ಕೊಲ್ಲೂರು ದೇವಾಲಯದಲ್ಲಿ ಕೋಟಿ-ಕೋಟಿ ಲೂಟಿ?
ಉಡುಪಿ, ಮಾರ್ಚ್ 09: ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಾಲಯದಲ್ಲಿ ಅವ್ಯವಹಾರ ನಡೆದಿದೆ ಎಂದು ಈ ಹಿಂದೆಯೂ ಅನೇಕ ಬಾರಿ ಆರೋಪಗಳು ಕೇಳಿಬಂದಿವೆ. ಈಗ ದೇವಾಲಯದಲ್ಲಿ ಅವ್ಯವಹಾರ ನಡೆದಿದೆ ಎಂಬ ಮತ್ತೊಂದು ಆರೋಪ ಕೇಳಿ ಬಂದಿದೆ.
ಮಂಗಳವಾರ ಉಡುಪಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿದ ದೇವಸ್ಥಾನ ಮತ್ತು ಧಾರ್ಮಿಕ ಸಂಸ್ಥೆಗಳ ಮಹಾಸಂಘ ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದಲ್ಲಿ ಬರೋಬ್ಬರಿ 20 ಕೋಟಿಗೂ ಹೆಚ್ಚು ಆರ್ಥಿಕ ಅವ್ಯವಹಾರಗಳು ನಡೆದಿವೆ ಎಂದು ಗಂಭೀರ ಆರೋಪ ಮಾಡಿದೆ.
ಕೊಲ್ಲೂರು: ರೋಪ್ ವೇ ಯೋಜನೆ ಡಿಪಿಆರ್ ತಯಾರಿಗೆ ಚಾಲನೆ
ಮಹಾಸಂಘದ ವಕ್ತಾರ ಗುರುಪ್ರಸಾದ್ ಗೌಡ ಈ ಕುರಿತು ಮಾತನಾಡಿದರು. "ಕೊಲ್ಲೂರು ದೇವಸ್ಥಾನವು ದಿನನಿತ್ಯ ಸಾವಿರಾರು ಭಕ್ತರು ಸಂದರ್ಶಿಸುವ ರಾಜ್ಯದ ಪ್ರಸಿದ್ಧ ದೇವಸ್ಥಾನವಾಗಿದ್ದು, ಮೂಕಾಂಬಿಕಾ ದೇವಸ್ಥಾನದ ಆಡಳಿತ ಮಂಡಳಿ ಮತ್ತು ಸರಕಾರಿ ಅಧಿಕಾರಿ ಸೇರಿ ಕೋಟ್ಯಂತರ ರೂಪಾಯಿ ಲೂಟಿ ಮಾಡುತ್ತಿದ್ದಾರೆ" ಎಂದು ಹೇಳಿದ್ದಾರೆ.
ಕೊಲ್ಲೂರು ದೇವಸ್ಥಾನದ ವತಿಯಿಂದ ಯಕ್ಷಗಾನ ಕಲಾವಿದರಿಗೆ ನೆರವು
"2018-19ನೇ ಸಾಲಿನಲ್ಲಿ ದೇವಾಲಯದ ಹಣದಲ್ಲಿ ಜಿಲ್ಲಾಧಿಕಾರಿಯ ನಿವಾಸದ 23,363.00 ರೂ. ಬಿಲ್ ಅನ್ನು ಪಾವತಿಸಲಾಗಿದೆ. ದೇಣಿಗೆ ರೂಪದಲ್ಲಿ ದೊರೆತ ಬಂಗಾರ ಮತ್ತು ಬೆಳ್ಳಿಯ ಬೆಲೆಬಾಳುವ ಆಭರಣಗಳ ಬಗ್ಗೆ ಆಡಳಿತ ಮಂಡಳಿಯು ನಿಯಮಾನುಸಾರ ನೋಂದಣಿ ಮಾಡಿಸಿಲ್ಲ. 2018-19 ರವರೆಗೆ ಇಂತಹ ದೇಣಿಗೆ ಸ್ವೀಕರಿಸಿದ ಆಭರಣಗಳ ಪಟ್ಟಿಯನ್ನು ಸರಕಾರಿ ಲೆಕ್ಕಪರಿಶೋಧಕರಿಗೆ ಸಲ್ಲಿಸಿಲ್ಲ" ಎಂದು ದೂರಿದರು.
ದಾವಣಗೆರೆ; ಗಲಾಟೆ, ಶ್ರೀ ಸೇವಾಲಾಲ್ ದೇವಾಲಯ ಧ್ವಂಸ
"2016ರಲ್ಲಿ ದೇವಿಯ 4.9 ಕಿಲೋ ಬಂಗಾರದ ಹಾರವನ್ನು ಅಧಿಕಾರಿಯೇ ಕದ್ದು ಸಿಕ್ಕಿಬಿದ್ದಿದ್ದ. ಆ ಅಧಿಕಾರಿಯ ವಿರುದ್ಧ ದೂರು ದಾಖಲಾಗಿ ಬಂಧಿಸಲಾಗಿತ್ತು. ಜವಾಬ್ದಾರಿಯುತ ಅಧಿಕಾರಿಯೇ ಕಳ್ಳತನ ಮಾಡುವಾಗ ದೇವಸ್ಥಾನವನ್ನು ರಕ್ಷಿಸುವವರು ಯಾರು?"ಎಂದು ಪ್ರಶ್ನೆ ಮಾಡಿದ್ದಾರೆ.
"ಆಡಳಿತ ಮಂಡಳಿಯು ಸುಳ್ಳು ಸಿಬ್ಬಂದಿಗಳನ್ನು ತೋರಿಸಿ ದೊಡ್ಡ ಪ್ರಮಾಣದಲ್ಲಿ ಭ್ರಷ್ಟಾಚಾರ ಎಸಗಿದೆ. ನಿಯಮಗಳ ಪ್ರಕಾರ ದೇವಸ್ಥಾನದ ಸಿಬ್ಬಂದಿಗಳ ವಿವರ ಮತ್ತು ಮಾಹಿತಿಗಳನ್ನು ತೆಗೆದಿಡಬೇಕು. ಆದರೆ ಅದನ್ನು ಮಾಡಿಲ್ಲ. ಜಮೀನು ಮತ್ತುಇತರೆ ಆಸ್ತಿಪಾಸ್ತಿಗಳ ಸರಿಯಾದ ಮಾಹಿತಿ ನೋಂದಾಯಿಸಿಕೊಳ್ಳದೇ ಇರುವುದು ಗಂಭೀರ ವಿಚಾರವಾಗಿದೆ. ಜಮೀನುಗಳ ಅತಿಕ್ರಮಣವಾಗುತ್ತಿದೆ" ಎಂದು ಆರೋಪಿಸಿದ್ದಾರೆ.
"ದೇವಾಲಯದ ಸರಕಾರೀಕರಣವನ್ನು ತಕ್ಷಣವೇ ರದ್ದುಪಡಿಸಲು ಹೋರಾಡುವುದು ಪ್ರತಿಯೊಬ್ಬ ಭಕ್ತರ ಕರ್ತವ್ಯ. ಲೂಟಿಕೋರ ಸರಕಾರಿ ಅಧಿಕಾರಿ ಮತ್ತು ಸಿಬ್ಬಂದಿ ವಿರುದ್ಧ ತಕ್ಷಣವೇ ಕ್ರಮ ಕೈಗೊಳ್ಳದಿದ್ದರೆ ರಾಜ್ಯವ್ಯಾಪಿ ಹೋರಾಟ ಮಾಡಲಾಗುವುದು" ಎಂದು ಎಚ್ಚರಿಕೆ ನೀಡಿದರು.