಗತಿಗಳು
ಉದ್ಯಾವರದಲ್ಲಿರುವ ಗೋಶಾಲೆಯ ನಿರ್ವಹಣೆ
ಇದರ ಜೊತೆಗೆ ಗೋಶಾಲೆ ಖರ್ಚು, ಎಣ್ಣೆ ಖರ್ಚು, ಪೂಜಾ ಪರಿಕರಗಳ ಖರ್ಚು, ಕರೆಂಟ್ ಬಿಲ್ ಅದೂ ಇದೂ ಎಲ್ಲ ಖರ್ಚು ಇದರಲ್ಲಿ ಸೇರಿದೆ. ಇದಲ್ಲದೆ ಅದಮಾರು ಮಠಾಧೀಶರ ಪರ್ಯಾಯವಾಗಿರುವುದರಿಂದ ಅದಮಾರು ಮಠ, ಅದಮಾರು ಮೂಲಮಠ, ಮಣಿಪುರ ಮಠ, ಉದ್ಯಾವರದಲ್ಲಿರುವ ಗೋಶಾಲೆಯ ನಿರ್ವಹಣೆಯನ್ನೂ ಮಾಡಬೇಕಿದೆ.
ಮಠದಲ್ಲಿ ಮೀಸಲಿದ್ದ ತಿಜೋರಿ ಕರಗಿದೆ
ಇದನ್ನೆಲ್ಲ ಸರಿದೂಗಿಸಿಕೊಂಡು ಹೋಗಲು ಸದ್ಯದ ಪರಿಸ್ಥಿತಿಯಲ್ಲಿ ಸಾಧ್ಯವಾಗುತ್ತಿಲ್ಲ. ಇನ್ನು ಮಾರ್ಚ್ 22 ರಿಂದ ಇಲ್ಲಿಯತನಕ ಪರ್ಯಾಯ ಶ್ರೀಗಳು ಕೃಷ್ಣಮಠದ ನಿರ್ವಹಣೆ ಮಾಡುತ್ತಾ ಬಂದಿದ್ದಾರೆ. ಆದರೆ ಈಗಾಗಲೇ ಮಠದಲ್ಲಿ ಮೀಸಲಿದ್ದ ತಿಜೋರಿ ಕರಗಿದ್ದು, ಒಂದು ಕೋಟಿ ಸಾಲಕ್ಕಾಗಿ ಬ್ಯಾಂಕ್ ಮೊರೆ ಹೋಗಿದ್ದಾರೆ. ಈ ಪೈಕಿ ಮೊದಲ ಕಂತಿನ ಹದಿನೈದು ಲಕ್ಷ ರೂ. ಸಿಕ್ಕಿದ್ದು, ಉಳಿದ ಹಣಕ್ಕಾಗಿ ಪರ್ಯಾಯ ಶ್ರೀಗಳು ಎದುರು ನೋಡುವಂತಾಗಿದೆ.