ವಿವಾಹ ದಿನದಂದು ದಲಿತ ಮನೆಗೆ ಬೆಳಕಾದ ಉಡುಪಿಯ ನವದಂಪತಿಗಳು
ಉಡುಪಿ, ಜನವರಿ 5: ತಮ್ಮ ವಿವಾಹ ದಿನವು ವಿಶೇಷಗಳಿಂದ ಕೂಡಿ, ನೆನಪಿನಲ್ಲಿ ಉಳಿಯಲಿ ಎಂದು ಹಲವು ನವ ದಂಪತಿಗಳು ಅಂದುಕೊಳ್ಳುವುದುಂಟು. ಆದರೆ ಆ ವಿಶೇಷವು ಇನ್ನೊಬ್ಬರ ಬದುಕಿಗೆ ಆಸರೆಯಾಗಿರಲಿ ಅನ್ನುವವರು ಕಡಿಮೆ ಜನ ಇರುತ್ತಾರೆ.
ವೈವಾಹಿಕ ಜೀವನಕ್ಕೆ ಕಾಲಿಟ್ಟ ದಿನವೇ ಉಡುಪಿ ಜಿಲ್ಲೆಯ ಕನ್ನರ್ಪಾಡಿ ನಿವಾಸಿ ಶರಣ್ ಶೆಟ್ಟಿ ಮತ್ತು ನವ್ಯ ಶೆಟ್ಟಿ ಅವರು ಕಳೆದ 30 ವರ್ಷಗಳಿಂದ ವಿದ್ಯುತ್ ಸಂಪರ್ಕ ಇಲ್ಲದ ದಲಿತ ಸಮುದಾಯದ ಲೀಲಾ ಎಂಬುವರ ಮನೆಗೆ ವಿದ್ಯುತ್ ಸಂಪರ್ಕ ಕಲ್ಪಿಸಿ ತಮ್ಮ ವಿವಾಹ ದಿನವನ್ನು ಸಾರ್ಥಕಗೊಳಿಕೊಂಡಿದ್ದಾರೆ.
ಉಡುಪಿ: ಮದುವೆ ಮಂಟಪಕ್ಕೆ ತೆರಳಿ ಬಾಲ್ಯ ವಿವಾಹ ತಡೆ
ಉಡುಪಿ ಸಾರ್ವಜನಿಕ ಗಣೇಶೋತ್ಸವ ಸಮಿತಿ ಕಡಿಯಾಳಿ ಮತ್ತು ಆಸರೆ ಚಾರಿಟೇಬಲ್ ಟ್ರಸ್ಟ್ (ರಿ) ವತಿಯಿಂದ ಈ ಮನೆಗೆ ವಿದ್ಯುತ್ ಸಂಪರ್ಕ ನೀಡಲಾಗಿತ್ತು. ಮದುವೆ ಸಂಪ್ರದಾಯ ಮುಗಿದ ನಂತರ ನೇರವಾಗಿ ಪೆರಂಪಳ್ಳಿಯಲ್ಲಿರುವ ಲೀಲಾ ಅವರ ಮನೆಗೆ ನವದಂಪತಿಗಳು ಆಗಮಿಸಿ ವಿದ್ಯುತ್ ಸಂಪರ್ಕ ವ್ಯವಸ್ಥೆಯನ್ನು ಉದ್ಘಾಟಿಸಿದರು.
ಈ ಮನೆಗೆ ತಗಲಿದ ವಿದ್ಯುತ್ ಸಂಪರ್ಕದ ಸಂಪೂರ್ಣ ವೆಚ್ಚವನ್ನು ನವದಂಪತಿಗಳಾದ ಶರಣ್ ಶೆಟ್ಟಿ ಮತ್ತು ನವ್ಯ ಶೆಟ್ಟಿ ಅವರು ಆಸರೆ ಚಾರಿಟೇಬಲ್ ಟ್ರಸ್ಟ್ ಗೆ ಹಸ್ತಾಂತರಿಸಿದರು.
Recommended Video
ಈ ಸಂದರ್ಭದಲ್ಲಿ ಆಸರೆ ಚಾರಿಟೇಬಲ್ ಟ್ರಸ್ಟಿನ ಪ್ರಧಾನ ಕಾರ್ಯದರ್ಶಿ ಕೆ. ರಾಘವೇಂದ್ರ ಕಿಣಿ, ಕೋಶಾಧಿಕಾರಿ ಸತೀಶ್ ಕೆ ಕುಲಾಲ್, ಚೇತನ್ ಕುಮಾರ್ ಕನ್ನರ್ಪಾಡಿ, ಅನಿಲ್ ಶೇರಿಗಾರ್, ಓವಿನ್, ಅಶ್ವಿನ್ ಶೆಟ್ಟಿ, ಸ್ಥಳೀಯರಾದ ಅರುಣ ಎಸ್ ಪೂಜಾರಿ, ಪ್ರಶಾಂತ್ ಪೆರಂಪಳ್ಳಿ, ಡೆನ್ನಿಸ್ ಪ್ರಸನ್ನ, ಆಕಾಶ್ ಪೂಜಾರಿ, ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆಯ ಯಶೋಧ, ಶರಣ್ ಶೆಟ್ಟಿ ಮತ್ತು ನವ್ಯ ಕುಟುಂಬಸ್ಥರು ಉಪಸ್ಥಿತರಿದ್ದರು.