ಉಡುಪಿ ಜಿಲ್ಲಾ ಪ್ರವಾಸಿ ತಾಣ ಬಂದ್, ಕೊಲ್ಲೂರು ಸರಳ ರಥೋತ್ಸವ
ಉಡುಪಿ, ಮಾರ್ಚ್ 17: ಕೊರೊನಾ ಎಮರ್ಜೆನ್ಸಿ ಹಿನ್ನೆಲೆಯಲ್ಲಿ ಉಡುಪಿ ಜಿಲ್ಲೆಯ ಪ್ರವಾಸಿ ತಾಣಗಳ ಮೇಲೆ ನಿಗಾ ಇರಿಸಲಾಗಿದ್ದು, ಜಿಲ್ಲೆಯ ಬಹುತೇಕ ಪ್ರವಾಸಿ ತಾಣಗಳು ಬಂದ್ ಆಗಿವೆ.
Recommended Video
ಹೆಬ್ರಿಯ ಕೂಡ್ಲು ಫಾಲ್ಸ್ ಗೆ ಸಾರ್ವಜನಿಕರ ಭೇಟಿ ತಡೆ ನೀಡಲಾಗಿದೆ. ಉಡುಪಿ ಜಿಲ್ಲೆಯಲ್ಲಿ ಅತೀ ಹೆಚ್ಚು ಪ್ರವಾಸಿಗರು ಭೇಟಿ ನೀಡುವ ಫಾಲ್ಸ್ ಅಂದರೆ ಅದು ಕೂಡ್ಲು ಫಾಲ್ಸ್. ಹೆಬ್ರಿಯಿಂದ ಆಗುಂಬೆಗೆ ತೆರಳುವ ರಸ್ತೆಯಲ್ಲಿ ಕೂಡ್ಲು ಫಾಲ್ಸ್ ಇದೆ. ಈಗ ಶಾಲಾ-ಕಾಲೇಜುಗಳಿಗೂ ರಜೆ ಇದೆ. ಈ ಸಂದರ್ಭ ಯುವಜನತೆ ಇತ್ತ ಬರುವ ಸಾಧ್ಯತೆ ಇರುವ ಕಾರಣದಿಂದಾಗಿ ಪ್ರವೇಶ ನಿರ್ಬಂಧಿಸಾಗಿದೆ.
ಹೀಗಾಗಿ ಫಾಲ್ಸ್ ಪ್ರವೇಶ ದ್ವಾರದಲ್ಲೇ ಅರಣ್ಯ ಇಲಾಖೆಯಿಂದ ಪ್ರವೇಶ ನಿಷೇಧ ಸೂಚನೆಯ ಫಲಕ ಅಳವಡಿಸಲಾಗಿದೆ. ಇನ್ನು ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದಲ್ಲಿ ಇಂದು ನಡೆಯಬೇಕಿದ್ದ ರಥೋತ್ಸವವನ್ನು ಅತ್ಯಂತ ಸರಳವಾಗಿ ನಡೆಸಲಾಯಿತು.
ಪ್ರತಿವರ್ಷ ನಡೆಯುವ ಈ ರಥೋತ್ಸವಕ್ಕೆ ಸಾವಿರಾರು ಭಕ್ತರು ಆಗಮಿಸುವುದು ವಾಡಿಕೆ. ಆದರೆ ಕೊರೊನಾ ಮುನ್ಸೂಚನೆ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಮತ್ತು ದೇವಸ್ಥಾನದ ಆಡಳಿತ ಮಂಡಳಿ ಮುನ್ನೆಚ್ಚರಿಕಾ ಕ್ರಮವಾಗಿ ರಥೋತ್ಸವದಲ್ಲಿ ಭಕ್ತರು ಸೇರದಂತೆ ಈ ಹಿಂದೆಯೇ ಮನವಿ ಮಾಡಿತ್ತು.
ಪ್ರತಿ ವರ್ಷ ರಥೋತ್ಸವ ಸಂದರ್ಭ ಸಾವಿರಾರು ಜನ ಸೇರುವುದು ವಾಡಿಕೆ. ಆದರೆ ಕೊರೊನಾ ಮುನ್ನೆಚ್ಚರಿಕೆ ಹಿನ್ನೆಲೆಯಲ್ಲಿ ಭಕ್ತರು ಉತ್ಸವವನ್ನು ಆದಷ್ಟೂ ಸರಳವಾಗಿ ಮಾಡುವಂತೆ ಜಿಲ್ಲಾಡಳಿತ ಮನವಿ ಮಾಡಿತ್ತು. ಅದರಂತೆ ದೇವರನ್ನು ರಥಾರೋಹಣ ಮಾಡಿ ಪೂಜೆ ಸಲ್ಲಿಸಲಾಯಿತು.
ಈ ಸಂದರ್ಭ ದೇವಸ್ಥಾನ ಸಿಬ್ಬಂದಿ, ಅರ್ಚಕರು ಮಾತ್ರ ಭಾಗಿಯಾಗಿದ್ದರು. ಇದೇ ಮೊದಲ ಬಾರಿಗೆ ರಥೋತ್ಸವ ಮಾಡದೆಯೇ ದೇವಸ್ಥಾನ ಆಡಳಿತ ಮಂಡಳಿ ರಥಾರೋಹಣ ನಡೆಸಿತು.
ಉತ್ಸವ ಮೂರ್ತಿಯನ್ನು ರಥಾರೋಹಣ ಮಾಡಿ ಸಂಪ್ರದಾಯದಂತೆ ಪೂಜೆ ಸಲ್ಲಿಸಲಾಯಿತು. ದೇವಸ್ಥಾನದ ಬಾಗಿಲಿನವರೆಗೆ ರಥ ಎಳೆದು ಸಂಪ್ರದಾಯ ಆಚರಣೆ ನಡೆಸಿದ ಆಡಳಿತ ಮಂಡಳಿ, ಭಕ್ತರಿಗೆ ಕೇವಲ 10 ಮೀಟರ್ ನಷ್ಟು ರಥ ಎಳೆಯಲು ಅವಕಾಶ ನೀಡಿತು.
ಸರಕಾರದ ಆದೇಶ ಪಾಲಿಸಿದ ಆಡಳಿತ ಮಂಡಳಿಯು, ಧಾರ್ಮಿಕ ವಿಧಿ ವಿಧಾನವನ್ನು ಚಾಚೂ ತಪ್ಪದೆ ಪೂರೈಸಿತು. ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನ ಕೊಲ್ಲೂರು ಮೂಕಾಂಬಿಕಾ ಕ್ಷೇತ್ರಕ್ಕೆ ಕೇರಳ ಮತ್ತು ತಮಿಳುನಾಡಿನ ಭಕ್ತರೇ ಅಧಿಕ ಸಂಖ್ಯೆಯಲ್ಲಿದ್ದಾರೆ ಅನ್ನುವುದು ಗಮನಾರ್ಹ ಸಂಗತಿ.